14 ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ, ಏಪ್ರಿಲ್ 18ರಂದು ಮತದಾನ
ಬೆಂಗಳೂರು, ಏಪ್ರಿಲ್ 16 : ಕರ್ನಾಟಕದಲ್ಲಿನ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಹದಿನಾಲ್ಕು ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ.
ಕಳೆದ 25 ದಿನಗಳಿಂದ ನಡೆಯುತ್ತಿದ್ದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದೆ. ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮನೆ-ಮನೆ ಪ್ರಚಾರವನ್ನು ನಡೆಸಬಹುದಾಗಿದೆ. ಅಭ್ಯರ್ಥಿಗಳಲ್ಲದವರು ಕ್ಷೇತ್ರವನ್ನು ಬಿಟ್ಟು ಹೊರಹೋಗಬೇಕಾಗಿದೆ.
14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಕೊನೆಯ ದಿನದ ಪ್ರಚಾರ ಬಾರಿ ಕಾವು ಪಡೆದುಕೊಂಡಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 'ಸ್ವಾಭಿಮಾನಿ ಸಮಾವೇಶ' ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿಯೇ ಇಡೀ ದಿನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆ ಮಾಡಿದರು. ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಕೊನೆಯ ದಿನ ಪ್ರಚಾರ ಕಾವು ಪಡೆದಿತ್ತು. ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.

ಮತದಾನ ನಡೆಯುವ 14 ಕ್ಷೇತ್ರಗಳು
ಏಪ್ರಿಲ್ 18ರಂದು ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

30 ಸಾವಿರ ಮತಗಟ್ಟೆಗಳು
ಏಪ್ರಿಲ್ 18ರಂದು ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗ 30,164 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಿದೆ. ಈಗಾಗಲೇ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ಕಳುಹಿಸಲು ಕೆಎಸ್ಆರ್ಟಿಸಿ ಬಸ್ಗಳನ್ನು ಪಡೆದುಕೊಳ್ಳಲಾಗಿದೆ. ಪೊಲೀಸರು ಸಹ ಭದ್ರತೆಯ ಉಸ್ತುವಾರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಮಂಡ್ಯದಲ್ಲಿ ಪ್ರಚಾರದ ಕಾವು
ಮೊದಲ ಹಂತದ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರು ಕ್ಷೇತ್ರ ಮಂಡ್ಯ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎದುರಾಳಿಗಳು. ಕೊನೆಯ ದಿನದ ಪ್ರಚಾರ ಮಂಡ್ಯದಲ್ಲಿ ಬಾರಿ ಕಾವು ಪಡೆದಿತ್ತು.

ಪ್ರಮುಖ ಅಭ್ಯರ್ಥಿಗಳು
ಏಪ್ರಿಲ್ 18ರಂದು ನಡೆಯುವ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
* ಎಚ್.ಡಿ.ದೇವೇಗೌಡ - ತುಮಕೂರು
* ಡಿ.ವಿ.ಸದಾನಂದ ಗೌಡ - ಬೆಂಗಳೂರು ಉತ್ತರ
* ಕೃಷ್ಣ ಬೈರೇಗೌಡ - ಬೆಂಗಳೂರು ಉತ್ತರ
* ನಿಖಿಲ್ ಕುಮಾರಸ್ವಾಮಿ - ಮಂಡ್ಯ
* ಸುಮಲತಾ ಅಂಬರೀಶ್ - ಮಂಡ್ಯ
* ಪ್ರಜ್ವಲ್ ರೇವಣ್ಣ -ಹಾಸನ
* ಎಂ.ವೀರಪ್ಪ ಮೊಯ್ಲಿ - ಚಿಕ್ಕಬಳ್ಳಾಪುರ
* ಕೆ.ಎಚ್.ಮುನಿಯಪ್ಪ - ಕೋಲಾರ












Click it and Unblock the Notifications