ಪೇಜಾವರ ಶ್ರೀಗಳಿಗೆ ಒಂದು ವಾರದ ಮುನ್ನವೇ ಸಾವಿನ ಮುನ್ಸೂಚನೆಯಿತ್ತೇ?
Recommended Video
ಬೆಂಗಳೂರು, ಡಿ 29: ಯತಿಕುಲ ಚಕ್ರವರ್ತಿ, ಮಾಧ್ವಪೀಠದ ಹಿರಿಯ ಯತಿ, ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ್ವತೀರ್ಥ ಸ್ವಾಮೀಜಿಗಳು ಹರಿಪಾದವನ್ನು ಸೇರಿದ್ದಾರೆ.
ಅವರೇ ಬಯಸಿದಂತೆ, ಅವರ ಅಂತಿಮ ವಿಧಿವಿಧಾನ, ಬೆಂಗಳೂರಿನ ಪೇಜಾವರ ಮಠದ ಒಡೆತನದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ, ಸಕಲ ಸರಕಾರೀ ಮರ್ಯಾದೆಯೊಂದಿಗೆ ನಡೆಯುತ್ತಿದೆ.
ಪೇಜಾವರ ಶ್ರೀಗಳ ಧರ್ಮ ಸಹಿಷ್ಣುತೆಗೆ ಕಾರು ಚಾಲಕನ ಹೆಸರೇ ಸಾಕ್ಷಿ
ಡಿಸೆಂಬರ್ ಹತ್ತೊಂಬತ್ತರಂದು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳನ್ನು, ಉಡುಪಿ ಅಷ್ಠಮಠಗಳಲ್ಲೊಂದಾದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೇಟಿಯಾಗಿದ್ದರು. ಆ ವೇಳೆ, ಪೇಜಾವರ ಶ್ರೀಗಳು, ಪುತ್ತಿಗೆ ಶ್ರೀಗಳ ಕಿವಿಯಲ್ಲಿ ಕೇಳಿದ ಪ್ರಶ್ನೆ, ಅವರಿಗೆ ಸಾವಿನ ಮುನ್ಸೂಚನೆಯಿತ್ತೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಶ್ರೀಗಳಿಗೆ ಸಂತಾಪ ಸಲ್ಲಿಸುತ್ತಾ ಪುತ್ತಿಗೆ ಶ್ರೀಗಳು ಹೇಳಿದ್ದು ಹೀಗೆ, " ಶ್ರೀಗಳನ್ನು ಭೇಟಿಯಾದಾಗ ನನ್ನಲ್ಲಿ ಒಂದು ಪ್ರಶ್ನೆಯನ್ನು ಅವರು ಕೇಳಿದರು. ಡಿಸೆಂಬರ್ 23ರ ನಂತರ ಉಡುಪಿ, ಬೆಂಗಳೂರು ಬಿಟ್ಟು ಅಥವಾ ವಿದೇಶಕ್ಕೆ ಹೋಗುತ್ತಿಲ್ಲವಲ್ಲವೇ, ಎನ್ನುವ ಪ್ರಶ್ನೆಯನ್ನು ಕೇಳಿದರು.
"ನಾನು ಇಲ್ಲ, ಎಲ್ಲಿಗೂ ಹೋಗುವ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದೆ. ಶ್ರೀಗಳು ಯಾವ ಕಾರಣಕ್ಕಾಗಿ ನನಗೆ ಈ ಪ್ರಶ್ನೆಯನ್ನು ಕೇಳಿದರು ಎನ್ನುವುದು ಈಗ ನನಗೆ ಅರ್ಥವಾಗುತ್ತಿದೆ" ಎಂದು ಪುತ್ತಿಗೆ ಶ್ರೀಗಳು ಹೇಳಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಇಂದು (ಡಿ 29) ಬೆಳಗ್ಗೆ, ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ವಿಶೇಷ ಅಂಬುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. ಅದಾದ ಸ್ವಲ್ಪಹೊತ್ತಿನಲ್ಲೇ, ಶ್ರೀಗಳು ಹರಿಪಾದ ಸೇರಿದರು ಎನ್ನುವ ಪ್ರಕಟಣೆ ಹೊರಬಿತ್ತು.