Ration card: ಬಿಪಿಎಲ್ ಕಾರ್ಡ್ ರದ್ದಿಗೆ ಅಸಲಿ ಕಾರಣ ಇದೇ ಎಂದ ಆರ್. ಅಶೋಕ್!
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರ ಹೊಸ ವಿವಾದವನ್ನೇ ಸೃಷ್ಟಿ ಮಾಡಿದೆ. ತಪ್ಪು ಮಾಹಿತಿ ಅಥವಾ ಬಿಪಿಎಲ್ ಕಾರ್ಡ್ ನ ಅರ್ಹತ ಮಿತಿ ಮೀರಿದರವನ್ನು ಗುರುತಿಸಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ಹಾಗೂ ಜನ ಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ರಾಜ್ಯ ಸರ್ಕಾರವು ದಿವಾಳಿಯಾಗಿದ್ದು, ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದೂರಿವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಎಡವಿದೆ. ಇದರಿಂದಲೇ ಆರ್ಥಿಕ ನಷ್ಟವಾಗುತ್ತಿದ್ದು, ಇದನ್ನು ಸರಿದೂಗಿಸಲು ಈ ಕ್ರಮ ಅನುಸರಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯದ ಹೊರೆ ಹೊರಲಾಗದೆ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ.
ತೆರಿಗೆದಾರರಿಗೆ, ಸರ್ಕಾರಿ ನೌಕರರಿಗೆ ಉಚಿತ ಅಕ್ಕಿ ಕೊಡಬೇಕಾ ಎಂದು ಈ ರಾಜ್ಯ ಕಂಡ ಮಹಾನ್ ದಕ್ಷ ಆಡಳಿತಗಾರರ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದರೆ ಶಕ್ತಿ ಗ್ಯಾರೆಂಟಿ ಅಡಿಯಲ್ಲಿ ತೆರಿಗೆದಾರರು, ಸರ್ಕಾರಿ ನೌಕರರು ಉಚಿತ ಬಸ್ಸು ಸೇವೆ ಬಳಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಮುಂದುವರಿದು, ಹಾಗಾದರೆ ಗೃಹಜ್ಯೋತಿ ಗ್ಯಾರೆಂಟಿ ಯೋಜನೆಯಡಿ ತೆರಿಗೆದಾರರು, ಸರ್ಕಾರಿ ನೌಕರರು 200 ಯೂನಿಟ್ ವರೆಗೂ ಉಚಿತ ಕರೆಂಟ್ ಪಡೆಯುತ್ತಿಲ್ಲವೇ. ಇಲ್ಲವೇ ಈ ಹೇಳಿಕೆ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ಮುನ್ಸೂಚನೆಯೇ ಎಂದೂ ಅವರು ಕೇಳಿದ್ದಾರೆ.
ಈ ಎಡಬಿಡಂಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ದೂರದೃಷ್ಟಿ, ಪೂರ್ವಸಿದ್ಧತೆ, ಯೋಜನೆ ಇವ್ಯಾವುದೂ ಇಲ್ಲ. ಕೇವಲ ಚುನಾವಣೆಗೆ ಗೆಲ್ಲಲು ಮನಸ್ಸಿಗೆ ಬಂದ ಹಾಗೆ ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಈಗ ಗ್ಯಾರೆಂಟಿಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ. ಇದೇ ಸತ್ಯ ಎಂದು ಹಾಸ್ಯ ಹಾಗೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ನಿಂದಲೂ ಟ್ವೀಟ್ ಮಾಡಿ ತರಾಟೆ
ಇನ್ನೊಂದು ಕಡೆ ಜೆಡಿಎಸ್ ಸಹ ಟ್ವೀಟ್ಗಳ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅನುದಾನದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೊಳ್ಳುತ್ತಾರೆ. ಮತ್ಯಾಕೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಹಾಗೂ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಮುಂದುವರಿದು ಇತರರು ಕೋಟಿ.. ಕೋಟಿ ಹಣ ಪಡೆಯುತ್ತಿರುವಾಗ ವಿಜಯನಗರವನ್ನೇಕೆ ಕಡೆಗಣಿಸಲಾಗುತ್ತಿದೆ ಎಂದೂ ಕೇಳಿದೆ.
ಖಾಲಿ ಕೈ ಸರ್ಕಾರದ ಹುಸಿ ಭರವಸೆಗಳ ವಿರುದ್ಧ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಅಸಹನೆ ಮತ್ತು ಆಕ್ರೋಶ ನ್ಯಾಯಯೋಚಿತವಾಗಿಯೇ ಇದೆ ಎಂದೂ ಜೆಡಿಎಸ್ ಟ್ವೀಟ್ ಮಾಡಿದೆ.
ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತೆ ಮಾಡಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರವು ವೇದಿಕೆಯಲ್ಲಿ ದೊಡ್ಡ ದೊಡ್ಡ ಹುಸಿ ಭಾಷಣಗಳನ್ನು ಮಾಡುವ ಸಿದ್ದರಾಮಯ್ಯ ಸರ್ಕಾರ ನ್ಯಾಯಯುತವಾಗಿ ಕ್ಷೇತ್ರಗಳಿಗೆ ನಿಧಿ ಹಂಚಿಕೆ ಮಾಡಲು ಕೈಲಾಗದ ದುಸ್ಥಿತಿ ತಲುಪಿದೆ ಎಂದಿದೆ.
ಈ ಸತ್ಯವನ್ನು ಕಾಂಗ್ರೆಸ್ ಶಾಸಕ ಗವಿಯಪ್ಪ ಬಿಚ್ಚಿಟ್ಟಿದ್ದಾರೆ. ಕೊಟ್ಟಿರುವ 12 ಕೋಟಿ ರೂ. ಆಸ್ಪತ್ರೆಗೆ ಸಾಲುತ್ತಿಲ್ಲ.. ಇನ್ನಿತರ ಯೋಜನೆಗಳಿಗೆ ನಾವೇನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಆದರೆ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ನಾಡಿನ ದುರಂತ ಎಂದು ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications