Govt Less Revenue: ಗುರಿಗಿಂತ ಕಡಿಮೆ ಆದಾಯ ಸಂಗ್ರಹ, ಆರ್ಥಿಕ ಸ್ಥಿತಿ ಹದಗೆಡಲು ಇದೇ ಕಾರಣ:ಆರ್.ಅಶೋಕ್
ಬೆಂಗಳೂರು, ಅಕ್ಟೋಬರ್ 05: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ 2024-25ನೇ ಸಾಲಿನ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಸರ್ಕಾರದ ಗುರಿಗಿಂತ ಸುಮಾರು 10,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಕಡಿಮೆ ಆಗಿದೆ. ಇದು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಹಿಡಿದ ಕನ್ನಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್ ಅವರು, ರಾಜ್ಯ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ದಿನೇ ದಿನೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ ಎಂದು ಲಭ್ಯ ವರದಿ ಉಲ್ಲೇಖಿಸಿ ಅವರು ಮಾತನಾಡಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಬಂದು 17 ತಿಂಗಳು ಆಗಿದೆ. ದಿನ ಬೆಳಗಾದರೆ ಭ್ರಷ್ಟಾಚಾರ, ರಾಜಕೀಯ ಮೇಲಾಟ, ಕುರ್ಚಿ ಗುದ್ದಾಟ, ಆಂತರಿಕ ಕಲಹ, ಬಾಣ ಬಡಿದಾಟಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಳುಗಿ ಹೋಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಪರಿಣಾಮವಾಗಿ ಇಂದು ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅವರು ದೂರಿದರು.
ಇದು ಶೋಚನೀಯ ಸ್ಥಿತಿ: ಲೇವಡಿ
ಒಂದು ಗ್ಯಾರೆಂಟಿಗಳಿಂದ ದಿವಾಳಿ ಆಗಿರುವ ಭಾರತೀಯ ಕಾಂಗ್ರೆಸ್ ಪಕ್ಷದ ಆಡಳಿತ ಇರುವ ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಸೀಟಿಗೂ 25 ರೂಪಾಯಿ ಸುಂಕ ಹೇರಿ ಆದೇಶಿಸಿದೆ. ಇದೊಂದು ರೀತಿಯ ಶೋಚನೀಯ ಪರಿಸ್ಥಿತಿ ಎನ್ನಬಹುದು ಎಂದ ಅವರು ಲೇವಡಿ ಮಾಡಿದ್ದಾರೆ.

ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಆಡಳಿತ ವ್ಯವಸ್ಥೆ ಸರಿ ದಾರಿಗೆ ಹೋದರೆ ಕರ್ನಾಟಕದಲ್ಲಿ ಸಹ ಹಿಮಾಚಲ ಪ್ರದೇಶದ ದುಸ್ಥಿತಿ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಇಲ್ಲಿ ಸಹ ಸರ್ಕಾರ ನಗೆಪಾಟಲಿಗೆ ಈಡಾಗುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದರು.
ಬರ, ನೆರೆ ಹಾವಳಿಗಳಿಂದ ಕಂಗೆಟ್ಟು ಸಮಯಕ್ಕೆ ಸರಿಯಾಗಿ ಪರಿಹಾರ ಸಿಗದೆ ಸರ್ಕಾರದ ವಿರುದ್ಧ ಬೇಸತ್ತಿರುವ ರೈತರು, ಕೃಷಿ ಕಾರ್ಮಿಕರು, ಬಡವರು ಕಾಂಗ್ರೆಸ್ ಪಕ್ಷದ ವಿರುದ್ಧ ದಂಗೆ ಏಳುವ ಮುನ್ನ ಸರ್ಕಾರ ಸುಸೂತ್ರ ಆಡಳಿತ ನೀಡಬೇಕು. ಜನರ ಕಷ್ಟಗಳಿಗೆ ತುರ್ತಾಗಿ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಆದಾಯದ ಗುರಿ ಎಷ್ಟು?
ಕರ್ನಾಟಕ ರಾಜ್ಯ ಸರ್ಕಾರ ವಾರ್ಷಿಕವಾಗಿ ಒಟ್ಟು 1.87 ಸಾವಿರ ಕೋಟಿ ರೂಪಾಯಿ ಗುರಿ ಹೊಂದಿತ್ತು. ಈ ಪೈಕಿ ಇದರಲ್ಲಿ ಶೇಕಡಾ 44ರಷ್ಟು ಮಾತ್ರವೇ ಸಂಗ್ರಹವಾಗಿದೆ. ಇನ್ನು ಮುಂದಿನ ಕೆಲವು ತಿಂಗಳಲ್ಲಿ ಹಬ್ಬಗಳು ಎದುರಾಗಲಿವೆ. ಈ ಕಾರಣದಿಂದ ಆದಾಯ ಸಂಗ್ರಹದಲ್ಲಿ ಏರಿಕೆ ಆಗಬಹುದು ಎಂದು ನಿರೀಕ್ಷೆ ಇದೆ.
ಇನ್ನೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೊಳಿಸಿದ ನಂತರ ಆರ್ಥಿಕ ನಷ್ಟಕ್ಕೆ ಸಿಲುಕಿತ್ತು. ಆದಾಯ ಕ್ರೂಢೀಕರಣನ್ನೆ ದಾರಿ ಹುಡುಕಿತ್ತು. ಇದರಲ್ಲಿ ಶೌಚಾಲಯಗಳ ಮೇಲಿನ ತೆರಿಗೆ ವಿಧಿಸುವುದು ಒಂದಾಗಿದೆ. ಶೌಚಾಲಯ ಆಧರಿಸಿ ತೆರಿಗೆ ವಿಧಿಸಿ ಆದೇಶಿಸಿತ್ತು. ಬಳಿಕ ಬಿಜೆಪಿ ಆಕ್ಷೇಪಣೆ ಮೇರೆಗೆ ಆದೇಶ ಹಿಂಪಡೆದಿದೆ ಎಂದು ವರದಿ ಆಗಿದೆ.












Click it and Unblock the Notifications