ರಾಘವೇಶ್ವರ ಶ್ರೀಗಳ ಪುರುಷತ್ವ ಪರೀಕ್ಷೆ ಆಗಿಲ್ಲ ಮುಂದೇನು?
ಬೆಂಗಳೂರು, ಸೆಪ್ಟೆಂಬರ್ 30 : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಪುರುಷತ್ವ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಶ್ರೀಗಳು ಇಂದು ಪರೀಕ್ಷೆಗೆ ಹಾಜರಾಗಿಲ್ಲ ಹಾಗಾದರೆ ಮುಂದಿನ ನಡೆಯೇನು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಶ್ರೀಗಳಿಗೆ ಇಂದು ಜನನಾಂಗ ನಿಮಿರುವಿಕೆ ಪರೀಕ್ಷೆ (ಜೆನೈಟಲ್ ಎಕ್ಸಾಮಿನೇಷನ್), ವೀರ್ಯ ವಿಶ್ಲೇಷಣೆ (ಸೆಮನ್ ಅನಾಲಿಸೆಸ್), ನಾಳಗಳಲ್ಲಿ ರಕ್ತದ ಚಲನೆ ಪ್ರಮಾಣ (ಡೋಪ್ಲರ್ ಅಲ್ಟ್ರಾ ಸೌಂಡ್) ಹಾಗೂ ಸ್ನಾಯುಗಳ ರಕ್ತ ಚಲನೆ ಪ್ರಮಾಣದ (ಪೆಪವರೈನ್) ಪರೀಕ್ಷೆಗಳನ್ನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. [ಪುರುಷತ್ವ ಪರೀಕ್ಷೆ : ಬುಧವಾರದ ಬೆಳವಣಿಗೆಗಳು]

ಬುಧವಾರ ಬೆಳಗ್ಗೆ 9ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕು ಎಂದು ಸಿಐಡಿ ನೋಟಿಸ್ ನೀಡಿತ್ತು. ಸಿಐಡಿ ಪೊಲೀಸರು ಮತ್ತು ವಿಕ್ಟೋರಿಯಾ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ.ದುರ್ಗಣ್ಣ ನೇತೃತ್ವದ ವೈದ್ಯರ ತಂಡ ಮಧ್ಯಾಹ್ನ 1 ಗಂಟೆಯ ತನಕ ಕಾದರೂ ಶ್ರೀಗಳು ಪರೀಕ್ಷೆಗೆ ಹಾಜರಾಗಲಿಲ್ಲ. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]
ಪರೀಕ್ಷೆಗೆ ತೆರಳುವುದಿಲ್ಲ : 'ರಾಘವೇಶ್ವರ ಶ್ರೀಗಳು ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ನಿರ್ಧಾರಿಸಿದ್ದಾರೆ' ಎಂದು ಮಠದ ಕಾರ್ಯದರ್ಶಿ ಡಾ.ಕೃಷ್ಣ ಪ್ರಸಾದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 'ಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದಾರೆ. ಈಗ ವೈದ್ಯಕೀಯ ಪರೀಕ್ಷೆಗೆ ಬಂದರೆ ವ್ರತಭಂಗವಾಗುತ್ತದೆ. ಆದ್ದರಿಂದ ಶ್ರೀಗಳು ಹಾಜರಾಗುತ್ತಿಲ್ಲ' ಎಂದು ಅವರು ಹೇಳಿದ್ದಾರೆ. [ರಾಘವೇಶ್ವರ ಶ್ರೀಗಳ ವಿರುದ್ಧದ ಚಾರ್ಜ್ ಶೀಟ್ ನಲ್ಲೇನಿದೆ?]
ಮುಂದೇನು? : ಪುರುಷತ್ವ ಪರೀಕ್ಷೆಗೆ ತಡೆ ಕೋರಿ ಶ್ರೀಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸುತ್ತಿದೆ. ಒಂದು ವೇಳೆ ಕೋರ್ಟ್ ಪರೀಕ್ಷೆಗೆ ತಡೆಯಾಜ್ಞೆ ಕೊಟ್ಟರೆ ಶ್ರೀಗಳು ಪರೀಕ್ಷೆಯಿಂದ ಪಾರಾಗಬಹುದು. ಇಲ್ಲವಾದಲ್ಲಿ ಸಿಐಡಿ ಮತ್ತೊಂದು ದಿನಾಂಕ ನಿಗದಿಪಡಿಸಿ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಲಿದೆ.
ಎರಡೂ ಬಾರಿಯೂ ಶ್ರೀಗಳು ಪರೀಕ್ಷೆಗೆ ಹಾಜರಾಗದಿದ್ದಲ್ಲಿ ಸಿಐಡಿ ನ್ಯಾಯಾಲಯದ ಮೊರೆ ಹೋಗಿ ವೈದ್ಯಕೀಯ ಪರೀಕ್ಷೆಗೆ ಸ್ವಾಮೀಜಿಗಳು ಹಾಜರಾಗಬೇಕು ಎಂಬ ಆದೇಶವನ್ನು ತರಬಹುದು. ಒಟ್ಟಿನಲ್ಲಿ ಪುರುಷತ್ವ ಪರೀಕ್ಷೆಯ ಮುಂದಿನ ನಿರ್ಧಾರಗಳು ನ್ಯಾಯಾಲಯದಲ್ಲಿ ತೀರ್ಮಾನಗೊಳ್ಳಲಿವೆ.
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧ ಸಿಐಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಸಿಐಡಿ ಡಿವೈಎಸ್ಪಿ ಅಶೋಕ್ ಕುಮಾರ್ ಅವರು ಶನಿವಾರ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 680 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 151 ಸಾಕ್ಷಿಗಳ ಹೇಳಿಕೆ ಮತ್ತು ದೂರವಾಣಿ ಕರೆಗಳ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.












Click it and Unblock the Notifications