ಗೋಮಯದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ: ರಾಘವೇಶ್ವರ ಶ್ರೀ
ಗೋವನ್ನು ನಾವು ಉಪೇಕ್ಷೆ ಮಾಡುತ್ತಿದ್ದೇವೆ, ಗೋವಿನಲ್ಲಿ ಬೇಡ ಎನ್ನುವಂತಹ ವಸ್ತುಗಳೇ ಇಲ್ಲ, ಗೋವು ತನಗೆ ಬೇಡ ಎಂದು ಹೊರಹಾಕುವ ಗೋಮಯದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಚಿಕ್ಕಮಗಳೂರು, ನ 29: ಗೋವಿನ ರೂಪದಲ್ಲಿ ಭಗವಂತ ಚಿನ್ನವನ್ನು ಇಟ್ಟಿದ್ದಾನೆ. ಆರೋಗ್ಯ, ಐಶ್ವರ್ಯ, ಹಣ ಎಂಬಂತೆ ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲವನ್ನೂ ಗೋಮಾತೆ ಕೊಡುತ್ತಾಳೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಸೋಮವಾರ (ನ 28) ನಡೆದ ಮಂಗಲ ಗೋಯಾತ್ರೆಯ ಸಭೆಯಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಚಿನ್ನವಿದ್ದರೂ ಹುಡುಕುವುದಕ್ಕೆ ಯೋಗ್ಯತೆ ಇರಬೇಕು.

ಗೋವಿನಲ್ಲಿ ಬೇಡ ಎನ್ನುವಂತಹ ವಸ್ತುಗಳೇ ಇಲ್ಲ, ಗೋವು ತನಗೆ ಬೇಡ ಎಂದು ಹೊರಹಾಕುವ ಗೋಮಯದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ ಅಂದರೆ, ಗೋವು ಎಂತಹ ಅದ್ಭುತ ಇರಬಹುದು ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಗೋವನ್ನು ನಾವು ಉಪೇಕ್ಷೆ ಮಾಡುತ್ತಿದ್ದೇವೆ, ಕೇವಲ ಉಪೇಕ್ಷೆ ಮಾಡಿ ಅದರಷ್ಟಕ್ಕೆ ಬಿಟ್ಟಿದ್ದರೆ ಹುಲ್ಲು ನೀರು ಕುಡಿದು ಅದು ಸಹಜವಾಗಿ ಇರುತ್ತಿತ್ತು, ಆದರೆ ನಾವು ಗೋವನ್ನು ಬದುಕಲೇ ಬಿಡುತ್ತಿಲ್ಲ ಎಂದು ರಾಘವೇಶ್ವರ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. (ಅಂದು ಗೋಗ್ರಾಸದ ನಂತರ ಮಹಾರಾಜರ ಭೋಜನ, ಆದರೆ ಇಂದು)

ಗೋವು ಇದ್ದರೆ ಅದು ಮಂಗಲ, ಗೋವು ಹತ್ಯೆ ಆದರೆ ಅದು ಅಮಂಗಲ, ಸಮಾಜದ ಮಂಗಲಕ್ಕಾಗಿ ಈ ಯಾತ್ರೆಯಾಗಿದ್ದು, ಗೋವಂಶದ ಸಂರಕ್ಷಣೆಯ ಮೂಲಕ ಗೋವಿನ ಋಣ ತೀರಿಸೋಣ ಎಂದು ಶ್ರೀಗಳು ಕರೆ ನೀಡಿದರು.
ಹೊರನಾಡಿನ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಈ ಸಂದರ್ಭದಲ್ಲಿ ಮಾತನಾಡಿ, ಭಾರತೀಯರಾಗಿ ತಾಯಿಯನ್ನು ಗೌರವಿಸುವ ನಮಗೆ ಗೋಮಾತೆಯನ್ನು ಗೌರವಿಸುವುದು ಸಹ ಕರ್ತವ್ಯವೆ ಆಗಿದೆ.
ಪಾಶ್ಚಾತ್ಯ ದೇಶಗಳು ಭಾರತೀಯ ಗೋ ತಳಿಗಳನ್ನು ಪೋಷಿಸುತ್ತರುವುದನ್ನು ನಾವು ಕಾಣಬಹುದಾಗಿದ್ದು, ದುಬೈ ದೇಶದ ಮುಸ್ಲಿಂ ರಾಜನೊಬ್ಬ ಕಳೆದ ಐವತ್ತು ವರ್ಷಗಳಿಂದ ಗೋವನ್ನು ಸಾಕುತ್ತಿದ್ದಾನೆ. ಆ ರಾಜ ನಮಗೆಲ್ಲರಿಗೂ ಆದರ್ಶ, ಭಾರತೀಯ ಗೋವಂಶ ಉಳಿಯುವಲ್ಲಿ ಈ ಮಂಗಲಗೋಯಾತ್ರೆ ಭೂಮಿಕೆಯಾಗಲಿ ಎಂದು ಭೀಮೇಶ್ವರ ಜೋಷಿ ಹಾರೈಸಿದರು.
ಸಭೆಯಲ್ಲಿ ರೈತರು, ಮಕ್ಕಳು ಸೇರಿದಂತೆ ಅನೇಕ ಗೋಪ್ರೇಮಿಗಳು ಉಪಸ್ಥಿತರಿದ್ದರು, ಶ್ರೀಸಂಸ್ಥಾನದವರು ಸಭೆಗೆ ಗೋಸಂರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿದರು.












Click it and Unblock the Notifications