ಕಲಬುರಗಿ ಜಿಲ್ಲೆಯಿಂದಲೇ 92 ಪಿಎಸ್ಐಗಳು ಆಯ್ಕೆ: ದಿವ್ಯಾ ಹಾಗರಗಿಗೆ ಮುಂದುವರೆದ ಶೋಧ
ಬೆಂಗಳೂರು, ಏ. 28: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿದಂತೆ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ದಿವ್ಯ ಹಾಗರಗಿ ಅಂಡ್ ಟೀಮ್ ಅರೆಸ್ಟ್ ವಾರಂಟ್ ಬೆನ್ನಲ್ಲೇ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಆರ್ಟಿಐ ಕಾರ್ಯಕರ್ತನ ವಿಚಾರಣೆ ನಡೆದಿದೆ. ಈ ಮಧ್ಯೆ ಸಿಐಡಿ ಪೊಲೀಸರು ಶಾಸಕ ಪ್ರಿಯಾಂಕ್ ಖರ್ಗೆಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಸಿಐಡಿ ನೇಮಕಾತಿ ಅಕ್ರಮಕ್ಕೆ ಸಂಬಂಧಸಿದಿಂತೆ ಗುರುವಾರ ನಡೆದ ಬೆಳವಣಿಗೆಗಳಿವು.
ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಿಂದಲೇ ಕಾನೂನು ತಜ್ಞರನ್ನು ಸಂಪರ್ಕಿಸಿ, ಸಿಐಡಿ ಪೊಲೀಸರ ಮುಂದೆ ಶರಣಾಗಬೇಕಾ? ಏ. 29 ರಂದು ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಅಲ್ಲಿಯವರೆಗೂ ಸುಮ್ಮನಿರಬೇಕಾ? ಎಂಬುದರ ಬಗ್ಗೆ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ. ಕಲಬುರಗಿ ಒಂದನೇ ಹೆಚ್ಚುವರಿ ನ್ಯಾಯಾಲಯದಲ್ಲಿ ದಿವ್ಯಾ ಹಾಗರಗಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಆರ್ಟಿಐ ಕಾರ್ಯಕರ್ತ ಶಾಮೀಲು:
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪತ್ರಕರ್ತ ಹಾಗೂ ಆರ್ಟಿಐ ಕಾರ್ಯಕರ್ತ ಇಬ್ಬರು ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಕಲಬುರಗಿಯ ಅರ್ಟಿಐ ಕಾರ್ಯಕರ್ತನ ಹೆಸರು ಕೇಳಿ ಬಂದ ಬೆನ್ನಲ್ಲೇ, ಆತನನ್ನು ಸಿಐಡಿ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ. ದಿವ್ಯಾ ಹಾಗರಗಿ ಜತೆ ನಂಟು ಹೊಂದಿರುವ ಆರ್ಟಿಐ ಕಾರ್ಯಕರ್ತ ರಾಜ್ಯದ ಹಲವು ನಾಯಕರ ಜತೆ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.

ಕಲಬುರಗಿ ಮಿನಿ ವಿಧಾನಸೌಧದಿಂದ ಬೆಂಗಳೂರು ವಿಧಾನಸೌಧದವರೆಗೂ ಈತನ ನೆಟ್ವರ್ಕ್ ಹಬ್ಬಿದೆ ಎನ್ನಲಾಗಿದೆ. ಇನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪತ್ರಕರ್ತ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಕಿಂಗ್ಪಿನ್ ಸಂಬಂಧಿಯಾಗಿರುವ ಪತ್ರಕರ್ತ ನಿರಂತರ ಪೋನ್ ಸಂಪರ್ಕ ಹೊಂದಿದ್ದ. ಹೀಗಾಗಿ ಆತನನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಕಲಬುರಗಿ ಜಿಲ್ಲೆಯಿಂದಲೇ 92 ಮಂದಿ ಆಯ್ಕೆ:
545 ಪಿಎಸ್ಐ ಹುದ್ದೆಗಳ ನೇಮಕಾತಿ ಸಂಬಂಧ ಕಲಬುರಗಿ ಜಿಲ್ಲೆಯೊಂದರಿಂದಲೇ 92 ಮಂದಿ ನೇಮಕವಾಗಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಪಿಎಸ್ಐ ನೇಮಕಾತಿ ಸಂಬಂಧ ಕಲಬುರಗಿಯಲ್ಲಿ 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಅದರಲ್ಲಿ ದಿವ್ಯಾ ಹಾಗರಗಿ ಅವರ ಜ್ಞಾನಜ್ಯೋತಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರ ಪೈಕಿ 11 ಮಂದಿ ಆಯ್ಕೆಯಾಗಿದ್ದರು. ಹನ್ನೊಂದು ಮಂದಿಯಲ್ಲಿ ಅಕ್ರಮ ಎಸಗಿದ ಏಳು ಮಂದಿ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ಅಕ್ರಮದಲ್ಲಿ ಭಾಗಿಯಾಗದ ನಾಲ್ವರಿಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನಾಲ್ವರು ಅಭ್ಯರ್ಥಿಗಳಲ್ಲಿ ಶಾಂತಾ ಬಾಯಿ ಎಂಬಾಕೆ ತಲೆ ಮರೆಸಿಕೊಂಡಿದ್ದು, ಆಕೆಗಾಗಿ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.

ಆರ್.ಡಿ. ಪಾಟೀಲ್ ಕಟೌಟ್ ಗಳ ಅಬ್ಬರ:
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಆರ್.ಡಿ. ಪಾಟೀಲ್ ಸಿಐಡಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ. ಇತ್ತ ಅಫಜಲಪುರದಲ್ಲಿ ಆತನ ಕಟೌಟ್ಗಳು ರಾರಾಜಿಸುತ್ತಿವೆ. ಅಫಜಲಪುರದಲ್ಲಿ ನಡೆಯುತ್ತಿರುವ ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಆರ್.ಡಿ. ಪಾಟೀಲ್ ಮೊದಲ ಬಹುಮಾನ ನೀಡುತ್ತಾನೆ. ಎತ್ತಿನ ಬಂಡಿ ಓಟದಲ್ಲಿ ಮೊದಲ ಬಹುಮಾನ ಗೆಲ್ಲುವ ರೈತನಿಗೆ 10 ಗ್ರಾಂ. ಬಂಗಾರ ನೀಡಲಾಗುತ್ತದೆ. ಅದನ್ನು ಅರ್.ಡಿ. ಪಾಟೀಲ್ ನೀಡುತ್ತಾನೆ. ಬಂಧನದ ದಿನವೇ ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದ ಆರ್.ಡಿ. ಪಾಟೀಲ್ ಸಿಐಡಿ ಪೊಲೀಸರ ಕೈಗೆ ಸಿಕ್ಕಿ ಬಂಧನಕ್ಕೆ ಒಳಗಾಗಿದ್ದ.

ಪ್ರಿಯಾಂಕ್ ಖರ್ಗೆಗೆ 2ನೇ ನೋಟಿಸ್:
Recommended Video
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ. ನೇಮಕಾತಿ ಸಂಬಂಧ ಅಡಿಯೋ ಬಿಡುಗಡೆ ಮಾಡಿದ ಪ್ರಕರಣ ಸಂಬಂಧ ಹೇಳಿಕೆ ಜತೆಗೆ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇದರ ಬಗ್ಗೆ ಮತ್ತೆ ಕಿಡಿ ಕಾರಿರುವ ಶಾಸಕ ಪ್ರಿಯಾಂಕ್ ಖರ್ಗೆ, ನನಗಿಂತೂ ಮೊದಲೇ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಪತ್ರ ಬರೆದಿರುವರಿಗೆ ನೋಟಿಸ್ ನೀಡಿಲ್ಲ. ನನಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತನಿಖೆ ನಡೆಸಲು ಪ್ರತ್ಯೇಕ ಕೋರ್ಟ್ ಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications