ಸಂಸತ್ ಚುನಾವಣೆಯಲ್ಲಿ ತಮ್ಮ ಸೋಲಿನ ರಹಸ್ಯ ಬಿಚ್ಚಿಟ್ಟ ಸೋಲಿಲ್ಲದ ಸರದಾರ!
ಬೆಂಗಳೂರು, ಅ. 06: ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಹತ್ಯೆ ಖಂಡಿಸಿ ಕಾಂಗ್ರೆಸ್ ನಾಯಕರು ತಮ್ಮ ಆಕ್ರೋಶವನ್ನು ಮುಂದುವರೆಸಿದ್ದಾರೆ. ಇದೇ ವೇಳೆ ಆರ್ಎಸ್ಎಸ್ ಮೇಲೂ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇದೇ ಮಾತನ್ನಾಡುವ ವೇಳೆ ಮಹತ್ವದ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
"ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ" ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ. ಜೊತೆಗೆ ರೈತರ ಹತ್ಯೆ ಹಿಂದಿನ ಒಂದೊಂದೆ ಪೂರಕ ಸಾಕ್ಷಿಗಳನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಬಿಚ್ಚಿಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವನ್ನೂ ಖರ್ಗೆ ಅವರು ಇದೇ ವೇಳೆ ವಿವರಿಸಿದ್ದಾರೆ.

ಖರ್ಗೆ ಸೋಲಿನ ಹಿಂದೆ ಆರ್ಎಸ್ಎಸ್ ಕಾರಣ?
"ಆರ್ಎಸ್ಎಸ್ ಎಂದಿಗೂ ಬಡವರ ಪರವಾಗಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಅವರು ಮನುಸ್ಮೃತಿಯನ್ನು ನಂಬುತ್ತಾರೆ. ಆರ್ಎಸ್ಎಸ್ ಪುಸ್ತಕಗಳನ್ನು ಓದಿ ನಿಮಗೆ ಅರ್ಥವಾಗುತ್ತದೆ. ನಾನು 16ನೇ ವಯಸ್ಸಿನಿಂದಲೇ ಆರ್ಎಸ್ಎಸ್ ವಿರುದ್ಧ ಹೋರಾಡುತ್ತಿದ್ದೇನೆ. ಮುಂದೆಯೂ ಹೋರಾಡುತ್ತೇನೆ. ಆರ್ಎಸ್ಎಸ್ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು" ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವಿವರಿಸಿದ್ದಾರೆ.

ಹತ್ಯೆ ಮಾಡುವ ಮೊದಲೇ ಪರೋಕ್ಷ ಎಚ್ಚರಿಕೆ?
2021ರ ಆಕ್ಟೊಬರ್ 3ರಂದು ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರು 'ಪ್ರತಿ ಜಿಲ್ಲೆಯಲ್ಲಿ ನಮ್ಮ ಜನ 7100 ಜನರನ್ನು ಕರೆತಂದು, ರೈತರನ್ನು ದೊಣ್ಣೆಯಲ್ಲಿ ಹೊಡೆದು ಓಡಿಸಬೇಕು, ನಂತರದ ಪರಿಣಾಮ ಲೆಕ್ಕಿಸಬೇಡಿ' ಎಂದು ಕರೆ ನೀಡಿದ್ದರು. ನಂತರ ಸೆಪ್ಟೆಂಬರ್ 25ರಂದು ಅಜಯ್ ಮಿಶ್ರಾ ಅವರು ಲಖಿಂಪುರ ಖೇರಿಯಲ್ಲಿ 'ರೈತರು ಬದಲಾದರೆ ಒಳ್ಳೆಯದು, ಇಲ್ಲದಿದ್ದರೆ ನಾವು ಕೇವಲ 2 ನಿಮಿಷದಲ್ಲಿ ನಿಮಗೆ ಪಾಠ ಕಲಿಸಿ, ಎಲ್ಲವನ್ನು ಸರಿ ಮಾಡುತ್ತೇವೆ' ಎಂದಿದ್ದರು. ಈಗ ಅವರ ಪುತ್ರ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದಿದ್ದಾನೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಬಂಧಿಸಿದ್ದು ಯಾಕೆ?
ಈ ಘಟನೆ ನಂತರ ಉತ್ತರ ಪ್ರದೇಶ ಉಸ್ತುವಾರಿ ವಹಿಸಿರುವ ಪ್ರಿಯಾಂಕಾ ಗಾಂಧಿ ಅವರು ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುವಾಗ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಈ ರೀತಿ ಬಂಧಿಸಿರುವುದು ಅಪರಾಧ. ನೀವು ಬಂಧನ ವಾರೆಂಟ್ ತೀರಿಸಿ, ಯಾವ ಕಾರಣಕ್ಕೆ, ಯಾವ ಕಾನೂನಿನ ಅಡಿಯಲ್ಲಿ ಬಂಧಿಸುತ್ತಿದ್ದೀರಿ? ಎಂದು ಪ್ರಿಯಾಂಕಾ ಅವರು ಪೊಲೀಸರನ್ನು ಕೇಳಿದ್ದನ್ನು ನೀವೆಲ್ಲ ನೋಡಿದ್ದೀರಿ. ಅವರನ್ನು ಬಂಧಿಸಿ 40 ಗಂಟೆಗಳಾದರೂ ಅವರ ವಿರುದ್ಧ ಕ್ರಮವೂ ಇಲ್ಲ, ವಾರೆಂಟ್ ಕೂಡ ಇಲ್ಲ, ಯಾಕೆ? ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಹತ್ಯೆ ಮುಚ್ಚಿ ಹಾಕಲು ಪರಿಹಾರ ಕೊಟ್ಟ ಬಿಜೆಪಿ!
"ರೈತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಸುಳ್ಳು, ಸತ್ಯ ತಿರುಚಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೈತರ ಮೇಲೆ ಹರಿದ ಎಸ್ಯುವಿ ಕಾರಿನ ಎಡಭಾಗದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಇದ್ದ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದು, ಆತನನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರ ರೈತರ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು 45 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಏನು ಹೇಳುತ್ತೀರಿ? ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳುವುದು ತಪ್ಪೇ? ಅವರ ಪರಿಹಾರ ಘೋಷಣೆ ಕೇವಲ ತೋರಿಕೆಯ ಪ್ರಯತ್ನವಾಗಿದೆ. ಕೊಲೆಗಡುಕರನ್ನು ಮೋದಲು ಬಂಧಿಸಿ ಎಂಬುದು ನಮ್ಮ ಆಗ್ರಹ ಎಂದು ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ. ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿನ ತಮ್ಮ ಸೋಲಿಗೆ ಕಾರಣವನ್ನೂ ವಿವರಿಸಿದ್ದಾರೆ.












Click it and Unblock the Notifications