ರಾಮಲಿಂಗಾ ರೆಡ್ಡಿ ರಾಜೀನಾಮೆ: ಕೊನೆಗೂ ಕುಚುಕು ಆಸೆ ನೆರವೇರಿಸುವ ಭರವಸೆ ನೀಡಿದ ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು, ಜೂನ್ 5: ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಸೃಷ್ಟಿಯಾಗಿರುವ ರಾಜಕೀಯ ಹೈಡ್ರಾಮಾ ಹಾಗೂ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ಮೌನ ಮುರಿದಿದ್ದಾರೆ. ಅವರು ನನ್ನ ಕುಚುಕು, ಅವರ ಆಸೆ ಈಡೇರಿಸುವುದು ನನ್ನ ಕರ್ತವ್ಯವಾಗಿ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, 'ರಾಮಲಿಂಗಾರೆಡ್ಡಿ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅವರು ನನ್ನ ಆಪ್ತ ಸ್ನೇಹಿತರಾಗಿದ್ದು, ಅವರ ಅಸಮಾಧಾನವನ್ನು ಶೀಘ್ರದಲ್ಲೇ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗುವುದು,' ಎಂದು ಭರವಸೆ ನೀಡಿದ್ದಾರೆ.

ರಾಮಲಿಂಗಾ ರೆಡ್ಡಿ ಬೇಡಿಕೆಗೆ ಸಿಎಂ ಪ್ರತಿಕ್ರಿಯೆ
ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ನೀಡಿರುವುದಕ್ಕೆ ಅವರು ಅಸಮಾಧಾನಗೊಂಡಿರುವ ವಿಚಾರವಾಗಿ ಮಾತನಾಡಿದ ಸಿಎಂ, 'ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನೀಡಿರುವ ಇಲಾಖೆಯ ಕೆಲಸದ ನಿಮಿತ್ತ ಅವರು ಹಳ್ಳಿಗಳಲ್ಲೆಲ್ಲಾ ಹೋಗಿ ತಿರುಗಾಡಿ ಕೆಲಸ ಮಾಡಲು ಈ ವಯಸ್ಸಿನಲ್ಲಿ ಕೊಂಚ ಕಷ್ಟವಾಗಬಹುದು ಎನ್ನುವುದು ಅವರ ಅಭಿಪ್ರಾಯವಾಗಿದೆ. ಹೀಗಾಗಿ ಹಳ್ಳಿಗಳಿಗೆ ಪ್ರವಾಸ ಮಾಡುವ ಬದಲಾಗಿ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡಬಹುದಾದ ಬೇರೆ ಯಾವುದಾದರೂ ಇಲಾಖೆಯನ್ನು ನೀಡಿ ಎನ್ನುವುದು ಅವರ ಆಶಯವಾಗಿದೆ,' ಎಂದು ಸ್ಪಷ್ಟಪಡಿಸಿದರು.
'ಯಾರೂ ಆತಂಕ ಪಡುವ ಅಗತ್ಯವಿಲ್ಲ'
ಮುಂದುವರಿದು ಮಾತನಾಡಿದ ಡಿಕೆಶಿ ಅವರು, 'ಈ ವಿಷಯವಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ರಾಮಲಿಂಗಾರೆಡ್ಡಿ ಅವರು ಕೇವಲ ಹಿರಿಯ ನಾಯಕರಷ್ಟೇ ಅಲ್ಲ, ನನ್ನ ಅತ್ಯಂತ ಆಪ್ತ ಗೆಳೆಯ. ನಮ್ಮ ಇಡೀ ಸಚಿವ ಸಂಪುಟದಲ್ಲಿ ನಾವಿಬ್ಬರು ಅತ್ಯಂತ ನಿಕಟ ಸ್ನೇಹಿತರಾಗಿದ್ದೇವೆ. ನಾನು ಅವರೊಂದಿಗೆ ಖುದ್ದಾಗಿ ಕುಳಿತು ಚರ್ಚೆ ನಡೆಸಲಿದ್ದೇನೆ. ಅವರ ಸಮಸ್ಯೆಯನ್ನು ಆಲಿಸಿ ಶೀಘ್ರದಲ್ಲೇ ಅದನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು,' ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನ ಮಾಡಿದರು.
ನೂತನ ಸಂಪುಟದಲ್ಲಿ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ತೀವ್ರ ಪಟ್ಟು ಹಿಡಿದಿದ್ದರು. ಆದರೆ, ಹೈಕಮಾಂಡ್ ಆ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಿ, ರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿಯನ್ನು ವಹಿಸಿತ್ತು. ಇದರಿಂದ ಬೇಸರಗೊಂಡಿದ್ದ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಸ್ವತಃ ಮಧ್ಯಪ್ರವೇಶಿಸಿದ್ದು, ಹಿರಿಯ ನಾಯಕನ ಮನವೊಲಿಸಿ ಇಲಾಖೆಯಲ್ಲಿ ಅದಲು-ಬದಲು ಮಾಡುವ ಮೂಲಕ ಸಂಪುಟದ ಮೊದಲ ಭಿನ್ನಮತವನ್ನು ಶಮನಗೊಳಿಸಲು ಮುಂದಾಗಿದ್ದಾರೆ.












Click it and Unblock the Notifications