ಬ್ರೇಕಿಂಗ್: ತಣ್ಣಗಾದ ರಮೇಶ್ ಜಾರಕಿಹೊಳಿ? ಆಪ್ತರ ಮೂಲಕ ಡಿಕೆಶಿಗೆ ಗೌಪ್ಯ ಸಂದೇಶ
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿದವನು ನಾನೇ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆ ನಂತರ ಯಡಿಯೂರಪ್ಪನವರ ಸರಕಾರದ ಅವಧಿಯಲ್ಲೂ ಸಂಪತ್ ಭರಿತ ಜಲಸಂಪನ್ಮೂಲ ಖಾತೆಯನ್ನು ನಿಭಾಯಿಸುತ್ತಿದ್ದರು.
ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಚುನಾವಣೆಯ ವೇಳೆ ಆರಂಭವಾದ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ವೈಮನಸ್ಸು ಯಾವ ಹಂತಕ್ಕೆ ಬಂದು ನಿಂತಿತ್ತು ಎನ್ನುವುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ.
ಡಿಕೆಶಿ ಮೇಲಿನ ಜಿದ್ದಿನಿಂದ ಅವರು ನಿಭಾಯಿಸುತ್ತಿದ್ದ ಖಾತೆ, ವಿಧಾನಸೌಧದಲ್ಲಿ ಅವರು ನಿರ್ವಹಿಸುತ್ತಿದ್ದ ಕೊಠಡಿಯನ್ನೇ ಪಡೆದುಕೊಂಡಿದ್ದ ರಮೇಶ್ ಜಾರಕಿಹೊಳಿ, ಬೆಂಗಳೂರಿನ ಐಷಾರಾಮಿ ಏರಿಯಾ ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮನೆಯ ಪಕ್ಕದ ನಿವಾಸವನ್ನೂ ಖರೀದಿಸಿದ್ದರು.
ಅಶ್ಲೀಲ ಸಿಡಿ ವಿಚಾರದಲ್ಲಿ ತಗಾಲಾಕಿಕೊಂಡು ತಮ್ಮ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ಇಟ್ಟುಕೊಂಡಿರುವ ರಮೇಶ್ ಜಾರಕಿಹೊಳಿ, ತಮ್ಮ ಈ ಹಿನ್ನಡೆಗೆ ಡಿಕೆಶಿಯೇ ಕಾರಣ ಎಂದು ಪರೋಕ್ಷವಾಗಿ ಸಿಡಿಮಿಡಿಗೊಂಡಿದ್ದರು. ಇವರಿಬ್ಬರ ನಡುವಿನ ಮನಸ್ತಾಪ ಹೀಗೇ ಮುಂದುವರಿಲಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿ, ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.

ಕಾಂಗ್ರೆಸ್ಸಿಗೆ ಕೈಕೊಟ್ಟು ಬಿಜೆಪಿಗೆ ಸೇರಿರುವ ಸಚಿವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ
ಕಾಂಗ್ರೆಸ್ಸಿಗೆ ಕೈಕೊಟ್ಟು ಬಿಜೆಪಿಗೆ ಸೇರಿರುವ ಸಚಿವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ರಮೇಶ್ ಜಾರಕಿಹೊಳಿಯ ಆಪ್ತರೊಬ್ಬರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ಡಿಕೆಶಿ ಕೂಡಾ ಖಚಿತ ಪಡಿಸಿದ್ದಾರೆ. ಹಾನಗಲ್ ಮತ್ತು ಸಿಂಧಗಿ ಎರಡು ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯ ಹೊತ್ತಿನಲ್ಲಿ ಈ ವಿದ್ಯಮಾನ ಕುತೂಹಲಕ್ಕೆ ಕಾರಣವಾಗಿದೆ.

ರಮೇಶ್ ಜಾರಕಿಹೊಳಿಯವರ ಆಪ್ತರೊಬ್ಬರು ನನ್ನನ್ನು ಭೇಟಿಯಾಗಿರುವುದು ಹೌದು
"ರಮೇಶ್ ಜಾರಕಿಹೊಳಿಯವರ ಆಪ್ತರೊಬ್ಬರು ನನ್ನನ್ನು ಭೇಟಿಯಾಗಿರುವುದು ಹೌದು. ಏನೇನೋ ವಿಚಾರಗಳನ್ನು ನನ್ನ ಬಳಿ ಚರ್ಚಿಸಿದ್ದಾರೆ, ಕೆಲವೊಂದು ರಮೇಶ್ ಜಾರಕಿಹೊಳಿಯವರ ಸಂದೇಶಗಳನ್ನೂ ತಿಳಿಸಿದ್ದಾರೆ. ಗೌಪ್ಯವಾಗಿ ನಾನು ಅದನ್ನು ಇಟ್ಟುಕೊಳ್ಳಬೇಕಾಗಿರುವುದರಿಂದ, ಆ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಯವರು ದೆಹಲಿಯಲ್ಲಿ ಬೀಡು ಬಿಟ್ಟು ನಾಯಕರುಗಳು
ರಮೇಶ್ ಜಾರಕಿಹೊಳಿಯವರು ದೆಹಲಿಯಲ್ಲಿ ಬೀಡು ಬಿಟ್ಟು ನಾಯಕರುಗಳನ್ನು ಭೇಟಿಯಾಗುತ್ತಿದ್ದಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ಅದೆಲ್ಲಾ ನನಗೆ ಗೊತ್ತಿಲ್ಲ, ಅವರ ಆಪ್ತರೊಬ್ಬರು ನನ್ನನ್ನು ಭೇಟಿಯಾಗಿರುವುದನ್ನು ನಿರಾಕರಿಸಲಾರೆ. ಕೆಲವೊಂದು ಗೌಪ್ಯವಾದ ಸಂದೇಶಗಳು ಬಂದಿರುತ್ತವೆ, ಅದನ್ನು ಈಗ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಆರೆಸ್ಸಸ್ ನವರ ಕಾರ್ಯಾಚರಣೆ ಶೈಲಿ. ಇದನ್ನೇ ನಾವು ಕೇಸರಿಕರಣ ಎಂದು ಹೇಳುತ್ತಿದ್ದೇವೆ
"ಆರೆಸ್ಸಸ್ ನವರ ಕಾರ್ಯಾಚರಣೆ ಶೈಲಿ. ಇದನ್ನೇ ನಾವು ಕೇಸರಿಕರಣ ಎಂದು ಹೇಳುತ್ತಿದ್ದೇವೆ. ಇದು ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ಅನ್ನದಾತನಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿದೆ. ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ" ಎಂದು ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರಕಾರದ ವಿರುದ್ದ ಮತ್ತೆ ಕಿಡಿಕಾರಿದ್ದಾರೆ.
ಅಶ್ಲೀಲ ಸಿಡಿ ಬಿಡುಗಡೆ ಸಂಬಂಧ ಎಸ್ಐಟಿ ತನಿಖೆ ಪೂರ್ಣಗೊಂಡಿರುವ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಎಸ್ಐಟಿ ತನಿಖೆ ಮುಂದಿಟ್ಟುಕೊಂಡು ಸಚಿವ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಲು ನಿರಾಸಕ್ತಿ ತೋರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.












Click it and Unblock the Notifications