ಧಾರಾಕಾರ ಮಳೆಗೆ ಯಾದಗಿರಿ ನಗರ ತತ್ತರ
ಯಾದಗಿರಿ, ಸೆ. 16 : ವರುಣದೇವ ಶನಿವಾರ ರಾತ್ರಿ ಕರುಣೆ ತೋರಿದ್ದರಿಂದ ನಗರದಲ್ಲಿರುವ ಭೀಮಾ ನದಿ ಸೇರಿದಂತೆ ಹಳ್ಳ ಕೊಳ್ಳಗಳು ಮೈದುಂಬಿ ಹರಿದಂತೆ ಮಳೆ ನೀರು ಶಾಲೆಗೆ, ಮನೆಗಳಿಗೆ ನುಗ್ಗಿದ ಪರಿಣಾಮ ಜನರು ಪಡಬಾರದ ಪರಿಪಾಟಲು ಪಡಬೇಕಾಯಿತು.
ನಗರದಲ್ಲಿ ಶನಿವಾರ ರಾತ್ರಿ ಭಾರಿ ಮೋಡಕವಿದ ವಾತಾವರಣ ನಿರ್ಮಾಣವಾಗಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಇದರಿಂದ ನಗರದ ಹಲವು ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರ ಹಾಕುವುದರಲ್ಲೇ ರಾತ್ರಿ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಯಿತು.

ಪದೆ ಪದೇ ಮಳೆ ನೀರು ನುಗ್ಗುವ ಗಾಂಧಿ ವೃತ್ತದ ಹತ್ತಿರ ವಿರುವ ಶಾಮ್ಮೈಲಾ (ವಾರ್ಡ್ ನಂ.1) ಬಡಾವಣೆಯಲ್ಲಿ ಮೊಣಕಾಲು ಮಟ್ಟದ ನೀರು ಹಲವು ಮನೆಗಳಿಗೆ ನುಗ್ಗಿದೆ. ಮನೆಯಲ್ಲಿನ ನೀರು ಹೊರ ಹಾಕುವ ಜೊತೆಗೆ ಸಾಮಾನು ಕೊಚ್ಚಿಕೊಂಡು ಹೋಗುವುದನ್ನು ತಡೆಯಲು, ಭಯಭೀತಿಗೊಂಡಿದ್ದ ಮಕ್ಕಳಿಗೆ ಸಾಂತ್ವನ ಹೇಳುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಸರಿಯಾಗಿ ಚರಂಡಿಯನ್ನು ಸ್ವಚ್ಛಗೊಳಿಸದೆ ಇರುವುದು ಹಾಗೂ ಮಳೆ ನೀರು ಹರಿದು ಹೋಗದಂತೆ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ ಎಂದು ಈ ಭಾಗದ ನಿವಾಸಿಗಳು ದೂರಿದ್ದಾರೆ.
ಮಳೆ ನೀರಿನ ಜೊತೆಗೆ ಚರಂಡಿ ನೀರು ಸೇರಿಕೊಂಡಿದ್ದರಿಂದ ಜನರು ಯಮಯಾತನೆ ಅನುಭವಿಸಬೇಕಾಯಿತು. ಭಾರಿ ಮಳೆಗೆ ಶಾಸಕ ಡಾ.ಎ.ಬಿ. ಮಲಕರೆಡ್ಡಿ ಮನೆಗೆ ಹೋಗುವ ರಸ್ತೆ ಕಡಿತಕೊಂಡು ಗುಂಡಿ ನಿರ್ಮಾಣವಾಗಿತ್ತು ನೀರು ತುಂಬಿದ ಆ ಗುಂಡಿಗೆ ಹಲವರ ವಾಹನ ಸಿಲುಕಿ ಬಿದ್ದ ಘಟನೆಯೂ ಸಹ ನಡೆದಿದೆ.
ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಗೆ ನುಗ್ಗಿದ ನೀರು : ನಗರದ ಚಿತ್ತಾಪುರ ರಸ್ತೆಯಲ್ಲಿರುವ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಭಾನುವಾರ ಬೆಳಿಗ್ಗೆ ಸಂಪೂರ್ಣ ಜಲಾವೃತ್ತವಾಗಿತ್ತು. ಬೆಳಗಾಗುವಷ್ಟರಲ್ಲಿ ಶಾಲೆಯ ಆವರಣದಲ್ಲಿ ನೀರು ತುಂಬಿತ್ತು. ಕಟ್ಟಡವನ್ನು ಪ್ರವೇಶಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಕಟ್ಟಡದ ಒಳಗೂ ನೀರು ನುಗ್ಗಿದ್ದರಿಂದ ಕಂಪ್ಯೂಟರ್, ಪೀಠೋಪಕರಣ, ಪುಸ್ತಕಗಳಿಗೆ ಹಾನಿಯಾಗಿದೆ.
ಮಳೆ ದಾಖಲೆ: ಯಾದಗಿರಿ ತಾಲ್ಲೂಕಿನಲ್ಲಿ 458.5 ಮಿ.ಮೀ, ಶಹಾಪುರ ತಾಲ್ಲೂಕಿನಲ್ಲಿ 501 ಮಿ.ಮೀ ಹಾಗೂ ಸುರಪುರ ತಾಲ್ಲೂಕಿನಲ್ಲಿ 186 ಮಿ.ಮೀ ಮಳೆ ದಾಖಲಾಗಿದೆ.
ಹಾನಿ : ಯಾದಗಿರಿ-ಶಹಾಪುರ ರಸ್ತೆಯ ಸೇತುವೆ ಬಳಿ ಹಾಕಲಾಗಿದ್ದ ಸ್ವಾಮಿ ಸಮರ್ಥ ಕಲಾ ಮಂಡಳಿ ಅಕ್ಕಲಕೋಟ ನಾಟಕ ಕಂಪನಿಯೊಳಗೆ ನೀರು ನುಗ್ಗಿದ್ದರಿಂದ ಬೆಲೆ ಬಾಳುವ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಹೋಗಿವೆ. 4 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಕಂಪನಿಯ ವ್ಯವಸ್ಥಾಪಕ ಗುರುಸಿದ್ಧಯ್ಯ ಸ್ವಾಮಿ ತಿಳಿಸಿದ್ದಾರೆ.
ಸಂಚಾರ ಸ್ಥಗಿತ : ಯಾದಗಿರಿ ಸಮೀಪದ ವಡಗೇರಾದ ಹಳ್ಳ ಉಕ್ಕಿ ಹರಿದಿದ್ದರಿಂದ ವಡಗೇರಾ-ಯಾದಗಿರಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಹಳ್ಳಕ್ಕೆ ಕಟ್ಟಿದ ಮೇಲ್ಸೇತುವೆ ಚಿಕ್ಕದಾಗಿದ್ದು, ಹಳ್ಳಕ್ಕೆ ನುಗ್ಗಿದ ನೀರು ಸೇತುವೆಯ ಮೇಲೆ ಹರಿಯಿತು. ರಸ್ತೆಯ ಮೇಲೆ ನೀರು ಎದೆಯ ಮಟ್ಟದವರೆಗೆ ಹರಿದಿದ್ದರಿಂದ ಸಾರಿಗೆ ಸಂಸ್ಥೆ ಬಸ್ಗಳು ಹಾಗೂ ಖಾಸಗಿ ವಾಹನಗಳು ಸಂಚರಿಸಲಿಲ್ಲ. ವಾಹನಗಳ ಚಾಲಕರು ನೀರು ಇಳಿಯುವುದನ್ನು ನೋಡುತ್ತಾ ಕಾಲ ಕಳೆಯುವಂತಾಯಿತು.
ಇಷ್ಟೆಲ್ಲ ಘಟನೆಗಳೂ ಸಂಭವಿಸಿದ್ದರು ಯಾವೊಬ್ಬ ಜನಪ್ರತಿನಿಧಿ ಘಟನೆ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ನಾವು ಅವರಿಗೆ ಮತನೀಡಿದ್ದು ವ್ಯರ್ಥವಾಗಿದೆ ಎಂದು ಮಳೆಯಿಂದ ತತ್ತರಿಸಿದ ಜನರು ಆರೋಪಿಸಿದ್ದಾರೆ.












Click it and Unblock the Notifications