'ಮೋದಿ ಕರ್ನಾಟಕಕ್ಕೆ ಬಂದಾಗ ಪಕ್ಕದಲ್ಲಿ ಯಾರಿದ್ದಾರೆ ನೋಡಲಿ'
ರಾಯಚೂರು, ಫೆಬ್ರವರಿ 12 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯಚೂರು ಜಿಲ್ಲೆಯ ದೇವದುರ್ಗ ತಲುಪಿದ್ದಾರೆ. ಬುಡಕಟ್ಟು ಜನಾಂಗದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಚಿತ್ರಗಳು : ಮಿರ್ಚಿ ಬಜ್ಜಿ ಗಿರ್ ಮಿಟ್ ತಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್
ಸೋಮವಾರ ಮಧ್ಯಾಹ್ನ ರಾಹುಲ್ ಗಾಂಧಿ ದೇವದುರ್ಗ ತಲುಪಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಜೊತೆಗಿದ್ದಾರೆ.
ಮುಂದಿನ ಸಲ ಕರ್ನಾಟಕಕ್ಕೆ ಬಂದಾಗ ಎಚ್ಎಎಲ್ ನಿಂದ ಏಕೆ ವಿಮಾನ ಖರೀದಿ ಮಾಡಲಿಲ್ಲ ಎಂದು ಸ್ಪಷ್ಟವಾಗಿ ಹೇಳಿ. ನಮ್ಮ ಸರ್ಕಾರ 5 ವರ್ಷ ಪೂರೈಸಿದೆ. ಯಾವ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪವಿಲ್ಲ.
ಯುವಕರಿಗೆ ಕಂಪನಿ ಸ್ಥಾಪನೆ ಮಾಡಿ ಎಂದು ಸಲಹೆ ಕೊಡುತ್ತೀರಿ. ಉದ್ಯೋಗ ಕೊಡುವುದಿಲ್ಲ. ಅಮಿತ್ ಶಾ ಅವರ ಪುತ್ರನಿಗಾಗಿ ನೀವು ಒಳ್ಳೆಯ ಕಂಪನಿಯನ್ನು ಆರಂಭ ಮಾಡಿಕೊಟ್ಟಿದ್ದೀರಿ.
ನೋಟು ನಿಷೇಧ, ಜಿಎಸ್ಟಿ ಜಾರಿ ನಂತರ ಸಣ್ಣ ಉದ್ಯಮಗಳು ಬಾಗಿಲು ಮುಚ್ಚಿವೆ. ಆದರೆ, ಲಾಭ ಮಾಡುತ್ತಿರುವ ಏಕೈಕ ಉದ್ಯಮಿ ಅಮಿತ್ ಶಾ ಅವರ ಪುತ್ರ. 50 ಸಾವಿರ ರೂ. ನಿಂದ 50 ಕೋಟಿ ರೂ. ಲಾಭ ಮಾಡಿದ್ದಾರೆ.
ನೀವು ರಾಜ್ಯಕ್ಕೆ ಬರುವ ಮುನ್ನ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದರು. ಕೆಲವು ಮಂತ್ರಿಗಳು ಜೈಲಿಗೆ ಹೋಗಿಬಂದಿದ್ದಾರೆ. 11 ಮಂತ್ರಿಗಳು ಭ್ರಷ್ಟಾಚಾರದ ವಿಚಾರದಲ್ಲಿ ರಾಜೀನಾಮೆ ನೀಡಿದ್ದಾರೆ.
ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಮುಂತಾದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ನೋಡಿ, ಕಲಿಯಿರಿ. ಮೋದಿ ಇಲ್ಲಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮೋದಿ ಹಿಂದೆ ನೋಡುವ ಅಭ್ಯಾಸವಿದೆ. ಒಮ್ಮೆ ಅಕ್ಕ-ಪಕ್ಕ ನೋಡಿ ಯಾರು ಕೂತಿದ್ದಾರೆ ಎಂದು.
ಕರ್ನಾಟಕ ಉದ್ಯೋಗ ನೀಡುವಲ್ಲಿ ಮುಂದಿದೆ ಎಂದು ನೀವು ಹೇಳಿದಿರಿ. ಅಭಿವೃದ್ಧಿ ಎಂದರೆ ಏನು ಎಂದು ನಮಗೆ ತಿಳಿದಿದೆ. ಸಿದ್ದರಾಮಯ್ಯ ಅವರ ಸರ್ಕಾರದಿಂದ ನೀವು ಕಲಿಯುವುದು ಬಹಳಷ್ಟಿದೆ.
ನರೇಂದ್ರ ಮೋದಿ ಅವರನ್ನು ದೇಶದ ಜನರು ಪ್ರಧಾನಿ ಮಾಡಿದ್ದು ಮುಂದೆ ನೋಡಿಕೊಂಡು ದೇಶ ನಡೆಸಲು. ನೀವು ಹಿಂದೆ ನೋಡುವುದನ್ನು ಬಿಡಿ. ಮುಂದಿನ ದಿನದಲ್ಲಿ ಹೇಗೆ ಯುವಕರಿಗೆ ಉದ್ಯೋಗ ನೀಡುವಿರಿ? ಎಂದು ಉತ್ತರ ಕೊಡಿ.
ಮೋದಿ ಅವರು ಕ್ರಿಕೆಟ್ ಆಡುವಾಗ ವಿಕೆಟ್ ಕೀಪರ್ ನೋಡುತ್ತಾರೆ. ಆದರೆ, ಸಿದ್ದರಾಮಯ್ಯ ಬೌಲರ್ ನೋಡುತ್ತಾರೆ. ಮೋದಿ ಅವರ ನಡೆಯಿಂದ ದೇಶಕ್ಕೆ ನಷ್ಟ ಉಂಟಾಗುತ್ತಿದೆ.
ಮೋದಿ ಹಿಂದೆ ನೋಡಿಕೊಂಡು ವಾಹನ ಚಲಾಯಿಸುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ಮುಂದಿನ ಅಭಿವೃದ್ಧಿಯನ್ನು ನೋಡಿಕೊಂಡು ಸರ್ಕಾರ ನಡೆಸುತ್ತಾರೆ.
ಲೋಕಸಭೆಯಲ್ಲಿ 1 ಗಂಟೆ ಮೋದಿ ಭಾಷಣ ಮಾಡಿದರು. ಆದರೆ, ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಲಿಲ್ಲ. ರೈತರ ಅಭಿವೃದ್ಧಿ, ಸಾಲ ಮನ್ನಾ ಬಗ್ಗೆ ಅವರು ಮಾತನಾಡಲಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದರು.
ರೈತರ ಸಾಲಾ ಮನ್ನಾ ಇಲ್ಲ, ಯುವಕರಿಗೆ ಉದ್ಯೋಗ ವಿಲ್ಲ, ಆದಿವಾಸಿಗಳ ಹಿತ ಕಾಪಾಡಲ್ಲ. ಆದರೆ, ಶ್ರೀಮಂತ ಉದ್ಯಮಿಗಳಿಗೆ ಮಾತ್ರ ಸಹಕಾರ ನೀಡುತ್ತಿದೆ.
ಚೀನಾ 24 ಗಂಟೆಯಲ್ಲಿ 50 ಸಾವಿರ ಉದ್ಯೋಗ ಅವಕಾಶ ನೀಡುತ್ತದೆ. 24 ಗಂಟೆಯಲ್ಲಿ ಮೋದಿ ಸರ್ಕಾರ ಎಷ್ಟು ಉದ್ಯೋಗ ನೀಡಿದ್ದಾರೆ ಎಂದು ಕೇಳಿದರೆ 450 ಉದ್ಯೋಗ ಮಾತ್ರ ಸೃಷ್ಟಿ ಮಾಡಲಾಗಿದೆ.
ಮೋದಿ ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, 10 ರೂ.ಗಳನ್ನು ಹಾಕಿಲ್ಲ. ಪ್ರತಿವರ್ಷ 2 ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಸಂಸತ್ನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದೆ.
371(ಜೆ) ಜಾರಿಗೂ ಮುನ್ನ ಈ ಭಾಗಕ್ಕೆ 350 ಕೋಟಿ ಅನುದಾನ ಬರುತ್ತಿತ್ತು. ಈಗ 4000 ಕೋಟಿ ಅನುದಾನ, 20 ಸಾವಿರ ಉದ್ಯೋಗ ನೀಡಲಾಗುತ್ತಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆವು. ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಹೋರಾಟ ಮಾಡಿದರು. ಅವರ ಹೋರಾಟವಿಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.
ಕೆಲವು ದಿನಗಳ ಬಳಿಕ ಸಿದ್ದರಾಮಯ್ಯ ಅವರ ಬಳಿ ಸಾಲ ಮನ್ನಾ ಮಾಡುವ ಬಗ್ಗೆ ಚರ್ಚೆ ಮಾಡಿದೆ. ಈ ಚರ್ಚೆ ನಡೆದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಅವರು 8 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದರು.

ಮೋದಿ ಹೋದಲೆಲ್ಲ ರೈತರ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಕಚೇರಿಗೆ ಹೋದಾಗಲೇ ನಾನು ಕೇಳಿದೆ ಉದ್ಯಮಿಗಳ ಸಾಲ ಮನ್ನಾ ಮಾಡಿದಿರಿ. ಯುಪಿಎ ಸರ್ಕಾರವಿದ್ದಾಗ ಸಾಲ ಮನ್ನಾ ಮಾಡಿತ್ತು. ಆದರೆ, ಈಗ ಯಾಕೆ ಸಾಲ ಮನ್ನಾ ಮಾಡುತ್ತಿಲ್ಲ? ಎಂದು ಕೇಳಿದೆ. ಆದರೆ, ಅವರು ಆ ಬಗ್ಗೆ ಮಾತನಾಡಲಿಲ್ಲ.
ದಲಿತರು, ಆದಿವಾಸಿಗಳಿಗೆ ನೀಡಿದ ಹಣವನ್ನು ಉದ್ಯಮಿಗಳಿಗೆ ನೀಡಲಾಗುತ್ತಿದೆ. ರೈತರ ಬಗ್ಗೆಯೂ ನಮಗೆ ಅಪಾರ ಕಾಳಜಿ ಇದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆದಿವಾಸಿಗಳ ಅಭಿವೃದ್ಧಿಗಾಗಿ 27,700 ಕೋಟಿ ನೀಡಿದೆ. ಆದರೆ, ಪ್ರಧಾನಿ ಮೋದಿ ಇಡೀ ದೇಶಕ್ಕೆ 54 ಸಾವಿರ ಕೋಟಿ ಕೊಟ್ಟಿದ್ದಾರೆ. ಯಾವ ಸರ್ಕಾರ ಉತ್ತಮವಾದದ್ದು?.
ಕರ್ನಾಟಕದ ರಸ್ತೆಗಳಲ್ಲಿ ಎಲ್ಲಿಯಾದರೂ ನ್ಯಾನೋ ಕಾರು ಕಾಣಿಸುತ್ತಿದೆಯೇ?. ನರೇಂದ್ರ ಮೋದಿ ಅವರು ನೀಡಿದ ಹಣ ಎಲ್ಲಿಗೆ ಹೋಯಿತು?.
ಉದ್ಯಮಿಗಳು ಮೂರು ತಿಂಗಳಿನಲ್ಲಿ 3 ಸಾವಿರ ರೂ. ಎಕರೆಗೆ ಮಾರಾಟ ಮಾಡಿದ್ದಾರೆ. ಸರ್ಕಾರದ ಇಲಾಖೆಗಳಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಸರ್ಕಾರಿ ಭೂಮಿಯನ್ನು 1 ರೂ.ಗೆ ಪಡೆದು, 3 ಸಾವಿರ ರೂ.ಗೆ ಮಾರಾಟ ಮಾಡಲಾಗಿದೆ.
ಗುಜರಾತ್ನಲ್ಲಿ 35,000 ಎಕರೆ ಜಮೀನನ್ನು ಉದ್ಯಮಿಗಳಿಗೆ ನೀಡಲಾಗಿದೆ. ಈ ಜಮೀನು ನಿಮ್ಮದಲ್ಲ ಎಂದು ಅದನ್ನು ಕಸಿದುಕೊಂಡು ಉದ್ಯಮಿಗಳಿಗೆ ಕೊಟ್ಟಿದ್ದಾರೆ. ಎಕರೆಗೆ 1 ರೂ.ನಂತೆ ನೀಡಲಾಗಿದೆ.
ನಾನು 3 ರಿಂದ 4 ತಿಂಗಳು ಗುಜರಾತ್ನಲ್ಲಿ ಪ್ರವಾಸ ಮಾಡಿದೆ. ಅಲ್ಲಿನ ಬುಡಕಟ್ಟು ಜನರು ತಮ್ಮ ಜಮೀನನ್ನು ನರೇಂದ್ರ ಮೋದಿ ಅವರು ಕಿತ್ತುಕೊಂಡು ಉದ್ಯಮಿಗಳು ನೀಡಿದರು ಎಂದು ಹೇಳಿದರು.











Click it and Unblock the Notifications