ಆರ್.ಆರ್.ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಆರ್.ಅಶೋಕ?
Recommended Video
ಬೆಂಗಳೂರು, ಜನವರಿ 30 : ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ?. ಇಂತಹ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಕೆಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.
ಹೌದು, ಬೆಂಗಳೂರು ನಗರದ ಪ್ರಭಾವಿ ಬಿಜೆಪಿ ನಾಯಕ, ಒಕ್ಕಲಿಗ ಸಮುದಾಯದ ಮುಖಂಡ ಆರ್.ಅಶೋಕ ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ. ಬಿಜೆಪಿ ಹೈಕಮಾಂಡ್ ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಅಶೋಕ ಅವರಿಗೆ ಸೂಚನೆ ನೀಡಿದೆ ಎಂಬುದು ಹರಿದಾಡುತ್ತಿರುವ ಸುದ್ದಿ.
ಪದ್ಮನಾಭನಗರ : ಆರ್.ಅಶೋಕ ಸೋಲಿಸಲು ಜೆಡಿಎಸ್, ಕಾಂಗ್ರೆಸ್ ತಂತ್ರ!
ಆರ್.ಅಶೋಕ ಅವರು ಹಾಲಿ ಪದ್ಮನಾಭನಗರ ಕ್ಷೇತ್ರದ ಶಾಸಕರು. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರು ಕಾಂಗ್ರೆಸ್ ನಾಯಕ, ಸಿನಿಮಾ ನಿರ್ಮಾಪಕ ಮುನಿರತ್ನ. ಮುನಿರತ್ನರನ್ನು ಸೋಲಿಸಲು ಆರ್.ಅಶೋಕ ಅವರ ಕ್ಷೇತ್ರ ಬದಲಾವಣೆಗೆ ಬಿಜೆಪಿ ತಂತ್ರ ರೂಪಿಸಿದೆ.
ಸಿದ್ದು ಮೇಲಿನ ಮುನಿಸಿಗೆ ಪಕ್ಷ ತೊರೆಯಲು ಮುಂದಾದ ಮುನಿರತ್ನ?
ಆರ್.ಅಶೋಕ ಅವರು ಕ್ಷೇತ್ರ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜರಾಜೇಶ್ವರಿ ನಗರದಲ್ಲಿ ಪಕ್ಷ ಆಯೋಜಿಸಿದ್ದ ಪ್ರಚಾರ ಸಭೆಯಿಂದಲೂ ಅವರು ದೂರವುಳಿದಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರ
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಆರ್.ಅಶೋಕ ಅವರೇ ಶಾಸಕರಾಗಿದ್ದರು. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಉತ್ತರಹಳ್ಳಿ ಕ್ಷೇತ್ರ ಪದ್ಮನಾಭನಗರ, ಯಶವಂತಪುರ, ರಾಜರಾಜೇಶ್ವರಿ ನಗರ ಕ್ಷೇತ್ರವಾಯಿತು.
ಪದ್ಮನಾಭನಗರಕ್ಕೆ ಬಂದರು
ಉತ್ತರಹಳ್ಳಿ ಕ್ಷೇತ್ರ ವಿಭಜನೆಯಾದ ಬಳಿಕ ಆರ್.ಅಶೋಕ ಅವರು ಪದ್ಮನಾಭನಗರವನ್ನು ಆಯ್ಕೆ ಮಾಡಿಕೊಂಡರು. ಆ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಈ ಬಾರಿ ಕ್ಷೇತ್ರ ಬದಲಾವಣೆ ಮಾಡುವ ಸುದ್ದಿ ಹಬ್ಬಿದೆ.
ಮುನಿರತ್ನ ಸೋಲಿಸಲು ತಂತ್ರ
ಬೆಂಗಳೂರು ನಗರದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಆದ್ದರಿಂದ, ಆರ್.ಅಶೋಕ ಅವರಿಗೆ ಕ್ಷೇತ್ರ ಬದಲಾವಣೆ ಮಾಡಿ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದೆ. ಈ ಮೂಲಕ ಕ್ಷೇತ್ರದಲ್ಲಿ ಮುನಿರತ್ನ ಅವರನ್ನು ಸೋಲಿಸಲು ಯೋಜನೆ ಸಿದ್ಧವಾಗಿದೆ.
ಅಶೋಕ ಅಸಮಾಧಾನ
ಆರ್.ಅಶೋಕ ಅವರು ಕ್ಷೇತ್ರ ಬದಲಾವಣೆಗೆ ಒಪ್ಪಿಗೆ ನೀಡಿಲ್ಲ. ಪಕ್ಷದ ನಾಯಕರ ವಿರುದ್ಧ ಅವರು ಅಸಮಾಧಾನಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಪ್ರಭಾವಿ ನಾಯಕ ಆರ್.ಅಶೋಕ
ಆರ್.ಅಶೋಕ ಅವರು ಬೆಂಗಳೂರಿನ ಪ್ರಭಾವಿ ನಾಯಕರು. ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಅವರು ಹೊಂದಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ಅಶೋಕ ಅವರು ಬೆಂಗಳೂರಿನ ರಾಜಕಾರಣದ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.
2013ರ ಚುನಾವಣೆ ಫಲಿತಾಂಶ
ಕಳೆದ ಚುನಾವಣೆಯಲ್ಲಿ ಮುನಿರತ್ನ 71,064 ಮತಗಳು, ಜೆಡಿಎಸ್ನ ಕೆ.ಎಲ್.ಆರ್.ತಿಮ್ಮಯ್ಯ 52,251 ಮತ, ಬಿಜೆಪಿಯ ಎಂ.ಶ್ರೀನಿವಾಸ್ 50,726 ಮತಗಳನ್ನು ಪಡೆದಿದ್ದಾರೆ.