ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು
Recommended Video

ಬೆಂಗಳೂರು, ಡಿಸೆಂಬರ್ 20 : ಗೋಕಾಕ್ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ, ಪುನಾರಚನೆಗೆ ದಿನಾಂಕ ನಿಗದಿಯಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿವಾಸದಲ್ಲಿ ಗುರುವಾರ ಸಂಜೆ ಸಭೆ ನಡೆಯಲಿದೆ. ನಾಲ್ವರು ಸಚಿವರನ್ನು ಸಂಪುಟದಿಂದ ಕೈ ಬಿಡಲು ರಾಜ್ಯ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಹೈಕಮಾಂಡ್ ನಾಯಕರ ಒಪ್ಪಿಗೆ ಬೇಕು. ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಸರ್ಕಾರ ಮತ್ತು ಪಕ್ಷದ ಚಟುವಟಿಕೆಗಳಿಂದ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ದೂರವಾಗಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹಬ್ಬಿತ್ತು. ಅಂತಿಮವಾಗಿ ಅವರೇ ಈ ಸುದ್ದಿಗಳನ್ನು ತಳ್ಳಿಹಾಕಿದ್ದರು. ಸಚಿವ ಸ್ಥಾನ ಕೈ ತಪ್ಪಲು 5 ಕಾರಣಗಳು ಇಲ್ಲಿವೆ....

ಸಂಪುಟ ಸಭೆಗೆ ಸತತ ಗೈರು
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಸಂಪುಟ ಸಭೆಗೆ ಸತತವಾಗಿ ಗೈರು ಹಾಜರಾಗುತ್ತಿದ್ದಾರೆ. ಇದುವರೆಗೂ ನಡೆದ 13 ಸಂಪುಟ ಸಭೆಯಲ್ಲಿ 3ಕ್ಕೆ ಮಾತ್ರ ಅವರು ಹಾಜರಾಗಿದ್ದಾರೆ. ಅದರಲ್ಲೂ ಒಂದು ಸಭೆಯಿಂದ ಅವರು ಅರ್ಧಕ್ಕೆ ಎದ್ದು ಹೋಗಿದ್ದಾರೆ. ಆದ್ದರಿಂದ, ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.

ಸತತ ಸಂಪುಟ ಸಭೆಗೆ ಗೈರಾದರೆ ಕ್ರಮ
ರಮೇಶ್ ಜಾರಕಿಹೊಳಿ ಅವರು ಸತತವಾಗಿ ಸಂಪುಟ ಸಭೆಗೆ ಗೈರಾಗುತ್ತಿದ್ದಾರೆ. ವಿದೇಶ ಪ್ರವಾಸ, ಅನಾರೋಗ್ಯದ ಸಮಸ್ಯೆ ಇದ್ದರೆ ಹೀಗೆ ಗೈರಾಗಬಹುದು. ಸಚಿವರು ಕರ್ನಾಟಕದಲ್ಲಿದ್ದರೂ ಸಭೆಗೆ ಗೈರಾಗುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಚಿವ ಸ್ಥಾನ ಕಳೆದುಕೊಳ್ಳಬಹುದು.

ಪಕ್ಷದ ಚಟುವಟಿಕೆಗಳಿಂದ ದೂರ
ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಪಿಎಲ್ಡಿ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಿಂದಲೂ ದೂರವಾಗಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ನಡೆದ ಶಾಸಕಾಂಗ ಸಭೆಗೂ ಅವರು ಗೈರು ಹಾಜರಾಗಿದ್ದರು. ಆದ್ದರಿಂದ, ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಪಕ್ಷದಲ್ಲಿ ಅಸಮಾಧಾನದ ವಾತಾವರಣ
ಪಕ್ಷದಲ್ಲಿ ಅಸಮಾಧಾನದ ವಾತಾವರಣವಿದೆ ಎಂದು ಬಿಂಬಿಸಲು ಅವರು ಪ್ರಯತ್ನ ನಡೆಸುತ್ತಿದ್ದಾರೆ. ಹಲವಾರು ಬಾರಿ ಅತೃಪ್ತ ಶಾಸಕರ ಸಭೆಯನ್ನು ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ನಿವಾಸದಲ್ಲಿಯೇ ಕರೆದಿದ್ದಾರೆ. ಆದ್ದರಿಂದ, ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಸತೀಶ್ ಜಾರಕಿಹೊಳಿ ಸಂಪುಟಕ್ಕೆ
ರಮೇಶ್ ಜಾರಕಿಹೊಳಿ ಅವರ ಬದಲು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು ಸಂಪುಟ ಸೇರಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಆದರೆ, ಈ ಬಗ್ಗೆ ಹೈಕಮಾಂಡ್ ನಾಯಕರು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಗುರುವಾರ ಸಂಜೆ 4 ಗಂಟೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಿಗದಿಯಾಗಿದೆ.











Click it and Unblock the Notifications