ಪಿಎಸ್ಐ ನೇಮಕಾತಿ ಅಕ್ರಮ: ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಮಾಡಿಸಿದ್ದ ಕಿಂಗ್ಪಿನ್ ಪಾಟೀಲ್
ಬೆಂಗಳೂರು, ಏ. 24: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸ್ಪೋಟಕ ತಿರುವು. ಪಿಎಸ್ಐ ನೇಮಕಾತಿ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್. ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆಸುತ್ತಿದ್ದ ಪ್ರಮುಖ ಕಿಂಗ್ಪಿನ್ ಆರ್. ಡಿ. ಪಾಟೀಲ್ ಮನೆಯಲ್ಲಿ ವಿವಿಧ ಪರೀಕ್ಷೆಗಳ ಒಎಂಆರ್ ಶೀಟ್ ಮತ್ತು ಪ್ರಶ್ನೆ ಪತ್ರಿಕೆ ಹಾಗೂ ಹಾಲ್ ಟಿಕೆಟ್ ಪತ್ತೆ. ಅಕ್ರಮದ ಮೂಲಕ 34 ಮಂದಿಗೆ ಸರ್ಕಾರಿ ಕೆಲಸ ಕೊಡಿಸಿದ್ದ ಆರ್. ಡಿ. ಪಾಟೀಲ್ಗೆ ಡ್ರಿಲ್ಲಿಂಗ್ ! ಇದು ಈ ಪ್ರಕರಣ ಇತ್ತೀಚಿನ ಬೆಳವಣಿಗೆಗಳು.
ಪಿಎಸ್ಐ ನೇಮಕಾತಿ ಅಕ್ರಮ ಬಗೆದಷ್ಟು ಅದರ ಹೂರಣ ಹೊರ ಬರುತ್ತಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆಸಿ ಅಕ್ರಮ ಎಸಗಿದ್ದ ಕಿಂಗ್ ಪಿನ್ ಅರ್. ಡಿ. ಪಾಟೀಲ್ ನನ್ನು ಸಿಐಡಿ ಪೊಲೀಸರು ಶನಿವಾರ ಪುಣೆಯಲ್ಲಿ ಬಂಧಿಸಿದ್ದಾರೆ. ಭಾನುವಾರ ಕಲಬುರಗಿಗೆ ಕರೆತಂದು ವಿಚಾರಣೆ ನಡೆಸಿದ್ದು, ನೇಮಕಾತಿ ಅಕ್ರಮದ ಕಿಂಗ್ ಪಿನ್ ಸಹೋದರರು ಸಿಕ್ಕಿಬಿದ್ದಂತಾಗಿದೆ. ಇನ್ನು. ಆರ್ ಡಿ. ಪಾಟೀಲ್ ಮನೆ ಶೋಧ ನಡೆಸಿದಾಗ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಮತ್ತಷ್ಟು ಸಂಗತಿಗಳು ಹೊರ ಬಿದ್ದಿದೆ.
ಪ್ರಶ್ನೆ ಪತ್ರಿಕೆ ಮೊದಲೇ ಲೀಕ್: ಕಿಂಗ್ಪಿನ್ ಆರ್.ಡಿ. ಪಾಟೀಲ್ ಮನೆ ಶೋಧ ನಡೆಸಿದ ಸಿಐಡಿ ಪೊಲೀಸರು, ಕೆಲ ಅಭ್ಯರ್ಥಿಗಳ ಹಾಲ್ ಟಿಕೆಟ್, ಒಎಂಆರ್ ಶೀಟ್, ಎಫ್ ಡಿಎ, ಎಸ್ಐಡಿ ನೇಮಕಾತಿ ಪರೀಕ್ಷೆ ಓಎಂಆರ್ ಶೀಟ್ ಪತ್ತೆಯಾಗಿವೆ. SDA, FDA, PSI ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಹದಿನೈದಕ್ಕೂ ಹೆಚ್ಚು ಹಾಲ್ ಟಿಕೆಟ್ ಪತ್ತೆಯಾಗಿವೆ.

34 ಮಂದಿಗೆ ಸರ್ಕಾರಿ ನೌಕರಿ:
ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಮೂಲಕ ಸರ್ಕಾರಿ ಕೆಲಸ ಕೊಡಿಸುತ್ತಿದ್ದ ಅರ್.ಡಿ. ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್ ಕೋಟಿ ಕೋಟಿ ವಸೂಲಿ ಮಾಡಿದ್ದಾರೆ. ಐಶರಾಮಿ ಜೀವನ ಮೈಗೂಡಿಸಿಕೊಂಡಿದ್ದು, ಹಣವನ್ನು ಬಡ್ಡಿಗೆ ನೀಡಿದ್ದರು. ಮಾತ್ರವಲ್ಲ ಅಫಜಲಪುರ ತಾಲೂಕಿನಲ್ಲಿ 34 ಮಂದಿಗೆ ಆರ್. ಡಿ. ಪಾಟೀಲ್ ಸರ್ಕಾರಿ ನೌಕರಿ ಕೊಡಿಸಿ ಅಕ್ರಮ ಎಸಗಿದ್ದು, ಈ ಕುರಿತ ದಾಖಲೆಗಳು ಸಿಐಡಿ ಕೈ ಸೇರಿವೆ.

ಪ್ರಶ್ನೆ ಪತ್ರಿಕೆ ಸೋರಿಕೆ
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಿರುವುದು, ಉತ್ತರ ಪತ್ರಿಕೆಯನ್ನು ಬೇರೆಯವರಿಗೆ ಕೊಟ್ಟು ಬರೆಸಿರುವುದು, ಬ್ಲೂಟೂತ್ ಬಳಿಸಿ ಉತ್ತರ ಬರೆದಿದ್ದಾರೆ ಎಂಬುದು ಸಿಐಡಿ ಈವರೆಗಿನ ತನಿಖೆಯ ಸಾರಾಂಶ. ಪಿಎಸ್ಐ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಪರೀಕ್ಷೆ ಮುನ್ನವೇ ಲೀಕ್ ಆಗಿತ್ತು ಎಂಬ ಸಂಗತಿಯನ್ನು ಸಿಐಡಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಬಳಿಕ ಅವುಗಳಿಗೆ ಉತ್ತರ ಸಿದ್ಧ ಪಡಿಸಿದ್ದಾರೆ. ಆ ಬಳಿಕ ಹಣ ಕೊಟ್ಟಿದ್ದ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡಲಾಗಿದೆ. ಹಣ ಕೊಟ್ಟ ಅಭ್ಯರ್ಥಿಗಳಿಗೆ ಎ.ಬಿ.ಸಿ.ಡಿ.ಯಲ್ಲಿರುವ ಯಾವ ಪ್ರಶ್ನೆ ಪತ್ರಿಕೆ ನೀಡಬೇಕು ಎನ್ನುವುದು ಮೊದಲೇ ನಿರ್ಧಾರವಾಗಿದ್ದು, ಅದರಂತೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪರೀಕ್ಷೆಯಲ್ಲಿ ಹೀಗೆ ಅಕ್ರಮ ಎಸಗಿ ಹಣ ಕೊಟ್ಟ ಎಲ್ಲಾ ಅಭ್ಯರ್ಥಿಗಳು ಪಿಎಸ್ಐ ಆಗಿ ನೇಮಕವಾಗುವಂತೆ ಮಾಡುವಲ್ಲಿ ಆರ್. ಡಿ. ಪಾಟೀಲ್ ಯಶಸ್ವಿಯಾಗಿದ್ದಾನೆ. ಈ ಕುರಿತು ಆರ್. ಡಿ. ಪಾಟೀಲ್ ನನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬ್ಲೂಟೂತ್ ಬಾಯ್ಸ್ ಗೆ ಸಿಐಡಿ ಡ್ರಿಲ್:
ಇನ್ನು ಬ್ಲೂಟೂತ್ ಬಳಿಸಿ ಪಿಎಸ್ಐ ಪರೀಕ್ಷೆ ಬರೆದು ಸಿಕ್ಕಿಬಿದ್ದಿರುವ ಹಯ್ಯಾಳಿ ದೇಸಾಯಿ, ವಿಶಾಲ್, ರುದ್ರಗೌಡ, ಶರಣಬಸಪ್ಪ ಅವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಬ್ಬೊಬ್ಬರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ತನಿಖೆ ಮಾಡಲಾಗುತ್ತಿದೆ. ಇಡೀ ಪ್ರಕರಣದಲ್ಲಿ ಅಫಜಲಪುರದ ಶಾಸಕ ಎಂ.ವೈ ಪಾಟೀಲ್ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಮಾತ್ರ ಕೇವಲ 30 ಲಕ್ಷ ಕೊಟ್ಟು ಡೀಲ್ ಕುದುರಿಸಿದ್ದ. ಹತ್ತು ಲಕ್ಷ ರೂ. ಮುಂಗಡ ಹಣವನ್ನು ಮಹಾಂತೇಶ್ ಪಾಟೀಲ್ ಗೆ ನೀಡಿದ್ದ. ಉಳಿದ ಅಭ್ಯರ್ಥಿಗಳು ತಲಾ 60 ಲಕ್ಷ ರೂ. ನಂತೆ ಪಾವತಿ ಮಾಡಿದ್ದಾಗಿ ಮಹಾಂತೇಶ್ ಪಾಟೀಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಮತ್ತೊಬ್ಬ ಅರೋಪಿ ಸೆರೆ:
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಪಾಟೀಲ್ ಬಂಧಿತ ಆರೋಪಿ. ಅಫಜಲಪುರದ ತಾಲೂಕು ಪಂಚಾಯಿತಿ ಮಾಜಿ ಸದಸ್ಯನಾಗಿರುವ ಮಲ್ಲಿಕಾರ್ಜುನ ಪಾಟೀಲ್ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15 ಕ್ಕೇರಿದೆ. ಕಿಂಗ್ ಪಿನ್ ಅರ್. ಡಿ. ಪಾಟೀಲ್ ನಾಲ್ಕು ದಿನ ಪುಣೆಯಲ್ಲಿ ತಲೆಮರೆಸಿಕೊಳ್ಳಲು ನೆರವು ನೀಡಿದ ಆರೋಪದಡಿ ಈತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications