ಕೊರೊನಾ ಸೋಂಕಿತರ ಸಾವು: 3ನೇ ಸ್ಥಾನದಲ್ಲಿ ಕರ್ನಾಟಕ
ಬೆಂಗಳೂರು, ಏಪ್ರಿಲ್ 28: ಕೊರೊನಾ ಸೋಂಕಿನ ಎರಡನೇ ಅಲೆಯು ಅಕ್ಷರಶಃ ದೇಶದ ಜನತೆಯನ್ನು ಭಯದಿಂದ ನಲುಗುವಂತೆ ಮಾಡಿದೆ.
ಪ್ರತಿದಿನ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ವಿಪರೀತವಾಗಿದೆ. ಮಂಗಳವಾರದ ಲೆಕ್ಕ ತೆಗೆದುಕೊಂಡರೆ ಮಹಾರಾಷ್ಟ್ರ ಮತ್ತು ದೆಹಲಿ ನಂತರ ಕೊರೊನಾದಿಂದ ಮೃತಪಟ್ಟವರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಇದುವರೆಗೆ 14 ಸಾವಿರದ 807 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಇದುವರೆಗೆ 15 ಸಾವಿರದ 9 ಮಂದಿ ಮೃತಪಟ್ಟರೆ, ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 66 ಸಾವಿರದ 179 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಏಪ್ರಿಲ್ 25ರವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2 ಸಾವಿರದ 036 ಆಗಿದೆ. ಏಪ್ರಿಲ್ 23ರಂದು ಅತಿಹೆಚ್ಚು 208 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಅನೇಕ ರೋಗಿಗಳು ಹೋಂ ಐಸೊಲೇಷನ್ ಗೆ ಒಳಗಾಗಿದ್ದು ಆಸ್ಪತ್ರೆಗೆ ತಡವಾಗಿ ತಲುಪುವುದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿರುವುದು ಸಹ ಮತ್ತೊಂದು ಕಾರಣವಾಗಿದೆ. ಪಾಸಿಟಿವ್ ಕೇಸುಗಳು ಹೆಚ್ಚಾಗುತ್ತಿದ್ದಂತೆ ಸಾಯುವವರ ಸಂಖ್ಯೆ ಕೂಡ ಅಧಿಕವಾಗಿದೆ. ಸಾವಿನ ಸಂಖ್ಯೆ ಕಡಿಮೆ ಮಾಡಲು ಟೆಸ್ಟಿಂಗ್, ಪತ್ತೆ ಹಚ್ಚುವಿಕೆ ಆದಷ್ಟು ಶೀಘ್ರವಾಗಿ ಮಾಡಬೇಕೆಂದು ತಜ್ಞರು ಹೇಳುತ್ತಾರೆ.
ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಯಾರು ಹೋಂ ಐಸೊಲೇಷನ್ ನಲ್ಲಿರಬೇಕು, ಯಾರು ಆಸ್ಪತ್ರೆಗೆ ದಾಖಲಾಗಬೇಕೆಂದು ಆರಂಭದಲ್ಲಿಯೇ ರೋಗಿಗಳಿಗೆ ಹೇಳಬೇಕು. ಇದನ್ನು ಸರಿಯಾಗಿ ಮಾಡಿದರೆ ಹಲವು ರೋಗಿಗಳನ್ನು ಕಾಪಾಡಬಹುದು ಎಂದು ವೈದ್ಯರು ಹೇಳಿದ್ದಾರೆ.
ಇಷ್ಟು ಕಡಿಮೆ ದಿನದೊಳಗೆ ಕೊರೊನಾದಿಂದ ಹೆಚ್ಚು ಮಂದಿ ಮೃತಪಡಲು ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ, ಆಕ್ಸಿಜನ್ ಪೂರೈಕೆ ಸರಿಯಾಗಿ ಸಿಗದಿದ್ದುದು, ರೆಡಮ್ಡೆಸಿವಿರ್, ಟೊಲಿಸಿಜುಮಾಬ್ಗಳಂತಹ ಔಷಧಿಗಳು ಕೊರೊನಾ ರೋಗಿಗಳಿಗೆ ನೀಡಲು ಸರಿಯಾಗಿ ಸಿಗದೆ ಇರುವುದೇ ಕಾರಣ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications