ಮಂಡ್ಯ ಬಿಟ್ಟು ಬೆಂಗಳೂರಿಗೆ ಬರಲಿದ್ದಾರೆ ಮಾಜಿ ಸಂಸದೆ ರಮ್ಯಾ
Recommended Video

ಬೆಂಗಳೂರು, ಜುಲೈ 26: ಮಂಡ್ಯದಲ್ಲಿ ಚುನಾವಣೆ ಗೆಲ್ಲುವ ಮೂಲಕ ರಾಜಕೀಯ ಜರ್ನಿ ಪ್ರಾರಂಭ ಮಾಡಿದ್ದ ರಮ್ಯಾ ಅವರು ಈಗ ತಮ್ಮ ಸ್ವಕ್ಷೇತ್ರ ತ್ಯಜಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಮಂಡ್ಯ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಮ್ಯಾ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಮಂಡ್ಯದ ಕಾಂಗ್ರೆಸ್ ಪ್ರಮುಖ ತಲೆ ಅಂಬರೀಶ್ ಅವರು ಕಾಂಗ್ರೆಸ್ನಿಂದ ದೂರ ಉಳಿದಿರುವುದು ಇದಕ್ಕೆ ಪ್ರಮುಖ ಕಾರಣವಾದರೆ ಸೀಟು ಹಂಚಿಕೆ ವಿಚಾರದಲ್ಲಿ ಮಂಡ್ಯ ಜಿಲ್ಲೆ ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿಗಿರುವ ಕಾರಣ ಹೈಕಮಾಂಡ್ ರಮ್ಯಾಗೆ ಈ ಸೂಚನೆ ನೀಡಿದೆ.

ಕೃಷ್ಣಬೈರೇಗೌಡ ಹೆಗಲಿಗೆ ಗೆಲ್ಲಿಸುವ ಜವಾಬ್ದಾರಿ
ಬೆಂಗಳೂರು ಉತ್ತರ ಕ್ಷೇತ್ರದ ಪ್ರಭಾವಿ ರಾಜಕಾರಣಿ ಆಗಿರುವ ಕೃಷ್ಣಭೈರೇಗೌಡ ಅವರಿಗೆ ರಮ್ಯಾರನ್ನು ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಸ್ವತಃ ಕೃಷ್ಣಬೈರೇಗೌಡ ಅವರೇ ರಮ್ಯಾ ಅವರನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿದ್ದಾರೆ.

ಉತ್ತರ ಕ್ಷೇತ್ರ ರಮ್ಯಾಗೆ ಸೇಫಾ?
ಬ್ಯಾಟರಾಯನಪುರ, ಹೆಬ್ಬಾಳ, ಕೆ.ಆರ್.ಪುರಂ, ದಾಸರಹಳ್ಳಿ, ಯಶವಂತಪುರ, ಮಲ್ಲೇಶ್ವರ ಕ್ಷೇತ್ರಗಳು ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು ಇವೆಲ್ಲಾ ಬಹುತೇಕ ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳೇ ಆಗಿವೆ. ಹಾಗಾಗಿ ಬೆಂಗಳೂರು ಉತ್ತರ ಕ್ಷೇತ್ರವು ರಮ್ಯಾಗೆ ಸೇಫ್ ಎನ್ನಲಾಗುತ್ತಿದೆ.

ಹೈಕಮಾಂಡ್ನಿಂದ ವಿಶೇಷ ಸೂಚನೆ
ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಆಗಿರುವ ರಮ್ಯಾ ಅವರನ್ನು ಲೋಕಸಭೆಗೆ ಆಯ್ಕೆ ಮಾಡಲೇಬೇಕು ಎಂದು ಹೈಕಮಾಂಡ್ ವಿಶೇಷ ಸೂಚನೆ ನೀಡಿದೆ ಎನ್ನಲಾಗಿದೆ. ಜೊತೆಗೆ ನಂದನ್ ನೀಲಕೆಣಿ ಅವರಿಗೆ ಈ ಬಾರಿಯೂ ಟಿಕೆಟ್ ನೀಡಲಿದ್ದು ಅವರನ್ನೂ ಗೆಲ್ಲಿಸುವಂತೆ ಆಜ್ಞೆ ನೀಡಿದ್ದಾರೆ.

ಮಂಡ್ಯದಲ್ಲಿ ರಮ್ಯಾ ಬಗ್ಗೆ ಅಪಸ್ವರ
ಗಾಡ್ ಫಾದರ್ ಅಂಬರೀಶ್ ಅವರನ್ನು ಎದುರು ಹಾಕಿಕೊಂಡ ರಮ್ಯಾ ಬಗ್ಗೆ ಮಂಡ್ಯದಲ್ಲಿ ಭಾರಿ ಅಸಮಾಧಾನವಿದ್ದು. ಮಂಡ್ಯದಿಂದ ಟಿಕೆಟ್ ಸಿಕ್ಕರೂ ಗೆಲುವು ಕಷ್ಟವೇ ಎನ್ನಲಾಗುತ್ತಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಪ್ರಚಾರ ಕೂಡ ಮಾಡದೇ ಇದ್ದದ್ದು ಸಹ ಸ್ಥಳೀಯ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ.

ಹಳೆ ಮೈಸೂರು ಭಾಗ ಜೆಡಿಸ್ಗೆ
ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಿಕೆಯ ಬಗ್ಗೆ ಪ್ರಾಥಮಿಕ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿದೆ ಎನ್ನಲಾಗಿದೆ. ಕಾಂಗ್ರೆಸ್ 18 ಜೆಡಿಎಸ್ 10 ಸೀಟುಗಳಲ್ಲಿ ಸ್ಪರ್ಧಿಸಲಿದೆ.












Click it and Unblock the Notifications