Rain: ರಾಜ್ಯ ರಾಜಧಾನಿ ಸೇರಿದಂತೆ ದೇಶದ ಹಲವೆಡೆ ಮಳೆ ಅರ್ಭಟ
ಕಳೆದು ಮೂರು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಸುರಿಯುವ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅಂಡರ್ಪಾಸ್, ರಸ್ತೆಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ರಸ್ತೆ ಸಂಚಾರ ಸುಗಮವಾಗಿರದೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ದಕ್ಷಿಣ ತಮಿಳುನಾಡಿನಲ್ಲಿ ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಭಾನುವಾರದಿಂದ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಮುಂಜಾಗೃತ ಕ್ರಮವಾಗಿ ಅಂಡರ್ಪಾಸ್ಗಳನ್ನು ಮುಚ್ಚಲಾಗುತ್ತಿದೆ. ಮಹಾನಗರದ ಹಲವೆಡೆ ಮತ್ತೆ ಮಳೆ ಆರಂಭವಾಗಿದ್ದು, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಾಂತಿನಗರ, ಜಯನಗರ, ವಿಜಯನಗರ, ಬನಶಂಕರಿ, ಹೆಬ್ಬಾಳ, ರಾಜಾಜಿನಗರ, ಮತ್ತಿಕೆರೆ, ಚಂದ್ರಾ ಲೇಔಟ್, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಜಾಲಹಳ್ಳಿ, ಯಶವಂತಪುರ ಸೇರಿದಂತೆ ಹಲವೆಡೆ ವರ್ಷಧಾರೆ ಉಂಟಾಗಿದೆ. ಬೆಂಗಳೂರಿನಲ್ಲಿ ಮತ್ತೆ ಮಳೆ ಹಿನ್ನೆಲೆ ನಗರದ ಅಂಡರ್ ಪಾಸ್ಗಳಲ್ಲಿ ಮಳೆ ನೀರು ತುಂಬಿದೆ. ಶಿವಾನಂದ ಸರ್ಕಲ್ ಬಳಿಯ ರೈಲ್ವೇ ಅಂಡರ್ ಪಾಸ್ನಲ್ಲಿ ಮಳೆ ನೀರು ಆವರಿಸಿವೆ.

ಇನ್ನೂ ರಾಜ್ಯದಲ್ಲಿ ಹಾವೇರಿ ಅಧಿಕ ಮಳೆ ಹಾಗೂ ಸಿಡಿಲಿಗೆ ಕುರಿಗಾಹಿ ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿಯಲ್ಲಿ ಆನೆಕಲ್ಲು ಮಳೆಯಾಗಿದೆ. ಬಳ್ಳಾರಿಯಲ್ಲಿ ಮನೆಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಿ ಭಾರಿ ಮಳೆ ಗಾಳಿಗೆ ಜನ ಮನೆಬಿಟ್ಟು ಹೊರಬಾರದಂತ ಸ್ಥಿತಿ ಎದುರಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸಹ ಸೋಮವಾರ ವರುಣ ಆರ್ಭಟಿಸಿದ್ದು, ಕೆಲ ಸಾವು ನೋವುಗಳು ಸಂಭವಿಸಿವೆ. ಜೊತೆಗೆ ಮನೆಗಳು ಮೇಲೆ ಬೃಹತ್ ಗಾತ್ರದ ಮರಗಳು ಬಿದ್ದು, ವಾಹನಗಳು ಜಖಂ ಆಗಿವೆ.
ಉತ್ತರಾಖಂಡದಲ್ಲಿ 200 ವರ್ಷ ಹಳೆಯ ಮರ ಬಿದ್ದು ಇಬ್ಬರು ಸಾವು
ಉತ್ತರಾಖಂಡದ ಜ್ವಾಲಾಪುರ ಪ್ರದೇಶದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಹವಾಮಾನ ವೈಪರೀತ್ಯದಿಂದ 200 ವರ್ಷ ಹಳೆಯ ಮರವೊಂದು ಉರುಳಿಬಿದ್ದಿದೆ. ಏಕಾಏಕಿ ಬೃಹತ್ ಮರ ಉರುಳಿಬಿದ್ದಿದ್ದರಿಂದ ಅನೇಕರು ಅದರ ಅಡಿ ಸಿಲುಕಿದ್ದರು.
Uttarakhand | Due to rain & storm, a 200-year-old tree fell in the Jwalapur area & many people got buried under it. All four people have been rescued & sent to a govt hospital. A tourist from Sonipat died after a tree fell on him near Chamgadar Tapu: Ajay Singh, SSP Haridwar… pic.twitter.com/nkPbPtOvoF
— ANI UP/Uttarakhand (@ANINewsUP) May 23, 2023
ಜ್ವಾಲಾಪುರದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಮಾತನಾಡಿ, 'ಹಳೆಯದಾದ ಮತ್ತು ಬೃಹತ್ ಮರವೊಂದು ಬಿದ್ದು ಅನೇಕ ಜನರು ಅದರ ಅಡಿಯಲ್ಲಿ ಸಮಾಧಿಯಾಗಿದ್ದಾರೆ. ಹಲವರನ್ನು ರಕ್ಷಿಸಲಾಗಿದೆ' ಎಂದು ತಿಳಿಸಿದರು.

ಉತ್ತರಾಖಂಡದ ಬಾಗೇಶ್ವರ, ಉತ್ತರಕಾಶಿ ಮತ್ತು ತೆಹ್ರಿಯಲ್ಲಿ ಆಲಿಕಲ್ಲು ಮಳೆಯ ಜೊತೆಗೆ ಲಘು ಮಳೆಯಾಗಿದೆ. ಇದರಿಂದ ಉತ್ತರಕಾಶಿಯಲ್ಲಿ ಮಹೇಂದ್ರ ಸಿಂಗ್ ಅವರ 19 ಮೇಕೆಗಳು, ಹುಕಮ್ ಸಿಂಗ್ ಅವರ ಎರಡು ಮತ್ತು ನಾರಾಯಣ್ ಸಿಂಗ್ ಅವರ ಐದು ಮೇಕೆಗಳು ಕಾಡಿನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿವೆ. ಯಮುನೋತ್ರಿ ಹೆದ್ದಾರಿಯ ಖನೇಡ ಕಿಸಾಲಾ ಸ್ಲಿಪ್ಝೋನ್ ಬಳಿ ಅವಶೇಷಗಳು ಮತ್ತು ಕಲ್ಲುಗಳಿಂದಾಗಿ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಇದರಿಂದ ಸ್ಥಳೀಯರ ಜತೆಗೆ ನೂರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಿಲುಕಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಮಳೆ
ಮುಂದಿನ 4 ದಿನಗಳ ಕಾಲ ತಮಿಳುನಾಡಿನ ವಿವಿಧೆಡೆ ಮಳೆಯಾಗಲಿದೆ ಎಂದು ಚೆನ್ನೈ ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಬೇಸಿಗೆಯ ಬಿಸಿ ಉತ್ತುಂಗಕ್ಕೇರಿದೆ. ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಮುಖ್ಯವಾಗಿ ಚೆನ್ನೈನಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿದೆ. ಚೆನ್ನೈನಲ್ಲಿ ಉಷ್ಣಾಂಶ ಹೆಚ್ಚಾಗಿದ್ದು ಜನರು ಹಗಲಿನಲ್ಲಿ ಹೊರಗೆ ಹೋಗುವಂತಿಲ್ಲ. ಸಂಜೆ 6 ಗಂಟೆಯವರೆಗೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್ನಲ್ಲಿದೆ. ಈ ತಿಂಗಳು ಚೆನ್ನೈನಲ್ಲಿ ಅತ್ಯಂತ ಕೆಟ್ಟ ಬೇಸಿಗೆಯಲ್ಲಿ ಒಂದಾಗಿದೆ.
ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ 100 ಡಿಗ್ರಿ ಫ್ಯಾರನ್ಹೀಟ್ ಮೀರಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ತಾಪಮಾನ 95 ಡಿಗ್ರಿ ಫ್ಯಾರನ್ಹೀಟ್ಗೆ ತಲುಪಿದೆ. ಚೆನ್ನೈ ಕೂಡ 95 ಡಿಗ್ರಿ ಫ್ಯಾರನ್ಹೀಟ್ನಷ್ಟು ಶಾಖವನ್ನು ಅನುಭವಿಸಿತು.
ಈ ಬಿಸಿಗಾಳಿಯು ಭಾರತದ ಹಲವು ಭಾಗಗಳಿಗೆ ಅಪ್ಪಳಿಸಲಿದೆ. ಇದರೊಂದಿಗೆ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ನಿಂದ 4 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೆಲವೆಡೆ ತಾಪಮಾನ 5 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲೂ ಇಂದು ಮಳೆ ಸೂಚನೆ
ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಂದು ಅಂದರೆ ಮೇ 24 ಮತ್ತು ಮೇ 25 ರಂದು ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣದಲ್ಲಿ ಭಾರೀ ಮಳೆಯಾಗಬಹುದು ಎನ್ನಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಗುರುವಾರ ಉತ್ತರ ಭಾರತದಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಮಳೆಯಾಗಬಹುದು. ದೆಹಲಿ-ಎನ್ಸಿಆರ್ನಲ್ಲಿ ಇಂದು ಆಲಿಕಲ್ಲು, ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯಿಂದ ಟ್ವೀಟ್ ಮಾಡುವ ಮೂಲಕ ಹೇಳಲಾಗಿದೆ.












Click it and Unblock the Notifications