Breaking news; ಪಿಎಸ್ಐ ಅಕ್ರಮ, ಇಬ್ಬರು ಪೊಲೀಸರನ್ನು ಬಂಧಿಸಿದ ಸಿಐಡಿ
ಬೆಂಗಳೂರು, ಮೇ. 05: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿಯ ಫಿಂಗರ್ ಪ್ರಿಂಟ್ ವಿಭಾಗದ ಇನ್ಸ್ಪೆಕ್ಟರ್ ಆನಂದ ಮೇತ್ರಿ ಬಂಧನವಾಗಿದೆ.
ಸತತ 10 ಗಂಟೆಗಳ ವಿಚಾರಣೆ ನಡೆಸಿದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ಸಿಐಡಿ ಪೊಲೀಸ್ ಅಧಿಕಾರಿಗಳ ತಂಡ, ಇಬ್ಬರನ್ನು ಗುರುವಾರ ಸಂಜೆ ಬಂಧಿಸಿದೆ. ಇಬ್ಬರೂ ಅಧಿಕಾರಿಗಳು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಇಬ್ಬರ ಮೊಬೈಲ್ಗಳನ್ನು ವಶಕ್ಕೆ ಪಡೆದು ಪಿಎಸ್ಐ ನೇಮಕಾತಿ ಅಕ್ರಮ ಕುರಿತ ಸಂವಹನ ಸಂದೇಶಗಳ ಪತ್ತೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಪಿಎಸ್ಐ ಅಕ್ರಮದಲ್ಲಿ 2 ಕೋಟಿ ರೂ. ಡೀಲ್ ಮಾಡಿರುವ ಆರೋಪ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರ ಮೇಲಿದೆ. ಇನ್ನು ಬೆರಳಚ್ಚು ಮುದ್ರೆ ವಿಭಾಗದ ಇನ್ಸ್ಪೆಕ್ಟರ್ ಆನಂದ್ ಮೇತ್ರಿ ಕೂಡ ಶಾಮೀಲಾಗಿರುವುದು ದೃಢಪಟ್ಟ ಬೆನ್ನಲ್ಲೇ ಇಬ್ಬರನ್ನು ಬಂಧಿಸಲಾಗಿದೆ.

4 ದಿನದ ಹಿಂದಷ್ಟೇ ನಿವೃತ್ತಿ ಹೊಂದಿದ್ದ ಮಲ್ಲಿಕಾರ್ಜುನ ಸಾಲಿ, ರಾಯಚೂರು, ಕಲಬುರಗಿ ಸೇರಿದಂತೆ ಹಲವಡೆ ಕೆಲಸ ನಿರ್ವಹಿಸಿದ್ದರು. ಈತ ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಇನ್ನು ಕಲಬಬುರಗಿಯ ಜ್ಞಾನ ಜ್ಯೋತಿ ಶಾಲೆಯಲ್ಲಿನ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತು ಅಗಿರುವ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್, ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್. ಆರ್. ಹೊಸ ಮನಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.












Click it and Unblock the Notifications