ಸೆ. 25ರಂದು ಬಂದ್ ಇಲ್ಲ, ರೈತ ಸಂಘಗಳಿಂದ ಹೆದ್ದಾರಿ ತಡೆ ಚಳುವಳಿ
ಬೆಂಗಳೂರು, ಸೆ. 22: ಸೆಪ್ಟಂಬರ್ 25 ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ಚಳುವಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕದ ಕರೆ ನೀಡಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ - ಕರ್ನಾಟಕ ದ ಆನ್ಲೈನ್ ಸಭೆಯು ಇಂದು ಸಂಜೆ 6.30 ಕ್ಕೆ ನಡೆಯಿತು. ಈ ಸಭೆಯಲ್ಲಿ ಎರಡೂ ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಮುಂತಾದ 09 ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.
ಶುಕ್ರವಾರ ಕರ್ನಾಟಕದಲ್ಲಿ ಬಂದ್ ಇರುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್
ರಾಜ್ಯದ ಎಲ್ಲಾ ದಲಿತ ಹಾಗೂ ಬಹುತೇಕ ಕಾರ್ಮಿಕ ಸಂಘಗಳು ಈ ಸಭೆಯ ನಿರ್ಣಯಕ್ಕೆ ಬದ್ದವೆಂದು ಸೂಚನೆ ನೀಡಿದ್ದವು. ಜೊತೆಗೆ ವರ್ತಕ ಸಮುದಾಯವು ಬೆಂಬಲಿಸಿದೆ.
ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸು ಪಡೆಯಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಆಗ್ರಹಿಸಿದೆ.
ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ
ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗಿದೆ.
ಬಂದ್ ಕರೆ ಬಗ್ಗೆ ಒಮ್ಮತ ಮೂಡಿಲ್ಲ
ಎಐಕೆಎಸ್ಸಿಸಿಯ ಅಖಿಲ ಭಾರತ ಪ್ರತಿಭಟನೆಯ ಕರೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು, ರಾಜ್ಯಾದ್ಯಂತ ಸೆಪ್ಟಂಬರ್ 25, 2020 ರಂದು ರಾಜ್ಯ ಹೆದ್ದಾರಿ ತಡೆ ಚಳುವಳಿಯನ್ನು ಸಂಘಟಿಸಲು ನಿರ್ಧರಿಸಿದೆ. ಬಂದ್ ಬಗ್ಗೆ ಒಮ್ಮತ ಮೂಡಿಲ್ಲ, ಬುಧವಾರದಂದು ಬಂದ್ ಕರೆ ನೀಡುವ ಬಗ್ಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರೈತಾಪಿ ವರ್ಗಕ್ಕೆ ಮಾರಕವಾಗಲಿದೆ ಕಾಯ್ದೆ
ಈ ಕಾಯ್ದೆಗಳಿಂದ ಬಾಧಿತರಾಗಲಿರುವ ಎಲ್ಲಾ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕೃಷಿ ಮಾರುಕಟ್ಟೆ ವರ್ತಕರು, ನೌಕರರು, ಹಾಲು ಉತ್ಪಾದಕರು, ಸಹಕಾರ ಸಂಘಗಳು, ಕೋಳಿ ಕುರಿ ಸಾಕಾಣೆದಾರರು, ಮಾಂಸ ವ್ಯಾಪಾರಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು, ಕಾರ್ಮಿಕರು ಹಾಗೂ ಸಮಸ್ತ ಗ್ರಾಹಕ ಸಮುದಾಯ ಈ ಚಳುವಳಿಯಲ್ಲಿ ಭಾಗಿಯಾಗಲು ಸಭೆಯು ಮನವಿ ಮಾಡಿದೆ.
Recommended Video
ವಿವಿಧ ಸಂಘಗಳ ರೈತ ಮುಖಂಡರು ಭಾಗಿ
ಒಂದು ವೇಳೆ ರಾಜ್ಯ ಸರಕಾರ ತನ್ನ ಹಠವನ್ನು ಮುಂದುವರೆಸಿ, ಸುಗ್ರೀವಾಜ್ಞೆಗಳನ್ನು ಕಾಯ್ದೆಗಳನ್ನಾಗಿಸಲು ಕ್ರಮ ವಹಿಸಿದಲ್ಲಿ ಮುಂದೆ ಮತ್ತಷ್ಟು ವಿಶಾಲವಾದ ಚಳವಳಿಯನ್ನು ಸಂಘಟಿಸುವುದಾಗಿ ಸಭೆಯು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಸಭೆಯ ಅಧ್ಯಕ್ಷತೆಯನ್ನು ಬಡಗಲಪುರ ನಾಗೇಂದ್ರರವರು ವಹಿಸಿದ್ದರು. ಸಭೆಯಲ್ಲಿ ಎಐಕೆಎಸ್ಸಿಸಿಯ ಕೇಂದ್ರ ಸಮಿತಿ ಸದಸ್ಯರಾದ ಶ್ರೀಮತಿ ಕವಿತಾ ಕುರುಗಂಟಿ, ಎಐಕೆಎಸ್ಸಿಸಿ ಕರ್ನಾಟಕ ಸಂಚಾಲಕರಾದ ಜಿ.ಸಿ. ಬಯ್ಯಾರೆಡ್ಡಿ, ಕೇಂದ್ರ ಸಮಿತಿ ಸದಸ್ಯರಾದ ಕೋಡಿಹಳ್ಳಿ ಚಂದ್ರಶೇಖರ, ಚಾಮರಸ ಪಾಟೀಲ, ವೀರಸಂಗಯ್ಯ, ಗೋಪಾಲ್ ಪಿ.ವಿ. ಲೋಕೇಶ್, ದಿವಾಕರ, ಚಂದ್ರಪ್ಪ ಹೊಸಕೇರಾ ಮುಂತಾದವರು ಪಾಲ್ಗೊಂಡಿದ್ದರು.