ಕಾಫಿನಾಡಲ್ಲಿ ಮಳೆ ಹಾವಳಿ: 30 ವರ್ಷಗಳ ನಂತರ ಮುಳುಗಿದ ಹೆಬ್ಬಾಳೆ ಸೇತುವೆ!
ಚಿಕ್ಕಮಗಳೂರು, ಜುಲೈ.15: ಕಾಫಿನಾಡು ಮಲೆನಾಡು ಭಾಗದಲ್ಲಿ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಆರನೇ ಬಾರಿ ಮುಳುಗಿ ದಾಖಲೆ ನಿರ್ಮಿಸಿದೆ.
ಇನ್ನು ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದರೊಂದಿಗೆ 30 ವರ್ಷಗಳ ನಂತರ ಹೆಬ್ಬಾಳೆ ಸೇತುವೆ 24 ಗಂಟೆ ಕಾಲ ಮುಳುಗಡೆಯಾಗಿ ಇತಿಹಾಸ ಸೃಷ್ಟಿಸಿದೆ. ಇನ್ನು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದೆ.
ಕಡಬದ ಹೊಸ್ಮಠ ಸೇತುವೆ ಮುಳುಗಡೆ: ವಾಹನ ಸವಾರರಿಗೆ ಸಂಕಷ್ಟ
ಶೃಂಗೇರಿ ಘಟ್ಟ ಪ್ರದೇಶದ ಮಳೆಗೆ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಹೇಮಾವತಿ ನದಿ ಕೂಡ ಮೈ ದುಂಬಿ ಹರಿಯುತ್ತಿದೆ. ಇತ್ತ ಗಾಳಿಸಹಿತ ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ಕೂವೆ ಹಾಗೂ ಆನೆಗುಂಡಿ ಗ್ರಾಮ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರಿನ ಭಾರೀ ಮಳೆ ಗಾಳೆಗೆ ತಾಲೂಕಿನ ಭಕ್ತರಹಳ್ಳಿ ಯಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದಿದೆ. ತರೀಕೆರೆ-ಚಿಕ್ಕಮಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಅಷ್ಟೇ ಅಲ್ಲದೆ, ಭಾರೀ ಗಾಳಿ ಮಳೆಗೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ತೇಗೂರು ಪರಮೇಶ್ವರ ದೇವಸ್ಥಾನದ ಮೇಲ್ಛಾವಣಿ ಕುಸಿದಿದೆ. ನಿನ್ನೆ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಣಪತಿ, ಶಿವ, ನಂದಿ, ಸುಬ್ರಹ್ಮಣ್ಯ ಮೂರ್ತಿಗಳಿಗೆ ಯಾವುದೇ ಅನಾಹುತವಾಗಿಲ್ಲ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಇದಾಗಿದ್ದು, ಕಳೆದ ಹತ್ತು ವರ್ಷಗಳಿಂದ ದುರಸ್ತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿತ್ತು. ಆದರೆ ಮೇಲ್ಛಾವಣಿ ಹಾಗೂ ಗೋಡೆ ಕುಸಿತದಿಂದ ದೇವಸ್ಥಾನಕ್ಕೆ ಭಾಗಶಃ ಹಾನಿಯಾಗಿದ್ದು, ಮುಜರಾಯಿ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದರ ಜೊತೆಗೆ ಆಲ್ದೂರು ಸಮೀಪ ಬೃಹತ್ ಗಾತ್ರ ಮರವೊಂದು ರಸ್ತೆ ಬಿದ್ದು ಕೆಲ ಕಾಲ ಚಿಕ್ಕಮಗಳೂರು-ಶೃಂಗೇರಿ ಸಂಪರ್ಕ ಬಂದ್ ಆಗಿತ್ತು.