ಸುಳ್ಳು ಪತ್ತೆ ಪರೀಕ್ಷೆ ಎಂದರೇನು? ಅಸತ್ಯ ನುಡಿದವರಿಂದ ಹೇಗೆ ಬಾಯಿ ಬಿಡಿಸುತ್ತಾರೆ ಗೊತ್ತಾ?
ಬೆಂಗಳೂರು, ಜು. 22: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಬಂಧನಕ್ಕೆ ಒಳಗಾಗಿರುವ ಐಪಿಎಸ್ ಅಧಿಕಾರಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಏನಿದು ಸುಳ್ಳು ಪತ್ತೆ ಪರೀಕ್ಷೆ? ಇದರಿಂದ ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಪ್ರಭಾವಿಗಳ ಹೆಸರು ಬಹಿರಂಗವಾಗಲಿದೆಯೇ ಎಂಬ ಚರ್ಚೆ ಶುರುವಾಗಿದೆ.
ಬಂಧಿತ ಆರೋಪಿತ ಅಧಿಕಾರಿ ಅಮೃತ್ ಪೌಲ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಳ್ಳ ಪತ್ತೆ ಮಾಡಿಸಬೇಕೆಂಬ ಸಿಐಡಿ ಕೋರಿಕೆ ಅಂಶ ಬೆಳಕಿಗೆ ಬಂದಿದೆ. ಅಮೃತ್ ಪೌಲ್ ಅವರ ಬಂಧನದ ವೇಳೆ ಆರೋಪಿತ ಅಧಿಕಾರಿ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ (Crpc 164) ದಾಖಸದೇ ಇದೀಗ ಸುಳ್ಳು ಪತ್ತೆ ಪರೀಕ್ಷೆಗೆ ಮುಂದಾಗಿರುವ ಸಿಐಡಿ ಪೊಲೀಸರ ನಡೆ ಬಗ್ಗೆ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ. ಮಾಡಬೇಕಾಗಿದ್ದನ್ನು ಬಿಟ್ಟು ಕಣ್ಣು ಒರೆಸುವ ತಂತ್ರದ ಭಾಗವಾಗಿ ಸಿಐಡಿ ಅಧಿಕಾರಿಗಳು ಸುಳ್ಳು ಪತ್ತೆ ಮೊರೆ ಹೋದರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪೌಲ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ ಏನಾದರೂ ಪ್ರಭಾವಿಗಳ ಬಾಯಿ ಬಿಟ್ಟಿದ ಪಕ್ಷದಲ್ಲಿ ಅವರನ್ನು ಸಹ ಬಂಧಿಸಲೇಬೇಕಾದ ಅನಿರ್ವಾಯತೆ ಉಂಟಾಗುತ್ತಿತ್ತು. ಪೊಲೀಸರ ಮುಂದಿನ ತಪ್ಪೊಪ್ಪಿಗೆ ಹೇಳಿಕೆಗೂ ನ್ಯಾಯಾಧೀಶರ ಮುಂದೆ ಆರೋಪಿ ಕೊಡುವ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದರೂ ತನಿಖಾಧಿಕಾರಿಗಳಿಗೆ ಸಮಸ್ಯೆ ಎದುರಾಗುತ್ತಿತ್ತು. ಇನ್ನು ಪೌಲ್ ಡೈರಿಯಲ್ಲಿ ಉಲ್ಲೇಖವಾಗಿದೆ ಎನ್ನಲಾದ ಹಲವರ ಹೆಸರು ಪವಲ್ ಬಹಿರಂಗ ಪಡಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ಪೌಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆ ಹೇಗೆ ಮಾಡುತ್ತಾರೆ:
ಯಾವುದಾದರೂ ಒಂದು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳ್ಳು ಹೇಳುತ್ತಿದ್ದರೆ ಅದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ಸಾಮಾನ್ಯವಾಗಿ ಸುಳ್ಳು ಪತ್ತೆ ಪರೀಕ್ಷೆ ಮಾಡುತ್ತಾರೆ. ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾ ಪ್ರಯೋಗಾಲಯದಲ್ಲಿ ಸಹ ಈ ಪರೀಕ್ಷೆಯನ್ನು ಮಾಡುತ್ತಾರೆ. ಅರೋಪಿತನಿಗೆ ಮೊದಲು ಚುಚ್ಚು ಮದ್ದು ಕೊಡಲಾಗುತ್ತದೆ. ಆ ನಂತರ ಅವರನ್ನು ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗುತ್ತದೆ. ಆ ಪ್ರಶ್ನೆಗೆ ಉತ್ತರಿಸುವಾಗ ಅವರ ಉಸಿರಾಟ ಸೇರಿದಂತೆ ಮನಸಿನಲ್ಲಿ ಉಂಟಾಗುವ ಒತ್ತಡವನ್ನು ಆಧರಿಸಿ ಸುಳ್ಳು ಪತ್ತೆ ಯಂತ್ರ ಗ್ರಾಪ್ ನೀಡುತ್ತದೆ. ಅದನ್ನು ನೋಡಿ ಆರೋಪಿ ಸುಳ್ಳು ಹೇಳುತ್ತಿದ್ದಾನೆ ಎಂದಷ್ಟೆ ಖಚಿತ ಪಡಿಸಿಕೊಳ್ಳಬಹುದು. ಇದನ್ನೇ ಸುಳ್ಳು ಪತ್ತೆ ಪರೀಕ್ಷೆ ಎಂದು ಹೇಳುತ್ತಾರೆ. ಗಂಭೀರ ಸ್ವರೂಪದ ಪ್ರಕರಣದಲ್ಲಿ ಅರೋಪಿಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗತ್ತದೆ. ಪಿಎಸ್ಐ ಅಕ್ರಮದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನುಇದೇ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಿಐಡಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಆದ್ರೆ ಈ ಪರೀಕ್ಷೆಗೆ ಆರೋಪಿ ಪೌಲ್ ಒಪ್ಪಿಗೆ ಕಡ್ಡಾಯ. ಒಪ್ಪಲಿಲ್ಲ ಅಂದ್ರೆ ಮಾಡಲಿಕ್ಕೆ ಸಾಧ್ಯವಿಲ್ಲ. ಬಲವಂತವಾಗಿ ಸುಳ್ಳು ಪತ್ತೆ ಪರೀಕ್ಷೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಪೌಲ್ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ಎದ್ದಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಹೇಳಿದ್ದೇನು?
ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವುದರಿಂದ ಏನೂ ಪ್ರಯೋಜನ ಅಗುವಿದಲ್ಲ ಎನ್ನುತ್ತಾರೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು. ಆರೋಪಿ ಸತ್ಯ ಹೇಳದೇ ಸುಳ್ಳು ಹೇಳುತ್ತಿರಬಹುದು. ಈತ ಸುಳ್ಳು ಹೇಳುತ್ತಿದ್ದಾನೆ ಎಂಬುದಷ್ಟೇ ಗೊತ್ತಾಗುತ್ತದೆ. ಹಾಗಂತ ಆತ ಹೇಳಲಿಲ್ಲ ಎಂದ್ರೆ ಸತ್ಯ ಗೊತ್ತಾಗುವುದಿಲ್ಲ. ಮತ್ತೊಂದು ಮಹತ್ವದ ಸಂಗತಿ ಅಂದ್ರೆ, ಸುಳ್ಳು ಪತ್ತೆ ಪರೀಕ್ಷೆ ನಡಸಿದ್ದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಿಲ್ಲ. ಪ್ರಕರಣದ ತನಿಖೆಗೆ ಐದು ಪೈಸೆ ಪ್ರಯೋಜನವಿಲ್ಲ. ಈ ಪರೀಕ್ಷೆಯ ಫಲಿತಾಂಶ, ಏನನ್ನೂ ನ್ಯಾಯಾಲಯ ತನಿಖೆ ಎಂದು ಪರಿಗಣಿಸುವುದಿಲ್ಲ. ಕೇವಲ ತನಿಖಾಧಿಕಾರಿ ಆರೋಪಿ ಸುಳ್ಳು ಹೇಳುತ್ತಿರುವುದನ್ನು ಖಚಿತ ಪಡಿಸಿಕೊಳ್ಳಬಹುದು. ಸತ್ಯ ಹೇಳಲಿಲ್ಲ ಎಂದ್ರೆ ಸುಳ್ಳು ಪತ್ತೆ ಪರೀಕ್ಷೆ ಮೂಲಕ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ನಿವೃತ್ತ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಪೌಲ್ ಜಾಮೀನು ಅರ್ಜಿ ಭವಿಷ್ಯ ಜು. 25 ಕ್ಕೆ:
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ಜು 25 ರಂದು ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಪೌಲ್ ಪರ ವಕೀಲ ನಿತಿನ್ ರಮೇಶ್ ವಾದ ಮಂಡಿಸಿದ್ದಾರೆ. ಅರೋಪಿ ಸ್ವ ಚಾರಿತ್ಯ್ಯ ಹಿನ್ನೆಲೆ ಹೊಂದಿದ್ದಾರೆ. ಈ ಹಿಂದೆ ಒಂದು ಸಣ್ಣ ಆರೋಪ ಕೂಡ ಕೇಳಿ ಬಂದಿಲ್ಲ. ಒಬ್ಬ ಹಿರಿಯ ಅಧಿಕಾರಿ ಅಗಿರುವ ಕಾರಣ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಬೇಕು ಎಂದು ಕೋರಿದ್ದಾರೆ. ಇದರ ಮಧ್ಯೆ ಪೌಲ್ ಹಿರಿಯ ಐಪಿಎಸ್ ಅಧಿಕಾರಿ. ಅವರ ಕಣ್ಗಾವಲಿನಲ್ಲಿದ್ದ ಪಿಎಸ್ಐ ಉತ್ತರ ಹಾಳೆಗಳನ್ನು ತಿದ್ದುಪಡಿ ಮಾಡಲಾಗಿದೆ. ಅವರು ನೇರವಾಗಿ ಶಾಮೀಲಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪಾತ್ರ ತಿಳಿದುಕೊಳ್ಳಬೇಕಾಗಿದೆ. ಹೀಗಾಗಿ ಜಾಮೀನು ನೀಡಬಾರದು ಎಂಬುದು ಸಿಐಡಿ ಪೊಲೀಸರ ವಾದ. ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಬಹುತೇಕ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿವೆ. ಕಲಬುರಗಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಈಗಾಗಲೇ ದೋಷಾರೋಪಪಟ್ಟಿ ಕೂಡ ಸಲ್ಲಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ಮುಂದುವರೆದಿದೆ.
ಪಿಎಸ್ಐ ಅಕ್ರಮದಲ್ಲಿ ಪ್ರಭಾವಿಗಳು ಲಾಕ್ ಅಗ್ತಾರಾ?
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಮನೆ, ಹಾಗೂ ಚಿಕ್ಕಬಳ್ಳಾಪುರದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪೌಲ್ ಬರೆದಿದ್ದಾರೆ ಎನ್ನಲಾದ ಡೈರಿ ಸಹ ಸಿಕ್ಕಿದೆ. ಅದರಲ್ಲಿ ಪಿಎಸ್ಐ ಡೀಲ್ ನಲ್ಲಿ ಹಲವರ ಹೆಸರು ಸಹ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡೈರಿ ಸಿಕ್ಕಿ ವಾರಗಳೇ ಕಳೆದರೂ ಪ್ರಭಾವಿಗಳು ಯಾರೂ ಬಂಧನಕ್ಕೆ ಒಳಗಾಗಿಲ್ಲ. ವಿಚಾರಣೆಯೂ ನಡೆದಿಲ್ಲ. ಇನ್ನು ಆರಂಭದಲ್ಲಿ ಪೌಲ್ ಬಲವಂತವಾಗಿ ನಾನು ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುತ್ತೇನೆ ಎಂದು ಬೇಡಿಕೆ ಇಟ್ಟಿದ್ದರು ಎಂಬ ಮಾತು ಸಹ ಪೊಲೀಸ್ ವಲಯದಲ್ಲಿ ಚರ್ಚೆ ಆಗುತ್ತಿದೆ. ನ್ಯಾಯಾಧೀಶರ ಮುಂದೆ ಒಮ್ಮೆ ಹೇಳಿಕೆ ದಾಖಲಿಸಿದ ಬಳಿಕ ಸಮಸ್ಯೆ ಆಗಲಿದೆ ಎಂದು ಅರಿತ ಬಳಿಕ ಉಲ್ಟಾ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಅಂತೂ ಪಿಎಸ್ಐ ಅಕ್ರಮದ ಹಗರಣ ಇದೀಗ ಪೌಲ್ ಡೈರಿ ಸುತ್ತ ಓಡಾಡುತ್ತಿದೆ. ಪೌಲ್ ಡೈರಿ ಹಲವು ಪ್ರಭಾವಿಗಳ ಪಾಲಿಗೆ ಉರುಳಾಗುತ್ತಾ ಅನ್ನೋದು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.