ದೇವಪ್ರಿಯೆ ಆಸೆ ತೀರಿಸಲು ಮೂರು ತಾಸು ಕಾದು ಕುಳಿತಿದ್ದ ಪುನೀತ್ ರಾಜ್ ಕುಮಾರ್!
ಬೆಂಗಳೂರು, ನ. 03: ಬೆಳಗ್ಗೆ ಎದ್ದು ಅಪ್ಪು ಮುಖ ನೋಡಿದ್ರೆನೇ ಆಕೆಗೆ ಸಮಾಧಾನ. ಮನೆಯ ಎಲ್ಲಾ ಗೋಡೆಗಳ ಮೇಲೂ ಅಪ್ಪು ಚಿತ್ರಗಳದ್ದೇ ಕಾರುಬಾರು. ಟಿವಿಯಲ್ಲಿ ಅಪ್ಪು ಬರುವಾಗ ಕರೆಂಟ್ ಹೋದ್ರೆ ಅಳು ಶುರು ಮಾಡುತ್ತಾಳೆ. ಅಪ್ಪು ಬಗ್ಗೆ ಇಂತಹ ಹುಚ್ಚು ಅಭಿಮಾನ ಬೆಳೆಸಿಕೊಂಡಿರುವ ವಿಕಲಚೇತನ (ದಿವ್ಯಾಂಗ) ಮಗುವಿನ ಆಸೆ ತೀರಿಸಲು ನಟ ಪುನೀತ್ ಮೂರು ತಾಸು ಕಾದಿದ್ದರು. ಆಕೆಯ ಆಸೆಯಂತೆ ಜತೆಗಿದ್ದು, ಹೊಸ ಬಟ್ಟೆ ಕೊಟ್ಟು ಕಳುಹಿಸಿದ್ದರು. ವಿಧಿಯಾಟ ಅಪ್ಪು ನಮ್ಮೊಂದಿಗೆ ಇಲ್ಲ. ಈ ವಿಚಾರ ಆ ಮಗುವಿಗೆ ಗೊತ್ತಾಗಿಲ್ಲ. ಗೊತ್ತಾದರೆ ಏನಾಗುತ್ತಾಳೋ ದೇವರೇ ಬಲ್ಲ!
ತುಮಕೂರು ಜಿಲ್ಲೆ ಕೊರಟೆಗೆರೆ ತಾಲೂಕಿನ ತೊವಿನಕೆರೆ ನಿವಾಸಿ ಸುರೇಶ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ದೇವಪ್ರಿಯ ಕಥೆಯಿದು. ಜನಿಸಿದಾಗಲೇ ಬುದ್ಧಿಮಾಂದ್ಯ ಆಗಿರುವ ದೇವಪ್ರಿಯಾಗೆ ಮಾತು ಬರಲ್ಲ. ಬರುವ ಮೂರು ಪದಗಳಲ್ಲಿ ಒಂದು ಅಪ್ಪು, ಅಮ್ಮ ಮತ್ತು ಅಪ್ಪ ಮೂರು ಮಾತಷ್ಟೇ. ಅಪ್ಪು ಸಾವಿನ ಬಗ್ಗೆ ಈಕೆಗೆ ಅನುಮಾನ ಬಂದು ಪೋಷಕರನ್ನು ಪದೇ ಪದೇ ಕೇಳಿದ್ದಾಳೆ. ಅಪ್ಪು ನಿಧನ ಹೊಂದಿಲ್ಲ, ಅವರು ಬರ್ತಡೇ ಹಾಗೂ ಶೂಟಿಂಗ್ ನಡೆಯುತ್ತಿದೆ ಎಂದೇಳಿ ಸಮಾಧಾನ ಪಡಿಸಿದ್ದಾರೆ.
ಸುರೇಶ್ ಮತ್ತು ಸಂಧ್ಯಾ ದಂಪತಿಗೆ ಮೂರು ಮಕ್ಕಳು. ಮೊದಲನೇ ಮಗು ದೇವಪ್ರಿಯೆ. ಜನಿಸಿದಾಗನಿಂದಲೂ ಬುದ್ಧಿಮಾಂದ್ಯತೆ. ಅನೇಕ ವರ್ಷ ನಿಮ್ಹಾನ್ಸ್ನಲ್ಲಿ ತೋರಿಸಿದರೂ ಪ್ರಯೋಜನವಾಗಲಿಲ್ಲ.
ನಟ ಪುನೀತ್ ಎಂದ್ರೆ ಪಂಚ ಪ್ರಾಣ
ಆದರೆ, ದೇವಪ್ರಿಯೆಗೆ ಹನ್ನೆರಡು ವರ್ಷವಿದ್ದಾಗಿನಿಂದಲೂ ನಟ ಪುನೀತ್ ಎಂದ್ರೆ ಪಂಚ ಪ್ರಾಣ. ಪೇಪರ್ಗಳಲ್ಲಿ ಬರುವ ಪುನೀತ್ ಪೋಟೋ ಕಟ್ ಮಾಡಿ ಮನೆಯ ಗೋಡೆಗಳ ಮೇಲೆ ಅಂಟಿಸೋಳು. ಟಿವಿಯಲ್ಲಿ ಪುನೀತ್ ಚಿತ್ರ ಬಂದರೆ ಖುಷಿ ಪಡುವಳು. ಯಾರಾದರೂ ಟಿವಿ ಸ್ವಿಚ್ ಆಫ್ ಮಾಡಿದರೆ ಅಳುವರು, ಪ್ರತಿ ಕ್ಷಣವೂ ನಟ ಪುನೀತ್ಗಾಗಿಯೇ ಪರಿತಪಿಸುತ್ತಿದ್ದಳು. ಪುನೀತ್ನನ್ನು ನೋಡಬೇಕೆಂದು ಹಠ ಹಿಡಿದು ಊಟ ತ್ಯಜಿಸಿದರು.
ವಿಷಯ ತಿಳಿದ ಯುವ ಬ್ರಿಗೇಡ್ನ ಮುರಳಿ
ಈ ವಿಚಾರವನ್ನು ಅಪ್ಪು ಯುವ ಬ್ರಿಗೇಡ್ನ ಮುರಳಿ ಅವರು ನಟ ಪುನೀತ್ ಅವರ ಕಿವಿಗೆ ಹಾಕಿದರು. ಅಪ್ಪು ಆ ಮಗುವನ್ನು ಸದಾಶಿವನಗರದಲ್ಲಿರುವ ಕಚೇರಿಗೆ ಬರುವಂತೆ ಹೇಳಿ ಕಳಿಸಿದ್ದರು. ಅಪ್ಪು ಒಪ್ಪಿಗೆ ಸಂಗತಿಯನ್ನು ದೇವಪ್ರಿಯೆ ಪೋಷಕರಿಗೆ ತಿಳಿಸಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಪುನೀತ್ ಭೇಟಿಗೆ ಸಮಯ ನಿಗದಿ ಮಾಡಲಾಗಿತ್ತು. ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅಪ್ಪು ಅರ್ಧ ತಾಸು ಈ ಕೆಲಸಕ್ಕೆ ನಿಗದಿ ಮಾಡಿಕೊಂಡಿದ್ದರು.
ದೇವಪ್ರಿಯೆ ಸಂಪೂರ್ಣ ಬದಲಾಗಿ ಹೋಗಿದ್ದಳು
ಆದರೆ, ತುಮಕೂರಿನ ಕೊರಟಗೆರೆ ಹಳ್ಳಿಯಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ದೇವಪ್ರಿಯಾ ಕುಟುಂಬಕ್ಕೆ ತಡವಾಗಿತ್ತು. ಎಲ್ಲವನ್ನು ಬಿಟ್ಟು ಆ ಮಗುವಿನ ಆಸೆ ತೀರಿಸಲು ನಟ ಪುನೀತ್ ಮೂರು ತಾಸು ಕಾದು ಕುಳಿತಿದ್ದರು. ಮೂರು ತಾಸು ಬಳಿಕ ಬಂದ ದೇವಪ್ರಿಯೆ ಹಾಗೂ ಅವರ ತಂದೆ ತಾಯಿಯನ್ನು ಕಚೇರಿಯಲ್ಲಿ ಭೇಟಿ ಮಾಡಿದ್ದರು. ದೇವಪ್ರಿಯೆಗೆ ಬಟ್ಟೆ ಕೊಡಿಸಿ ಅಣ್ಣನಂತೆ ನಡೆದುಕೊಂಡಿದ್ದರು. ಅಂದಿನಿಂದ ಬದಲಾದ ದೇವಪ್ರಿಯೆ ಸಂಪೂರ್ಣ ಬದಲಾಗಿ ಹೋಗಿದ್ದಳು.
ಪುನೀತ್ ಭೇಟಿಯಿಂದ ಬದಲಾದ ದೇವಪ್ರಿಯೆ
ನಟ ಪುನೀತ್ ಅವರನ್ನು ನೋಡಿದ ಬಳಿಕ ದೇವಪ್ರಿಯೆ ಸಂಪೂರ್ಣ ಬದಲಾಗಿ ಹೋಗಿದ್ದಳು. ಮಾತೇ ಆಡದೇ ಇರುತ್ತಿದ್ದವಳು ಅಪ್ಪ, ಅಮ್ಮ, ಅಪ್ಪು ಅನ್ನೋದನ್ನು ಕಲಿತಳು. ಒಂದೊತ್ತು ಊಟ ಮಾಡುತ್ತಿದ್ದ ಈಕೆ ಪ್ರತಿ ದಿನವೂ ಮೂರು ಹೊತ್ತು ಊಟ ಮಾಡುತ್ತಿದ್ದಳು. ಪ್ರತಿ ನಿತ್ಯವೂ ಪುನೀತ್ ಹೆಸರಿನಲ್ಲಿಯೇ ಉಸಿರಾಡುತ್ತಿದ್ದಳು. ಹೋಟೆಲ್ ನಿಂದ ತಿಂಡಿ ಕಟ್ಟಿಸಿಕೊಂಡು ಬರುವ ಪೇಪರ್ ನಲ್ಲಿ ಪುನೀತ್ ಪೋಟೋ ಇದ್ರೂ ಅದನ್ನು ಕಟ್ ಮಾಡಿ ಗೋಡೆ ಮೇಲೆ ಅಂಟಿಸುತ್ತಾಳೆ. ಪ್ರತಿ ಕ್ಷಣವೂ ಪುನೀತ್ ಹೆಸರಿನಲ್ಲಿ ಉಸಿರಾಡುತ್ತಿದ್ದಾಳೆ.
ದೇವಪ್ರಿಯೆ ತಂದೆ ಸುರೇಶ್ ಪ್ರತಿಕ್ರಿಯೆ
"ನನ್ನ ಮಗು ದೇವಪ್ರಿಯೆ ಬುದ್ಧಿಮಾಂದ್ಯ ಮಗು. ಬದುಕುವ ಗ್ಯಾರಂಟಿ ಇರಲಿಲ್ಲ. ಪುನೀತ್ ರಾಜ್ ಕುಮಾರ್ ಬಗ್ಗೆ ಅದ್ಯಾಕೆ ಇಷ್ಟು ಅಭಿಮಾನ ಬೆಳೆಸಿಕೊಂಡಿದ್ದಾಳೋ ಗೊತ್ತಿಲ್ಲ. ಅಪ್ಪುನ್ನು ನೋಡಬೇಕು ಎಂದು ಹುಚ್ಚು ಹಿಡಿಸಿಕೊಂಡಳು. ದಿನ ನಿತ್ಯದ ಪೇಪರ್ಗಳಲ್ಲಿ ಕಾಣುವ ಅಪ್ಪು ಪೋಟೋ ಕತ್ತರಿಸಿ ಗೋಡೆಗಳ ಮೇಲೆ ಅಂಟಿಸುತ್ತಿದ್ದಳು. ಅಪ್ಪು ಟಿವಿಯಲ್ಲಿ ಬರ್ತಿರಬೇಕು. ಇಲ್ಲದಿದ್ದರೆ ಅವಳನ್ನು ಸುಧಾರಿಸಲು ಆಗಲ್ಲ. ಹೇಗೋ ಮುರಳಿ ಸರ್ ಗಮನಕ್ಕೆ ವಿಚಾರ ತಂದೆವು. ಒಂದೇ ದಿನದಲ್ಲಿ ಪುನೀತ್ ಅವರನ್ನು ಭೇಟಿ ಮಾಡಿಸಿದರು. ನನ್ನ ಬುದ್ಧಿಮಾಂದ್ಯ ಮಗುವಿನ ಆಸೆ ತೀರಿಸಲು ಪುನೀತ್ ರಾಜ್ ಕುಮಾರ್ ಮೂರು ಗಂಟೆ ಕಾಲ ಕಾದಿದ್ದರು. ಸ್ವಂತ ನೆಂಟರಂತೆ ಭಾವಿಸಿದರು. ನನ್ನ ಮಗಳಿಗೆ ಬಟ್ಟೆ ಕೊಡಿಸಿದರು. ಅಂದಿನಿಂದ ನನ್ನ ಮಗಳು ಖುಷಿಯಾಗಿದ್ದಾಳೆ. ಆಕೆಯಲ್ಲಿ ಸಾಕಷ್ಟು ಬದಲಾವಣೆ ಆಯಿತು ಎಂದು ದೇವಪ್ರಿಯೆ ತಂದೆ ಸುರೇಶ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
Recommended Video
ಅಪ್ಪು ನಿಧನದ ಸುದ್ದಿ ಮುಚ್ಚಿಟ್ಟರು
ಅಪ್ಪು ನಿಧನ ಹೊಂದಿದ ದಿನ ದೇವಪ್ರಿಯೆ ಎಲ್ಲಾ ಚಾನೆಲ್ ಹಾಕಿದ್ದಾಳೆ. ಯಾಕೆ ಎಲ್ಲಾ ಚಾನೆಲ್ನಲ್ಲಿ ಅಪ್ಪು ಬರ್ತಿದ್ದಾರೆ ಎಂದು ಮೂಕ ಭಾಷೆಯಲ್ಲಿ ಕೇಳಿದ್ದಾಳೆ. ಅಪ್ಪು ಹುಟ್ಟು ಹಬ್ಬ ಇದೆ. ಸಿನಿಮಾ ಶ್ಯೂಟಿಂಗ್ ನಡೆಯುತ್ತಿದೆ. ಹೀಗಾಗಿ ಅಷ್ಟು ಜನ ಸೇರಿದ್ದಾರೆ ಎಂದು ಸುಳ್ಳು ಹೇಳಿ ದೇವಪ್ರಿಯೆಯನ್ನು ಸಮಾಧಾನ ಪಡಿಸಿದ್ದಾರೆ. ಅಪ್ಪು ಮಲಗಿದ್ದ ಪೋಟೋ ನೋಡಿ ಅಪ್ಪುನನ್ನು ಯಾಕೆ ಹೀಗೆ ಮಲಗಿಸಿದ್ದಾರೆ ಎಂದೆಲ್ಲಾ ಕೇಳಿದ್ದಾರೆ. ಒಂದೊಂದು ಸಬೂಬು ಕೊಟ್ಟು ಅಪ್ಪು ನಿಧನದ ಸುದ್ದಿಯೇ ದೇವಪ್ರಿಯೆಗೆ ಇನ್ನೂ ಗೊತ್ತಾಗಿಲ್ಲ. ಅಪ್ಪು ಭೇಟಿ ಬಳಿಕ ಅಮೂಲಾಗ್ರ ಬದಲಾವಣೆ ಆಗಿರುವ ದೇವಪ್ರಿಯೆ ಇದ್ದಾಳೆ. ಆದರೆ ಆಕೆಯ ಖುಷಿಗೆ ಕಾರಣವಾದ ಅಪ್ಪು ಇಲ್ಲದಿರುವುದು ಇಂತಹ ಅದೆಷ್ಟೋ ವ್ಯಕ್ತಿಗಳ ಪಾಲಿಗೆ ಬದುಕೇ ಶೂನ್ಯವೆನಸಿದೆ. ಅಪ್ಪು ಚಿತ್ರ ಇರುವ ಯಾವುದೇ ವಸ್ತು ದೇವ ಪ್ರಿಯೆ ಸಂಗ್ರಹಿಸಿಡುತ್ತಿದ್ದಾಳೆ. ಆದರೆ, ಈ ಖುಷಿ ನೋಡಲು ಅಪ್ಪು ಇಲ್ಲವಲ್ಲ ಎಂದು ದೇವಪ್ರಿಯೆ ಕುಟುಂಬ ಕಣ್ಣೀರು ಹಾಕುತ್ತಿದೆ.