ಪಿಯು ಪರೀಕ್ಷೆ, ಮೌಲ್ಯಮಾಪನ: ಉಪನ್ಯಾಸಕರ ಸಂಘ ಹೇಳಿದ್ದೇನು?
ಬೆಂಗಳೂರು: ರಾಜ್ಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ಆರಂಭವಾಗಿದೆ. ಆದರೆ, ಮೌಲ್ಯಮಾಪದಲ್ಲಿ ಆಗುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರಗಳನ್ನು ಸೂಚಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದೆ.
ಪ್ರಥಮ ಪಿಯು ಪರೀಕ್ಷೆ ನ.15ರಿಂದ 23ರವರೆಗೆ ನಡೆಯುತ್ತದೆ. ಅದೇ ರೀತಿ ದ್ವಿತೀಯ ಪಿಯು ಪರೀಕ್ಷೆಯನ್ನು ನ.29ರಿಂದ ಡಿ.10ರವರೆಗೆ ನಡೆಸಲು ತೀರ್ಮಾನಿಸಿ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸುಮಾರು ಒಂದು ತಿಂಗಳ ಅವಧಿ ಮಧ್ಯಂತರ ಪರೀಕ್ಷೆಗೆ ತೆಗೆದುಕೊಳ್ಳುತ್ತದೆ. ಇದೊಂದು ಅವೈಜ್ಞಾನಿಕ ಕ್ರಮ. ಎರಡೂ ತರಗತಿಗಳ ಪರೀಕ್ಷೆಯನ್ನು ಒಂದೇ ಬಾರಿ ನಡೆಸಿದರೆ, ಬೋಧನೆಗೆ ಹೆಚ್ಚಿನ ಸಮಯ ಸಿಕ್ಕಂತಾಗುತ್ತಿತ್ತು. ಅಲ್ಲದೆ, ಕೊಠಡಿಗಳ ಕೊರತೆ ಇರುವ ಕಾಲೇಜುಗಳಲ್ಲಿ ಒಂದು ತರಗತಿಯ ಪರೀಕ್ಷೆಯ ಸಂದರ್ಭದಲ್ಲಿ ಮತ್ತೊಂದು ತರಗತಿಯ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ರಜೆ ನೀಡಬೇಕಾದ ಪರಿಸ್ಥತಿ ಬಂದಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಕಾರ್ಯಾಧ್ಯಕ್ಷ ಎಸ್. ಆರ್. ವೆಂಕಟೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವರಾಮ್ ಬಿ. ಮಾಲಿಪಾಟೀಲ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು, ಪರೀಕ್ಷೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಪ್ರತಿ ತಾಲ್ಲೂಕಿಗೆ ಒಂದರಂತೆ ನೋಡಲ್ ಕೇಂದ್ರವನ್ನು ಸ್ಥಾಪಿಸಿ ಪಿಯು ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಠೇವಣಿ ಇಡಬೇಕು. ಅಲ್ಲದೆ, ಪರೀಕ್ಷೆಯ ಬಳಿಕ ಉತ್ತರ ಪತ್ರಿಕೆಗಳನ್ನು ಈ ಕೇಂದ್ರದಲ್ಲಿ ಸ್ವೀಕೃತಿ ಮಾಡುವಂತೆ ಸೂಚಿಸಲಾಗಿದೆ. ಆದರೆ, ವಾಸ್ತವವಾಗಿ ಈ ನೋಡಲ್ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಿರುವಾಗ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳಿಗೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.
ಅರ್ಧ ವಾರ್ಷಿಕ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮದ ಅನುಸಾರ ಎಲ್ಲಾ ಪಾಠಗಳನ್ನು ಪೂರ್ಣಗೊಳಿಸಿ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಆದರೆ, ಇದೇ ವರ್ಷ ಕೆಲವು ಹೊಸ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ, ಅಲ್ಲಿಗೆ ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಅಲ್ಲೂ ಸಹ ವಿದ್ಯಾರ್ಥಿಗಳಿದ್ದು, ಅವರಿಗೆ ಪೂರ್ಣ ಪ್ರಮಾಣದ ಪಠ್ಯಕ್ರಮ ಮುಗಿದಿಲ್ಲ. ಇಂತಹ ಕಡೆಗಳಲ್ಲಿ ಅತಿಥಿ ಉಪನ್ಯಾಸಕ ನೇಮಕವೂ ಸಾಧ್ಯವಾಗಿಲ್ಲ. ಇಂತಹ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ಮಾಡುವವರು ಯಾರು ಎಂದು ಉಪನ್ಯಾಸಕರ ಸಂಘ ಕೇಳಿದೆ.
ಐಸಿಎಸ್ಇ ಮತ್ತು ಸಿಬಿಎಸ್ಇ ಮಂಡಳಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ. ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಸುಧಾರಣೆ ತರುವ ಅಭಿಲಾಷೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಂದಿದ್ದರೆ, ತಾವೂ ಸಹ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಪರೀಕ್ಷಾ ಮಾರ್ಗಸೂಚಿ ತಿಳಿಸಬೇಕಾಗಿತ್ತು. ಶಿಕ್ಷಣ ತಜ್ಞರು, ವಿಷಯಗಳ ತಜ್ಞರು ಮತ್ತು ಉಪನ್ಯಾಸಕರ ಸಂಘದ ಸಭೆ ಕರೆದು ವಿದ್ಯಾರ್ಥಿಗಳನ್ನು ಅಣಿಗೊಳಿಸುವಂತೆ ಪ್ರರೇಪಿಸಬೇಕಾಗಿತ್ತು ಎಂದು ಹೇಳಿದೆ.
ಮುಖ್ಯವಾಗಿ ಮಧ್ಯವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಇದುವರೆಗೂ ತನ್ನ ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಿಸಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಯಾವ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತದೆ ಎಂಬುದರ ಅರಿವೇ ಇಲ್ಲ. ಅವರು ಪರೀಕ್ಷೆಯನ್ನು ಎದುರಿಸುವುದಾರೂ ಹೇಗೆ? ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ.
ಮೌಲ್ಯಮಾಪನದಲ್ಲಿ
ಮಾಡಬೇಕಾದ
ಬದಾವಣೆ
ಏನು?
ಅಂತರ ಜಿಲ್ಲಾ ಮಟ್ಟದಲ್ಲಿ ಉತ್ತರ ಪತ್ರಿಕೆಗಳನ್ನು ಹಂಚಿಕೆ ಮಾಡಿ ಮೌಲ್ಯಮಾಪನ ಮಾಡಬೇಕು. ಬಳಿಕ ಫಲಿತಾಂಶ ಪ್ರಕಟಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶ ನೀಡಿದೆ. ಒಂದು ಕಡೆ ನಿಗದಿತ ಪ್ರಮಾಣದ ಪಠ್ಯಕ್ರಮ ಮುಗಿದಿಲ್ಲ, ಉಪನ್ಯಾಸಕರ ಕೊರತೆ ಇದೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಸ್ಪಷ್ಟತೆ ಇಲ್ಲ, ಕಾಲೇಜುಗಳೂ ವಿಳಂಬವಾಗಿ ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಫಲಿತಾಂಶ ನೀಡಿದರೆ ಕಡಿಮೆ ಅಂಕ ಪಡೆದವರು ಮತ್ತು ಅನುತ್ತೀರ್ಣ ಆದಂತಹ ವಿದ್ಯಾರ್ಥಿಗಳು ಬಹುತೇಕ ಕಾಲೇಜಿಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದು ಉಪನ್ಯಾಸಕರ ಸಂಘ ಆತಂಕ ವ್ಯಕ್ತಪಡಿಸಿದೆ.
ಅಲ್ಲದೆ, ಪಿಯು ಕಾಲೇಜುಗಳ ಪ್ರಾಚಾರ್ಯರಿಗೆ ತಮಗೆ ವಹಿಸಿರುವ ದೈನಂದಿನ ಮತ್ತ ಬೋಧನಾ ಕಾರ್ಯಗಳ ಜೊತೆಗೆ ಪ್ರತಿದಿನ 20-30 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಲಾಗಿದೆ. ಇದು ಕಾರ್ಯಸಾಧ್ಯವೇ? ಎಂದು ಕೇಳಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಸಾಧು ಇಲ್ಲ. ಏಕಕಾಲದಲ್ಲಿಯೇ ಪರೀಕ್ಷೆಗಳನ್ನು ನಡೆಸಬೇಕು. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕಾಲೇಜುಗಳ ಹಂತದಲ್ಲಿಯೇ ಮಾಡಬೇಕು. ಬಳಿಕ ಇಲಾಖೆಯ ಸ್ಯಾಟ್ಸ್ ಪೋರ್ಟಲ್ನಲ್ಲಿ ಅಂಕ ನಮೂದಿಸಲು ಅವಕಾಶ ಮಾಡಬೇಕು. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಪುನರ್ ಪರಿಶೀಲನೆ ನಡೆಸಿ, ಮತ್ತೊಂದು ಸುತ್ತೋಲೆ ಹೊರಡಿಸಬೇಕು ಎಂದು ಉಪನ್ಯಾಸಕರ ಸಂಘ ಒತ್ತಾಯ ಮಾಡಿದೆ.