ಐಟಿ ದಾಳಿ ಸುಳಿಯಲ್ಲಿ ಡಿಕೆಶಿ: ಉಡುಗಿ ಹೋಗುವುದೇ ಕೈ ಜಂಘಾಬಲ?
ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ರೈಡ್ ಆಗಿರುವುದು ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ.
ಆಗಸ್ಟ್ 2ನೇ ದಿನದಂದೇ, ಕಾಂಗ್ರೆಸ್ ಪಾಳಯಕ್ಕೆ ಐಟಿ ಇಲಾಖೆ ದೊಡ್ಡ ಶಾಕ್ ನೀಡಿದೆ. ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೇರಿದ ನಿವಾಸಗಳು ಸೇರಿದಂತೆ, ಅವರ ಸಮಸ್ತ ಆರ್ಥಿಕ ವ್ಯವಹಾರಗಳ ಮೇಲೆ ಐಟಿ ಇಲಾಖೆಯು ದೀರ್ಘಕಾಲದಲ್ಲಿ ರೈಡ್ ನಡೆಸಿದೆ.
ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?
ದೇಶದ ಪ್ರತಿಷ್ಠಿತ ಹಾಗೂ ಶ್ರೀಮಂತ ರಾಜಕಾರಣಗಳಲ್ಲಿ ಒಬ್ಬರಾಗಿರುವ ಡಿಕೆ ಶಿವಕುಮರ್ ಅಂದರೆ, ಹೈಕಮಾಂಡ್ ಗೆ ಒಂದು ಭರವಸೆ. ಅದು ಚುನಾವಣೆಯೇ ಆಗಿರಲಿ, ರೆಸಾರ್ಟ್ ರಾಜಕಾರಣವೇ ಆಗಿರಲಿ ಅಥವಾ ಇನ್ನ್ಯಾವುದೇ ರಾಜಕೀಯ ಕಸರತ್ತೇ ಆಗಿರಲಿ, ಡಿಕೆಶಿಗೆ ಒಂದು ಮಾತು ಹೇಳಿದರೆ ಆಯ್ತು, ಆ ಕೆಲಸ ಅರ್ಧ ಮುಗಿದಂತೆಯೇ ಎಂಬ ಮಾತು ಚಾಲ್ತಿಯಲ್ಲಿ ಇದ್ದಿದ್ದು ಸುಳ್ಳೇನಲ್ಲ.
ಐಟಿ ದಾಳಿ, ಗುಜರಾತ್ ಶಾಸಕರಿಗೆ ಇಟಲಿಯೇ ಸೇಫ್!
ಇಂತಿಪ್ಪ, ಭರವಸೆಯ ನಾಯಕರ ಮನೆಯ ಮೇಲೆ ಆಗಿರುವ ಐಟಿ ರೈಡ್ ಈಗ ಇಡೀ ದೇಶವನ್ನೇ ಕರ್ನಾಟಕದತ್ತ ತಿರುಗಿ ನೋಡುವಂತಾಗಿದೆ. ಈ ಪ್ರಕರಣವನ್ನು ಕಾಂಗ್ರೆಸ್, ಇದು ಮೋದಿ ಸರ್ಕಾರದ ಕುತಂತ್ರ ಎಂದು ಬಣ್ಣಿಸಿರುವುದರಿಂದ ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿಧ್ವನಿಸುತ್ತಿದೆ.
ಹೈಕಮಾಂಡ್ ವರೆಗೂ ಹೋಗುವ ಚಾಕಚಕ್ಯತೆ
ಡಿಕೆಶಿ ಅವರ ಪ್ರಭಾವ ಎಷ್ಟಿದೆಯೆಂದರೆ, ಅವರ ಮಾತನ್ನು ಕಾಂಗ್ರೆಸ್ ಹೈಕಮಾಂಡ್ ಕೂಡಾ ಕೇಳಬೇಕಾಗುತ್ತದೆ. ಅಷ್ಟು ಪವರ್ ಫುಲ್ ಕಾಂಗ್ರೆಸ್ ನಾಯಕ ಅವರು. 2013ರಲ್ಲಿ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಚಿಸಿದ ತಮ್ಮ ಮಂತ್ರಿ ಮಂಡಲದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಬೇಕೆಂತಲೇ ಸಂಪುಟದಿಂದ ಆಚೆ ಇಟ್ಟಿದ್ದರು. ಇದಕ್ಕೊಂದು ರಾಜಕೀಯ ಕಾರಣವೂ ಇತ್ತು. ಆದರೆ, ಇದರಿಂದ ಅಸಮಾಧಾನಗೊಂಡ ಡಿಕೆಶಿ, ಹೈಕಮಾಂಡ್ ವರೆಗೂ ತಮ್ಮ ಪ್ರಭಾವ ಬೆಳೆಸಿ, ಸಿದ್ದು ಸಂಪುಟ ಅಸ್ತಿತ್ವಕ್ಕೆ ಬಂದು ವರ್ಷದ ನಂತರ, ಸಂಪುಟಕ್ಕೆ ಸೇರ್ಪಡೆಗೊಳ್ಳುವಲ್ಲಿ ಯಶಸ್ವಿಯಾದರು.
ಹೈಕಮಾಂಡ್ ನಂಬಿಗಸ್ತ
ಡಿಕೆಶಿ ಇಂದು ಯಾವ ರೀತಿ ಪಕ್ಷಕ್ಕೆ ಆಸರೆಯಾಗಿದ್ದಾರೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಗೆ ಯಾವುದೇ ಸವಾಲಿನ ಸನ್ನಿವೇಶವಿರಲಿ, ಅದನ್ನು ಚತುರತೆಯಿಂದ ನಿಭಾಯಿಸಲು ಬೇರೆ ಯಾರನ್ನೂ ಹೈಕಮಾಂಡ್ ಹುಡುಕಲು ಹೋಗುವುದಿಲ್ಲ. ಡಿಕೆಶಿ ಅವರಲ್ಲಿನ ಸಂಘಟನಾ ಶಕ್ತಿಗೆ ಅದು ಸಾಕ್ಷಿ. ನೇರವಾಗಿ ಅದು ಡಿಕೆಶಿಯನ್ನೇ ಸಂಪರ್ಕಿಸುತ್ತದೆ. ಅತ್ತ, ಡಿಕೆಶಿ ಕೂಡ ಹೈಕಮಾಂಡ್ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಇತ್ತೀಚೆಗೆ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಹಾಗಾಗಿಯೇ, ಅವರಿಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಉಪಚುನಾವಣೆಯ ಉಸ್ತುವಾರಿಯನ್ನೂ ವಹಿಸಲಾಗಿದೆ. ಇದೀಗ, ಗುಜರಾತ್ ನಿಂದ ಬಂದಿರುವ ಕೈ ಶಾಸಕರ ಆತಿಥ್ಯವನ್ನೂ ವಹಿಸಲಾಗಿತ್ತು.
ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ
ಚುನಾವಣೆ ಹೊಸ್ತಿಲಲ್ಲಿ ಆಘಾತ
ಕಾಂಗ್ರೆಸ್ ಪಕ್ಷವು ಅತಿಯಾಗಿ ಭರವಸೆ ಇಟ್ಟಿರುವ ನಾಯಕನ ವಿರುದ್ಧವೇ ಈಗ ಐಟಿ ರೈಡ್ ಆಗಿರುವುದು ಈಗ ಆ ಪಕ್ಷದ ಜಂಘಾಬಲವನ್ನೇ ಕೊಂಚ ಉಡುಗಿಸಿದ್ದರೆ ಅದಕ್ಕೆ ಅಚ್ಚರಿಪಡಬೇಕಿಲ್ಲ. ಕರ್ನಾಟಕದಲ್ಲಿ, ಅದರಲ್ಲೂ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇಕೇಬೇಕಾಗಿದ್ದ ಒಬ್ಬ ನಿಷ್ಠಾವಂತ ಹಾಗೂ ದಿಟ್ಟ ನಾಯಕ ಡಿಕೆಶಿ. ಎಂಥದ್ದೇ ಸವಾಲಿರಲಿ, ಡಿಕೆಶಿ ಇದ್ದಾರಲ್ಲ ಬಿಡು ಎಂಬರ್ಥದಲ್ಲಿ ರಾಜ್ಯ ನಾಯಕರೂ, ಅತ್ತ ಹೈಕಮಾಂಡ್ ನಾಯಕರೂ ಇದ್ದರು. ಇದೀಗ, ಡಿಕೆಶಿ ಮೇಲೆಯೇ ಇಂಥ ಬ್ರಹ್ಮಾಸ್ತ್ರ ಪ್ರಯೋಗವಾಗಿರುವುದು ಈಗ ಪಕ್ಷವನ್ನು ಕಟ್ಟಬೇಕಿದ್ದ ಈ ಕಾಲಘಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂದಿಗ್ಧತೆಯ ಮಡುವಿಗೆ ನೂಕಿದಂತಾಗಿದೆ.
ಆರೋಪಗಳಿಗೆ ಸೊಪ್ಪು ಹಾಕದ ನಾಯಕ
ಡಿಕೆಶಿ ವಿರುದ್ಧ ಅಕ್ರಮ ಹಣದ ಆರೋಪ ಬಂದಿರುವುದು ಇದೇ ಮೊದಲಲ್ಲ. 'ಫಸ್ಟ್ ಪೋಸ್ಟ್' ವೆಬ್ ಸೈಟ್ ನೀಡಿರುವ ಮಾಹಿತಿ ಪ್ರಕಾರ, ಕನಕಪುರ ಹಾಗೂ ರಾಮನಗರದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಇವರ ಹಾಗೂ ಇವರ ಕುಟುಂಬದ ಸದಸ್ಯರ ವಿರುದ್ಧ 2015ರಲ್ಲಿ ಕೇಳಿಬಂದಿತ್ತು. ಆದರೆ, ಅದೇ ವರ್ಷ ದಲಿತರಿಗೆ ಹಾಗೂ ಬಡವರಿಗೆ ನೀಡಲಾಗಿದ್ದ ಭೂಮಿಯನ್ನು ಡಿಕೆಶಿ ಅಕ್ರಮವಾಗಿ ವಶಪಡಿಸಿಕೊಂಡಿದ್ದರೆಂಬ ಆರೋಪ ಕೇಳಿಬಂದಿತ್ತು.