ಅಕ್ರಮ ಸಕ್ರಮ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
ಅಕ್ರಮ ಸಕ್ರಮ ಯೋಜನೆ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಮಂಗಳವಾರ ತಿರಸ್ಕರಿಸಿದೆ.
ಬೆಂಗಳೂರು, ಡಿಸೆಂಬರ್ 13 : ಅಕ್ರಮ ಸಕ್ರಮ ಯೋಜನೆ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಮಂಗಳವಾರ ತಿರಸ್ಕರಿಸಿದೆ.ಅಕ್ರಮ ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಕಾನೂನಿನ ಬಗ್ಗೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
ಮುಖ್ಯ ನ್ಯಾ ಸುಬ್ರೋ ಕಮಲ್ ಮುಖರ್ಜಿ ಹಾಗೂ ಜಸ್ಟೀಸ್ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ. [ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]
ಸರ್ಕಾರದ ಮಹತ್ವಾಕಾಂಕ್ಷಿ ಈ ಯೋಜನೆಯ ಹೊಸ ಕಾನೂನಿಗೆ ಹೈಕೋರ್ಟ್ ನ್ಯಾಯಪೀಠದಿಂದ ಈ ಹಿಂದೆ ತಡೆಯಾಜ್ಞೆ ನೀಡಲಾಗಿತ್ತು. [ನಗರ ಪ್ರದೇಶದಲ್ಲಿ ಅಕ್ರಮ-ಸಕ್ರಮ : ಏನು, ಹೇಗೆ?]
ನಂತರ ತಮಿಳುನಾಡಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಆದರೆ, ಅರ್ಜಿದಾರರು ಇದು ಅಸಂವಿಧಾನಿಕ ಯೋಜನೆ ಎಂದು ವಾದಿಸಿದ್ದರು.[ಅಕ್ರಮ-ಸಕ್ರಮ ದಂಡ ಶುಲ್ಕ ನಿಗದಿ, ರಿಯಾಯಿತಿ]

ಅಲ್ಲದೆ ಅಕ್ರಮವನ್ನು ಸಕ್ರಮಗೊಳಿಸಲು ವಿಧಿಸಲಾಗಿರುವ ಶುಲ್ಕದ ಮೊತ್ತದಲ್ಲೂ ತಾರತಮ್ಯ ಕಂಡು ಬಂದಿದೆ ಎಂದು ಆರೋಪಿಸಿದ್ದರು. ಆದರೆ, ಈಗ ಹೊಸ ಕಾನೂನಿಗೆ ಹೈಕೋರ್ಟಿನ ಬೆಂಬಲ ಸಿಕ್ಕಿದ್ದು, ಅಕ್ರಮ ಸಕ್ರಮ ಅಡಿಯಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಬಹುದಾಗಿದೆ.
ಯಾವುದು ಸಕ್ರಮವಾಗುತ್ತದೆ : ಅನಧಿಕೃತ ಬಡಾವಣೆಗಳಲ್ಲಿ ನಿವೇಶನ, ಭೂ ಉಪಯೋಗಗಳ ಉಲ್ಲಂಘನೆ, ಕಟ್ಟಡದ ಸುತ್ತ ನಿರ್ದಿಷ್ಟ ಜಾಗ ಬಿಡದಿರುವುದು, ನೆಲ ವಿಸ್ತೀರ್ಣ ಪ್ರಮಾಣ ಉಲ್ಲಂಘನೆ ಪ್ರಕರಣಗಳು ಸಕ್ರಮವಾಗಲಿವೆ.
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ, ಉದ್ಯಾನವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ, ನೆಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಸಕ್ರಮ ಮಾಡಲು ಅವಕಾಶವಿಲ್ಲ.
ಚದರ ಮೀಟರ್ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳು ದಂಡ ಶುಲ್ಕವನ್ನು ನಿಗದಿ ಮಾಡುತ್ತವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ದಂಡ ಶುಲ್ಕವಿದ್ದು, ಉಳಿದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ಪ್ರತ್ಯೇಕ ದಂಡ ಶುಲ್ಕವಿರಲಿದೆ.












Click it and Unblock the Notifications