ರಾಮಾನುಜಾಚಾರ್ಯರ 1000ನೇ ಜಯಂತಿಗೆ 500 ಕೋಟಿ ರು.
ಮೇಲುಕೋಟೆ, ಜುಲೈ 07: ವೈಷ್ಣವರ ಪವಿತ್ರ ಕ್ಷೇತ್ರ ಮೇಲುಕೋಟೆ ಅಭಿವೃದ್ಧಿ ಹಾಗೂ ವಿಶಿಷ್ಟಾದೈತ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರ 1,000ನೇ ಜಯಂತಿ ಆಚರಣೆಗಾಗಿ 500 ಕೋಟಿ ರು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಸಿದ್ದರಾಮಯ್ಯ ಅವರು ತಮ್ಮ ಮುಂದಿನ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. 500 ಕೋಟಿ ರು ಸಿಕ್ಕರೆ ಹೆಚ್ಚು ವಿಜೃಂಭಣೆಯಿಂದ ಆಚರಣೆ, ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಪಂಡವಾಪುರ (ಕಂದಾಯ) ಸಹಾಯಕ ಆಯುಕ್ತರಾದ ಎಚ್ ಎಲ್ ನಾಗರಾಜ್ ಅವರು ಹೇಳಿದ್ದಾರೆ. [ನೆನಪನ್ನು ಮೆಲುಕು ಹಾಕಿಸುವ ಮೇಲುಕೋಟೆ]

ವಿವಿಧ ಕ್ಷೇತ್ರಗಳ ಅಧಿಕಾರಿಗಳು, ವಿವಿಧ ದೇಗುಲಗಳ ಅರ್ಚಕರು, ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಸಭೆ ಸೇರಿ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಈ ಬಗ್ಗೆ ವಿಸ್ತೃತ ಮನವಿ ಹಾಗೂ ನೀಲನಕ್ಷೆಯನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು. 500 ಕೋಟಿ ರು ಅನುದಾನಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಈ ಮನವಿ ಪತ್ರದಲ್ಲಿ 2017ರಲ್ಲಿ ಶ್ರೀರಾಮಾನುಜಾಚಾರ್ಯರ 1,000ನೇ ಜಯಂತಿ ಆಚರಿಸಲಾಗುತ್ತದೆ. ಇದಕ್ಕೂ ಮುನ್ನ ಜಕ್ಕನಹಳ್ಳಿ ಸರ್ಕಲ್ ನಲ್ಲಿ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪಿಸಲು ಕೋರಲಾಗಿದೆ. ಇದಲ್ಲದೆ ಕನಕ ಗೋಪುರ, ಕುಡಿಯುವ ನೀರಿನ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಯೋಗಾನರಸಿಂಹ ಸ್ವಾಮಿ ದೇಗುಲದ ರಾಜ ಗೋಪುರ ದುರಸ್ತಿ, ಪ್ರವಾಸಿಗರಿಗೆ ತಂಗುದಾಣ, ಮ್ಯೂಸಿಯಂ ಸ್ಥಾಪನೆ, ಮೇಲುಕೋಟೆಯ 108 ಕೊಳಗಳ ಸ್ವಚ್ಛತೆ, ಅಭಿವೃದ್ಧಿ, ನಿರ್ವಹಣೆ, ದೇಗುಲಕ್ಕೆ ಹೊಸ ರಥ ಹೀಗೆ ಅನೇಕ ಯೋಜನೆಗಳು ಸೇರಿವೆ ಎಂದು ಮಂಡ್ಯ ಜಿಲ್ಲಾಡಳಿತ ಹೇಳಿದೆ.












Click it and Unblock the Notifications