ಬಿಸಲನಾಡಲ್ಲಿ ಮುಂದುವರಿದ ವರುಣನ ಆರ್ಭಟ
ಬೆಂಗಳೂರು, ಆ. 30 : ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಮೂರು ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಬಿಸಿಲ ನಾಡು ಈಗ ಮಲೆನಾಡಾಗಿ ಬದಲಾಗಿದೆ.
ಮಳೆ ಪರಿಣಾಮ ಗುಲ್ಬರ್ಗ ಜಿಲ್ಲೆ ಆಳಂದ ತಾಲೂಕಿನಲ್ಲಿ ಇಬ್ಬರು ವಿದ್ಯುತ್ ಶಾಕ್ಗೆ ಬಲಿಯಾಗಿದ್ದಾರೆ. ಪವಿತ್ರಾ ಬೆಳಮಗಿ, ಬಾಬು ರಾಮಣ್ಣ ಜಮೀನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಶಹಾಬತಾರ್ ನಾಕಾ, ಜನತಾ ಕಾಲೋನಿ, ಲಾಲಗಿರಿ ಕ್ರಾಸ್ಮ ಮುಂತಾದ ಬಡವಾಣೆಗಳ ಮನೆಗಳಿಗೆ ನೀರು ನುಗ್ಗಿದೆ. ಕಾಗಿನಾ ನದಿ ಉಕ್ಕಿ ಹರಿದಿದ್ದರಿಂದ ಜಿಲ್ಲೆಯ ಮಳಖೇಡದ ಶ್ರೀ ಜಯತೀರ್ಥರ ವೃಂದಾವನ ಭಾಗಶಃ ಮುಳುಗಡೆಯಾಗಿದೆ.
ಅಫಜಲ್ಫುರ ತಾಲೂಕಿನ 37 ಮನೆಗಳು, ಯದ್ರಾಮಿಯ ತಾಲೂಕಿನ 4 ಮನೆಗಳು, ಕಮಲಾಪುರ ತಾಲೂಕಿನ ಅನೇಕ ಮನೆಗಳು ಮಳೆ ಹೊಡೆತಕ್ಕೆ ಧರೆಗುರುಳಿವೆ. ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಳೆ ಹಾನಿ ಪರಿಹಾರಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದ್ದು ಅಧಿಕಾರಿಗಳಿಗೆ ಮಾರ್ಗದರ್ಶನ ಮತ್ತು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ್ ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು ಮನೆ ಗೋಡೆ ಕುಸಿದು ಸಿಂಧಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಬಸವನ ಬಾಗೇವಾಡಿ ಮತ್ತು ತಾಳಿಕೋಟೆ ನಡುವಿನ ಸಂಪರ್ಕ ಕಡಿತಗೊಂಡಿದ್ದು ಬಿಜಾಪುರ ನಗರದ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ.
ಅಲ್ಲದೇ ಬೆಳಗಾವಿಯ ಘಟಪ್ರಭಾ ಮದಿ ಉಕ್ಕಿ ಹರಿದಿದ್ದು ಕೃಷಿ ಭೂಮಿಗೆ ನೀರು ನುಗ್ಗಿದೆ. ಹಾವೇರಿ, ಹುಬ್ಬಳ್ಳಿ-ಧಾರವಾಡ, ಯಾದಗಿರಿ ಮತ್ತು ಬಳ್ಳಾರಿಯಲ್ಲೂ ಮಳೆ ಬಿರುಸಾಗಿದ್ದು ಅಪಾರ ಬೆಳೆ ನಷ್ಟವಾಗಿದೆ.