ಪಿಎಸ್ಐ ಅಕ್ರಮದಲ್ಲಿ ಮಂತ್ರಿಯ ಸಹೋದರ ಶಾಮೀಲು ಆರೋಪ
ಬೆಂಗಳೂರು, ಮೇ. 02: ಮೂವರು ಪಿಎಸ್ಐ ಅಭ್ಯರ್ಥಿಗಳ ಅಕ್ರಮ ನೇಮಕದಲ್ಲಿ ಪ್ರಭಾವಿ ಸಚಿವರ ಸಹೋದರ ಕೈವಾಡ ಇರುವ ಅರೋಪ ಕೇಳಿ ಬಂದಿದೆ.
ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಪಿಎಸ್ಐ ಆಗಿ ನೇಮಕವಾಗಿದ್ದರು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 172 ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ 22 ಪಿಎಸ್ಐ ಅಭ್ಯರ್ಥಿಗಳ ಒಎಂಆರ್ ಶೀಟ್ ನಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿತ್ತು. ಈ ಕುರಿತು ಎಫ್ಎಸ್ ಎಲ್ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಹ ವರದಿ ನೀಡಿದ್ದರು. ವರದಿ ಬೆನ್ನಲ್ಲೇ 12 ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು.
ಮಂತ್ರಿ ಸಹೋದರ ಶಾಮೀಲು:
ಮಾಗಡಿ ಮೂಲದ ದರ್ಶನ್ ಗೌಡ ಎಂಬಾತ ವಿಚಾರಣೆ ವೇಳೆ ಸಿಐಡಿ ಪೊಲೀಸರ ಮುಂದೆ ಅಕ್ರಮಕ್ಕೆ ಸಂಬಂಧಸಿದಂತೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಪಿಎಸ್ಐ ನೇಮಕಾತಿ ತಾತ್ಕಾಲಿಕ ಅಯ್ಕೆ ಪಟ್ಟಿಯಲ್ಲಿ ದರ್ಶನ ಗೌಡ ನಾಲ್ಕನೇ ರ್ಯಾಂಕ್ ಗಳಿಸಿದ್ದ. ಮಂತ್ರಿಯೊಬ್ಬರ ಸಹೋದರ ನೆರವಿನಿಂದ ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿ ಈ ರ್ಯಾಂಕ್ ಪಡೆದಿರುವ ಆರೋಪ ಕೇಳಿ ಬಂದಿದ್ದು, ಇದೀಗ ದರ್ಶನ್ ಗೌಡನನ್ನು ವಿಚಾರಣೆ ನಡೆಸಿದ್ದು, ಇದೀಗ ಆ ಮಂತ್ರಿ ಯಾರು ಮಂತ್ರಿ ಸಹೋದರ ಯಾರು ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಪಿಎಸ್ಐ ಆಗಿ ನೇಮಕವಾಗಿದ್ದು, ಈ ಮೂವರು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ. ಇನ್ನು ಬೆಂಗಳೂರಿನಲ್ಲಿ ನಡೆದ ಏಳು ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯ, ಆಯ್ಕೆಯದ ಅಭ್ಯರ್ಥಿಗಳ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ನಿಂದ ಶೋಧ:
ಪಿಎಸ್ಐ ಅಕ್ರಮದಲ್ಲಿ ಮಂತ್ರಿ ಸಹೋದರ ಶಾಮೀಲಾಗಿರುವ ಆರೋಪ ಕೇಳಿ ಬಂದ ಕೂಡಲೇ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯ ಸಹೋದರನ ಪಾತ್ರದ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಒಂದು ತಂಡ ಈ ಕರಿತು ದಾಖಲೆಗಳನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದಿಡುವ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ಕೊಟ್ಟಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿ.ಎಸ್. ಉಗ್ರಪ್ಪ, "ಮಂತ್ರಿಯ ಪ್ರಭಾವ ಬಳಸಿಯೇ ಆತನ ಸಹೋದರ ಅಕ್ರಮ ಎಸಗಿರುವ ಅರೋಪ ಕೇಳಿ ಬಂದಿದೆ. ಈ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

ಮಂತ್ರಿ ಸ್ಥಾನದಿಂದ ಕೆಳಗಿಸಲು ಕೈ ತಂತ್ರ:
ಕಮೀಷನ್ ಪ್ರಕರಣದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಅವರಿಂದ ರಾಜೀನಾಮೆ ಕೊಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಇದೀಗ ಪಿಎಸ್ಐ ಅಕ್ರಮ ನೇಮಕಾತಿ ಮುಂದಿಟ್ಟುಕೊಂಡು ಪ್ರಭಾವಿ ಮಂತ್ರಿಯ ವಿರುದ್ಧ ಹೋರಾಟಕ್ಕೆ ಇಳಿಯಲು ಕಾಂಗ್ರೆಸ್ ಸಿದ್ಧತೆ ನಡೆದಿದೆ. ಮಂತ್ರಿಯ ಸಹೋದರನ ಹೆಸರು ಕೇಳಿ ಬಂದ ಕೂಡಲೇ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದೆ. ದಾಖಲೆಗಳನ್ನು ಸಾರ್ವಜನಿಕರ ಮುಂದಿಟ್ಟುಕೊಂಡು ರಾಜೀನಾಮೆಗೆ ಆಗ್ರಹಿಸಿ ಮತ್ತೊಮ್ಮೆ ಕಾಂಗ್ರೆಸ್ ನಾಯಕರು ಬೀದಿ ಹೋರಾಟಕ್ಕೆ ಇಳಿಯುವ ಲಕ್ಷಣಗಳು ಗೋಚರಿಸುತ್ತಿವೆ.












Click it and Unblock the Notifications