ಪಿಎಸ್ಐ ನೇಮಕಾತಿ ಅಕ್ರಮ: ಜೈಲಿನಲ್ಲಿರುವ ಹಾಗರಗಿಗೆ ಎರಡು ಸರ್ಕಾರಿ ಹುದ್ದೆ
ಬೆಂಗಳೂರು, ಮೇ. 13: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಜೈಲಿಗೆ ಹೋದರೂ ಆಕೆಗೆ ಬಿಜೆಪಿ ಪಕ್ಷ ನೀಡಿರುವ ನರ್ಸಿಂಗ್ ಕೌನ್ಸಿಲ್ ಸದಸ್ಯೆ ಹಾಗೂ ದಿಶಾ ಸಮಿತಿ ಸದಸ್ಯೆ ಸ್ಥಾನಗಳು ಮುಂದುವರೆದಿವೆ. ಮಾತ್ರವಲ್ಲ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೂ ವಜಾ ಮಾಡಿಲ್ಲ. ಆಕೆಗೆ ಕೊಟ್ಟಿರುವ ಸ್ಥಾನ- ಮಾನದಲ್ಲಿ ಏರುಪೇರಾದರೆ ದೊಡ್ಡವರ ಹೆಸರುಗಳು ಹೊರ ಬರುತ್ತವೆ ಎಂಬ ಭಯ ಮೂಡಿರಬಹುದೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ನಾಂದಿ ಹಾಡಿದೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿದ್ದ ದಿವ್ಯಾ ಹಾಗರಗಿ ಪ್ರಕರಣ ಹೊರ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಳು. ಪುಣೆಯ ಉದ್ಯಮಿ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆಕೆಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪೊಲೀಸರ ವಿಚಾರಣೆ ಎದುರಿಸಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ದಿವ್ಯಾ ಹಾಗರಗಿಗೆ ಬಿಜೆಪಿ ಸರ್ಕಾರ ನೀಡಿದ್ದ ಎರಡು ಸ್ಥಾನಗಳಿಂದ ವಜಾ ಮಾಡುವ ಧೈರ್ಯ ಮಾಡಿಲ್ಲ.
ಸಾಮಾನ್ಯವಾಗಿ ಯಾರೇ ಅಗಿದ್ದರೂ ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳಲ್ಲ ಬಂಧನಕ್ಕೆ ಒಳಗಾದ ಕೂಡಲೇ ಅವರಿಗೆ ಕೊಟ್ಟಿರುವ ಎಲ್ಲಾ ಸ್ಥಾನ- ಮಾನಗಳನ್ನು ರದ್ದು ಮಾಡಲಾಗುತ್ತದೆ. ಅಷ್ಟೇಕೆ ? ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಆದರೆ ದಿವ್ಯಾ ಹಾಗರಗಿ ವಿಚಾರದಲ್ಲಿ ಬೇರೆಯದ್ದೇ ಆಗಿದೆ.
ಎರಡು
ಹುದ್ದೆಗಳಲ್ಲಿ
ನಿರಾತಂಕ
ಮುಂದುವರಿಕೆ:
ದಿವ್ಯಾ ಹಾಗರಗಿಯನ್ನು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸದಸ್ಯೆಯನ್ನಾಗಿ ಬಿಜೆಪಿ ಸರ್ಕಾರ ನೇಮಿಸಿದೆ. ಇದು ಸಾಲದೆಂಬಂತೆ ದಿಶಾ ಸಮಿತಿ ಸಭೆ ಸದಸ್ಯರನ್ನಾಗಿ ಎರಡು ಸ್ಥಾನಗಳನ್ನು ನೀಡಲಾಗಿದೆ. ಸರ್ಕಾರದ ಈ ಎರಡು ಸ್ಥಾನಗಳು ನಿರಾತಂಕವಾಗಿ ಮುಂದುವರೆದಿವೆ. ದಿವ್ಯಾ ಅವರನ್ನು ಈ ಸರ್ಕಾರಿ ಸ್ಥಾನಮಾನಗಳಿಂದ ವಜಾ ಮಾಡಿಲ್ಲ. ಎರಡೂ ಸರ್ಕಾರಿ ಹುದ್ದೆಗಳಲ್ಲಿ ದಿವ್ಯಾ ನಿರಂತರಕವಾಗಿ ಮುಂದುವರೆದಿದ್ದಾರೆ. ಮಾತ್ರವಲ್ಲ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೂ ಅವರನ್ನು ವಜಾ ಮಾಡಿಲ್ಲ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ದಿವ್ಯಾ ಹೆಸರು ಬಂದ ಕೂಡಲೇ ಆಕೆ ಬಿಜೆಪಿ ನಾಯಕಿ ಅಲ್ಲ ಎಂದು ಬಿಜೆಪಿ ಕರ್ನಾಟಕದಿಂದ ಪ್ರಕಟಣೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ದಿವ್ಯಾ ಇರುವ ಚಿತ್ರಗಳು ವೈರಲ್ ಆಗಿದ್ದವು. ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆಗಿನ ಚಿತ್ರವೂ ವೈರಲ್ ಆಗಿತ್ತು.
"ದಿವ್ಯಾ ಹಾಗರಗಿ ಸರ್ಕಾರ ನೀಡಿರುವ ನರ್ಸಿಂಗ್ ಕೌನ್ಸಿಲ್ ಸದಸ್ಯ ಸ್ಥಾನದಿಂದ ಬಿಜೆಪಿ ಸರ್ಕಾರ ಯಾಕೆ ವಜಾ ಮಾಡಿಲ್ಲ ? ಅವರನ್ನು ವಜಾ ಮಾಡಿದರೆ ದೊಡ್ಡವರ ಹೆಸರುಗಳು ಹೊರ ಬರುತ್ತವೆಯೇ," ಎಂದು ಶಾಸಕ ಪ್ರಿಯಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.