ವಾಮಾಚಾರ ಮಾಡಿಲ್ಲ, ಮಾಟ ಮಂತ್ರ ಗೊತ್ತಿಲ್ಲ: ದೇವೇಗೌಡ
ಬೆಂಗಳೂರು, ಫೆ.16: ನಾನು ಯಾವ ವಾಮಾಚಾರ ಮಾಡಿಲ್ಲ. ಮಾಟ ಮಂತ್ರ ನನಗೆ ಗೊತ್ತಿಲ್ಲ. ನನಗೆ ದೇವರಲ್ಲಿ ನಂಬಿಕೆಯಿದೆ. ಪಕ್ಷ ಕಟ್ಟುವುದೊಂದೆ ನನ್ನ ಮುಂದಿರುವ ಗುರಿ ಹೀಗೆಂದು ಹೇಳಿದವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ.
ಬೆಂಗಳೂರು ರೇಸ್ ಕೋರ್ಸ್ ಸಮೀಪದ ಕಚೇರಿಯನ್ನು ಕೋರ್ಟ್ ಆದೇಶದಂತೆ ಕಾಂಗ್ರೆಸ್ ಗೆ ಬಿಟ್ಟುಕೊಟ್ಟ ನಂತರ ಕರೆದ ಮೊದಲ ಸುದ್ದಿಗೋಷ್ಠಿಯಲ್ಲಿ ಅವರು ಮಾತ ನಾಡಿದರು.[ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೆಗೌಡರು]

ಸದ್ಯಕ್ಕೆ ರಮೇಶ್ ಗೌಡ ಅವರ ಗೋದಾಮಿನಲ್ಲಿ ಜೆಡಿಎಸ್ ಕಚೇರಿ ಆರಂಭಿಸಲಾಗಿದೆ. ಯುವಕರು ನಮ್ಮ ಜತೆಗಿದ್ದಾರೆ. ನಾವು ಯಾರಿಗೂ ಮೋಸ ಮಾಡಿಲ್ಲ. ಮೋಸ ಮಾಡಿದ್ದರೆ ಪಕ್ಷ ಸಂಘಟನೆ ಸಾಧ್ಯವಾಗುತ್ತಿರಲಿಲ್ಲ ಎಂದು ಗೌಡರು ಹೇಳಿದರು.
ಜೆಡಿಎಸ್ ಪಕ್ಷವನ್ನು ಭದ್ರವಾಗಿ ಕಟ್ಟಿ ನಂತರ ಜನತಾ ಪರಿವಾರ ಒಗ್ಗೂಡಿಸಲು ಹೋರಾಟ ನಡೆಸುತ್ತೇನೆ ಎಂದು ಹೇಳಿದರು. ಅಷ್ಟಕ್ಕೂ ದೇವೇಗೌಡರು ವಾಮಾಚಾರ ಮಾಡಿಲ್ಲ ಎಂದು ಹೇಳಲು ಕಾರಣವಾಗಿದ್ದು ಕಾಂಗ್ರೆಸ್ ನಾಯಕರ ಆರೋಪ.[ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]
ಕಾಂಗ್ರೆಸ್ ವಿಜಯೋತ್ಸವ
ಕಚೇರಿಯ ಬೀಗದೊಂದಿಗೆ ರೇಸ್ ಕೋರ್ಸ್ ಬಳಿ ಕಾಂಗ್ರೆಸ್ ನಾಯಕ ಆರ್ .ವಿ. ವೆಂಕಟೇಶ್ ನೇತೃತ್ವದಲ್ಲಿ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಚೇರಿಯ ಬಾಗಿಲು ತೆಗೆದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಬ್ಯಾನರ್ ಗಳನ್ನು ಅಳವಡಿಸಿದರು.
ಆದರೆ ಇದೇ ವೇಳೆ ಕಚೇರಿಯ ಬಳಿ ಕಂಡುಬಂದ ಕೆಂಪು ಗಂಟುಗಳು ವಾಮಾಚಾರ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಯಿತು. ಕಚೇರಿ ಕೈತಪ್ಪಿ ಹೋದ ಬೇಸರಕ್ಕೆ ಜೆಡಿಎಸ್ ನಾಯಕರು ವಾಮಾಚಾರ ಮಾಡಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದರು.
ಇದಕ್ಕೆ ಉತ್ತರವಾಗಿ ಮಾಜಿ ಪ್ರಧಾನಿ ನಾನು ವಾಮಾಚಾರ ಮಾಡಿಲ್ಲ. ಪಕ್ಷದ ಕಚೇರಿ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications