ಗೋವಾ ಹೆಸರಲ್ಲಿ ಏನಿದೆಯೋ ಅದು ಕಾರ್ಯರೂಪಕ್ಕೂ ಬರಲಿ
ಗೋವಾ ರಾಜ್ಯವೊಂದರ ಹೆಸರಲ್ಲಿ ಮಾತ್ರ ಗೋ ಎನ್ನುವ ಶಬ್ದವಿದೆ, ಗೋವಾ ನಾಮದಲ್ಲೇನಿದೆಯೋ ಅದು ಕಾರ್ಯರೂಪಕ್ಕೆ ಬರಲಿ.
ಪಣಜಿ, ಜ 16: ಗೋಸೇವೆ ಮಾಡಿದರೆ ದುರ್ಗೆ ಶಾಂತದುರ್ಗೆಯಾಗಿ ನೆಲೆ ನಿಲ್ಲುತ್ತಾಳೆ. ಅದೇ ಗೋವಿನ ಹಿಂಸೆಗೆ ತೊಡಗಿದರೆ ಚಾಮುಂಡೇಶ್ವರಿಯಾಗಿ ಸಂಹಾರ ಶಕ್ತಿಯಾಗಿ ನಿಲ್ಲುತ್ತಾಳೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಅಂಗವಾಗಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ (ಜ 16) ಮಾತನಾಡಿದ ರಾಘವೇಶ್ವರ ಶ್ರೀಗಳು, ಭಾರತದಲ್ಲಿ ಗೋವಾ ರಾಜ್ಯವೊಂದರ ಹೆಸರಲ್ಲಿ ಮಾತ್ರ ಗೋ ಎನ್ನುವ ಶಬ್ದವಿದೆ. (ರಾಘವೇಶ್ವರ ಶ್ರೀಗಳ ಅಭಿಲಾಷೆಗೆ ಗೋಕರ್ಣದಲ್ಲಿ ಮುನ್ನುಡಿ)
ಇಲ್ಲಿ ಹೆಸರಿನ ಅರ್ಧಭಾಗವೇ ಗೋವು. ಹೇಗೆ ಗೋವಾ ಶಬ್ದವು ಗೋವಿನಿಂದ ಆರಂಭವಾಗಿದೆಯೋ, ಹಾಗೆಯೇ ಜೀವನವೂ ಗೋವಿನಿಂದಲೇ ಆರಂಭವಾಗಿದೆ. ಹಾಗಾಗಿ ಗೋವಾ ನಾಮದಲ್ಲೇನಿದೆಯೋ ಅದು ಕಾರ್ಯರೂಪಕ್ಕೆ ಬರಲಿ, ಗೋವಾ ಗೋಮಾತೆಯ ನೆಲೆಯಾಗಲಿ ಎಂದು ಶ್ರೀಗಳು ಆಶಿಸಿದ್ದಾರೆ.

ಮಂಗಲ ಗೋಯಾತ್ರೆ ಎನ್ನುವುದು ಕೇವಲ ಯಾತ್ರೆಯಲ್ಲ, ಇದು ಚರಿತ್ರೆ. ಮಂಗಲಗೋಯಾತ್ರೆ ಒಂದು ದಿನದ ಉತ್ಸವ ಅಲ್ಲ, ಅನುದಿನದ ಆಂದೋಲನ. ಇದು ಸಂಕ್ರಾಂತಿಯ ಬದಲು ಗೋಕ್ರಾಂತಿಯನ್ನು ಬಯಸುವ ಯಾತ್ರೆ ಎಂದು ಶ್ರೀಗಳು ಹೇಳಿದರು.
ಭೂಮಾತೆ, ಗೋಮಾತೆ ಹಾಗೂ ಜನ್ಮ ನೀಡಿದ ಮಾತೆಯರ ತ್ರಿಕೋನ ಬಂಧ ಎಂದಿಗೂ ಮುರಿಯದಿರಲಿ. ಗೋಮಾತೆಯ ತ್ಯಾಜ್ಯ ಭೂಮಾತೆಗೆ ಪೂಜ್ಯವೇ ಆಗಿದೆ. ಅಂದು ಈ ತ್ರಿಕೋನ ಬಂಧದಲ್ಲಿ ನಮ್ಮ ದೇಶ ಸುರಕ್ಷಿತವಾಗಿತ್ತು. ಇಂದು ಆ ಬಗೆಯ ತ್ರಿಕೋನ ಬಂಧ ಸಡಿಲವಾಗುತ್ತಿದೆ.
ಗೋವನ್ನು ಭೂಮಾತೆಯಿಂದ ಟ್ರಾಕ್ಟರ್ ಎಂಬ ಯಾಂತ್ರಿಕತೆಯ ಹೆಸರಿನಲ್ಲಿ ದೂರಮಾಡಲಾಯಿತು, ಟ್ರಾಕ್ಟರ್ ನಿಂದ ಭೂಮಿ ಬಂಜರಾಯಿತು. ಗೋಮಾತೆಯ ವಧೆ ಹಾಗೂ ಭೂಮಾತೆಗೆ ವಿಷದಾನವನ್ನು ಮಾಡುತ್ತಿರುವ ನಾವು ವಿಷವನ್ನೇ ಉಣ್ಣುತ್ತಿದ್ದೇವೆ.
ಭೂಮಾತೆ, ಗೋಮಾತೆ ಹಾಗೂ ಹೆತ್ತಮಾತೆಯ ತ್ರಿಕೋನ ಬಂಧವನ್ನು ಸುರಕ್ಷಿತವಾಗಿ ಇರಿಸಲು ಈ 'ಮಂಗಲ ಗೋಯಾತ್ರೆ'ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.












Click it and Unblock the Notifications