ನಿತ್ಯಾನಂದ ಸ್ವಾಮಿ ಆಶ್ರಮದ ಭೂಮಿ ಮರು ಸರ್ವೆ
ರಾಮನಗರ, ನ.14 : ಬಿಡದಿ ಧ್ಯಾನಪೀಠದ ಸ್ವಯಂ ಘೋಷಿತ ದೇವಮಾವನ ನಿತ್ಯಾನಂದ ಸ್ವಾಮಿಗೆ ಹೊಸ ಸಂಕಷ್ಟ ಎದುರಾಗಿದೆ. ನಿತ್ಯಾನಂದ ಆಶ್ರಮ ವಿರುವ ಜಾಗದ ಮರು ಸರ್ವೆ ಕಾರ್ಯ ನಡೆಸುವಂತೆ ರಾಮನಗರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಕುರಿತು ಆಶ್ರಮಕ್ಕೂ ನೋಟಿಸ್ ಜಾರಿಗೊಳಿಸಲಾಗಿದೆ.
ರಾಮನಗರ ಜಿಲ್ಲಾಧಿಕಾರಿ ಎಫ್.ಎಂ.ಜಮಾದಾರ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಬಿಡದಿ ಧ್ಯಾನಪೀಠವಿರುವ ಸುಮಾರು 23 ಎಕರೆ ಭೂಮಿ ಮತ್ತು ರಾಮನಗರ ತಾಲೂಕಿನ ಕಲ್ಲುಗೊಪನಹಳ್ಳಿಯಲ್ಲಿರುವ ಸರ್ವೆ ನಂ.21ರಲ್ಲಿನ ಭೂಮಿಯ ಮರು ಸರ್ವೆ ನಡೆಸಲು ಆದೇಶ ನೀಡಿದ್ದಾರೆ.

ಮಂಜುನಾಥ್ ಎನ್ನುವವರು ರಾಮನಗರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ನಿತ್ಯಾನಂದ ಆಶ್ರಮವಿರುವ ಜಾಗ ಮತ್ತು ಕಲ್ಲುಗೊಪನಹಳ್ಳಿಯಲ್ಲಿ ಭೂಮಿಯ ಸರ್ವೆ ಕಾರ್ಯ ಸರಿಯಾಗಿ ನಡೆದಿಲ್ಲ. ತಹಶೀಲ್ದಾರ್ ಅವರು ಟಿಪ್ಪಣಿ ಮಾಡದೆ ಜಮೀನನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. [ನಿತ್ಯಾನಂದ ಸ್ವಾಮಿ ವಿಚಾರಣೆ ನ.26ಕ್ಕೆ]
ಈ ದೂರಿನ ಅನ್ವಯ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಮರು ಸರ್ವೆ ಕಾರ್ಯಕ್ಕೆ ಆದೇಶ ನೀಡಿದ್ದು, ಈ ಕುರಿತು ನಿತ್ಯಾನಂದ ಸ್ವಾಮಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಆರು ಜನ ಅಧಿಕಾರಿಗಳ ತಂಡ ಬಿಡದಿ ಧ್ಯಾನಪೀಠಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಸರ್ವೆ ಕಾರ್ಯ ಆರಂಭವಾಗಲಿದೆ.
ಹಿಂದೆಯೂ ಆರೋಪ ಕೇಳಿಬಂದಿತ್ತು : ಬಿಡದಿಯಲ್ಲಿರುವ ಆಶ್ರಮವು ಸುಮಾರು 23 ಎಕರೆ ಪ್ರದೇಶದಲ್ಲಿದೆ. ಇದರಲ್ಲಿ ಎರಡು ಎಕರೆ ಭೂಮಿ ಮಾತ್ರ ಕಾನೂನು ಬದ್ಧವಾಗಿದ್ದು, ಉಳಿದ ಭೂಮಿಯನ್ನು ಅಕ್ರಮವಾಗಿ ನಿತ್ಯಾನಂದ ಸ್ವಾಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ಜಿಲ್ಲಾಧಿಕಾರಿ ಮರು ಸರ್ವೆಗೆ ಆದೇಶ ನೀಡಿರುವುದರಿಂದ ಸತ್ಯಾಂಶ ಹೊರಬರಲಿದೆ.












Click it and Unblock the Notifications