ಕರ್ನಾಟಕದ ಸೂಪರ್ ಸಿಎಂ ಸುರ್ಜೇವಾಲ: ನಿಖಿಲ್ ಕುಮಾರಸ್ವಾಮಿ ಹೀಗಂದಿದ್ದೇಕೆ?
ಕಾಂಗ್ರೆಸ್ ಶಾಸಕರ ಜತೆ ರಣದೀಪ್ ಸುರ್ಜೇವಾಲ ಒನ್ ಟು ಒನ್ ಮೀಟಿಂಗ್ ನಡೆಸುತ್ತಿರುವ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ ಅವರಿಗೆ ಅಭಿನಂದನೆಗಳು ಎಂದು ನಿಖಿಲ್ ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಖಾರವಾಗಿ ಪೋಸ್ಟ್ ಮಾಡಿ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
ನಮ್ಮ ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು ಅವರಿಗೆ ಜಿಪಿಎ ನೀಡಿದ್ದಾರೆ ಎಂದು ಸದ್ಯದ ಬೆಳವಣಿಗೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಖಾರವಾಗಿ ಪೋಸ್ಟ್ ಮಾಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೊರಹೋಗುತ್ತಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಅವರು ಕುರ್ಚಿಗಾಗಿ ಕಾಯುತ್ತಿದ್ದಾರೆ. ಆದರೆ ಸುರ್ಜೇವಾಲ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಕೈಗೊಂಬೆ ರಾಜ್ಯವನ್ನಾಗಿ ಮಾಡಿಕೊಂಡು, ಒಕ್ಕೂಟ ವ್ಯವಸ್ಥೆಯ ಮತ್ತು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ ಎಂದು ರಾಜ್ಯದಲ್ಲಿ ರಣದೀಪ್ ಸುರ್ಜೇವಾಲ ಅವರ ಒನ್ ಟು ಒನ್ ಸಭೆ ನಡೆಸಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ. ರಾಜ್ಯದ ಚುಕ್ಕಾಣಿಯನ್ನ ರಣದೀಪ್ ಸುರ್ಜೇವಾಲ ಅವರ ಕೈಯಲ್ಲಿ ಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದರೂ, ಸೂಪರ್ ಸಿಎಂ ಸುರ್ಜೇವಾಲ ಆಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜನತಾದಳ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಗೆ 4557 ಕೋಟಿ ಅನುದಾನ ಘೋಷಣೆ, ಇದು ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಂ ಮತ್ತು ಡಿಸಿಎಂ ಶಂಕು ಸ್ಥಾಪನೆ ಮಾಡಿ ಭೂಮಿ ಪೂಜೆ ಮಾಡಿ ಹೋಗಿದ್ದಾರೆ. ಇದು ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಕಾರ್ಯಗತವಾಗುತ್ತೆ ಎನ್ನುವ ನಂಬಿಕೆ ಇಲ್ಲ ಎಂದಿದ್ದಾರೆ.
ಇಂದು ಜಿಲ್ಲೆಯಲ್ಲಿ ಅತೀ ಹೆಚ್ಚು ನಿಂಬೆ ಬೆಳೆಗಾರರಿದ್ದಾರೆ. 8 ಸಾವಿರ ಹೆಕ್ಟೇರ್ ಜಮೀನಿನಲ್ಲಿ ನಿಂಬೆ ಹಣ್ಣು ಬೆಳೆಯುತ್ತಾರೆ. ಆದರೆ ಅವರಿಗೆ ಪ್ರತಿ ಚೀಲಕ್ಕೆ 1 ಸಾವಿರ ಸಿಗುತ್ತಿದೆ. ಅದನ್ನ 4 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ರೈತರು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದ್ದಾರೆ.
ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದೆ ಎಂದು ಹೇಳುತ್ತಾರೆ. ಚುನಾವಣೆಯ ಇತಿಹಾಸಗಳನ್ನು ನೋಡಿದ್ರೆ ಹಳೆ ಮೈಸೂರು ಭಾಗದಲ್ಲಿ ಎಷ್ಟು ಸ್ಥಾನಗಳಿಸಿದರೂ ಅಷ್ಟೇ ಸ್ಥಾನಗಳನ್ನ ನಮ್ಮ ಪಕ್ಷದ ಶಾಸಕರಲ್ಲಿ ಶೇ 50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಿಂದಲೇ ಆಯ್ಕೆಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications