ಆರ್.ಡಿ. ಪಾಟೀಲನ ಅಡಿಟರ್ ಶಾಲೆಯಲ್ಲಿ ಅಕ್ರಮ: ಮೂವರ ಬಂಧನ
ಬೆಂಗಳೂರು, ಮೇ. 03: ಪಿಎಸ್ಐ ನೇಮಕಾತಿ ಅಕ್ರಮ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಕಲಬುರಗಿಯ ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಸಂಗತಿಯನ್ನು ಸಿಐಡಿ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಈ ಸಂಬಂಧ ಮತ್ತೊಂದು ಎಫ್ಐಆರ್ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಲಬುರಗಿಯ ಎಮ್ಎಸ್ಐ ಪರೀಕ್ಷಾ ಕೇಂದ್ರದಲ್ಲಿ ಸಹ ಅಕ್ರಮ ಪಡೆದಿದೆ. ಈಗಾಗಲೇ ಬಂಧಿತ ಕಿಂಗ್ ಪಿನ್ ಅರ್. ಡಿ. ಪಾಟೀಲ್ ಅವರ ಅಡಿಟರ್ ಆಗಿರುವ ಚಂದ್ರಕಾಂತ್ ಕುಲಕರ್ಣಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಎಮ್ಎಸ್ಐ ಪರೀಕ್ಷಾ ಕೇಂದ್ರದಲ್ಲಿ ಪ್ರಭು ಎಂಬ ಅಭ್ಯರ್ಥಿಗೆ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಕುಲಕರ್ಣಿ ನೆರವಾಗಿದ್ದ ಆರೋಪದಡಿ ಬಂಧಿಸಲಾಗಿದೆ. ಇದರಿಂದ ಕಲಬರಗಿ ಜ್ಞಾನ ಜ್ಯೋತಿ ಶಾಲೆಯ ಜತೆಗೆ ಎಮ್ಎಸ್ಐ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.
ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ನೀಡಿರುವ ದೂರಿನ ಮೇರೆಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆರ್.ಡಿ ಪಾಟೀಲ್ ಶಾಮೀಲಾಗಿದ್ದು, ಬಾಡಿ ವಾರಂಟ್ ಆಧಾರದ ಮೇಲೆ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸಿಐಡಿ ಪೊಲೀಸರು ನಿರ್ಧರಿಸಿದ್ದಾರೆ.

ಅಭ್ಯರ್ಥಿ ಮತ್ತು ತಂದೆ ಬಂಧನ:
Recommended Video
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಸಂಬಂಧ ಮತ್ತೊಬ್ಬ ಪಿಎಸ್ಐ ಅಭ್ಯರ್ಥಿ ಮತ್ತು ಆತನ ತಂದೆಯನ್ನು ಸಹ ಬಂಧಿಸಲಾಗಿದೆ. ಕಲಬುರಗಿಯ ಪಿಎಸ್ಐ ಅಭ್ಯರ್ಥಿ ಪ್ರಭು ಹಾಗೂ ಅವರ ತಂದೆ ಶರಣಪ್ಪ ಬಂಧಿತ ಆರೋಪಿಗಳು. ಆರ್.ಡಿ. ಪಾಟೀಲ್ ಸಂಪರ್ಕ ಸಾಧಿಸಿ ಮಗನ ಆಯ್ಕೆಗಾಗಿ ಶರಣಪ್ಪ 50 ಲಕ್ಷ ರೂ. ಹಣ ನೀಡಿದ್ದ. ಪಿಎಸ್ಐ ನೇಮಕಾತಿ ಪಟ್ಟಿಯಲ್ಲಿ 45 ನೇ ರ್ಯಾಂಕ್ ಗಳಿಸಿದ್ದ ಪ್ರಭು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ. ನಗರದ ಎಮ್ಎಸ್ಐ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಉತ್ತೀರ್ಣ ಆಗಿರುವ ಅಭ್ಯರ್ಥಿಗಳ ದಾಖಲೆಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ಇದೀಗ ಮತ್ತೊಂದು ಸುತ್ತಿನ ತನಿಖೆ ಆರಂಭಿಸಿದ್ದಾರೆ.
ಅಡಿಟರ್ ಚಂದ್ರಕಾಂತ್ ಕುಲಕರ್ಣಿ ಮೂಲಕ 50 ಲಕ್ಷ ರೂ. ಹಣವನ್ನು ಪ್ರಭು ಅವರ ತಂದೆ ಶರಣಪ್ಪ ಅವರು ಆರ್.ಡಿ. ಪಾಟೀಲ್ ಗೆ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮಗ ಪಿಎಸ್ಐ ಆಗಲಿ ಎಂಬ ಆಸೆಯಿಂದ ನಿವೇಶನ ಮಾರಾಟ ಮಾಡಿ ಶರಣಪ್ಪ 50 ಲಕ್ಷ ರೂ. ಹಣವನ್ನು ಆರ್.ಡಿ. ಪಾಟೀಲ್ ಗೆ ಕೊಟ್ಟಿದ್ದ. 30 ಲಕ್ಷ ರೂ. ಒಂದು ಸಲ, 20 ಲಕ್ಷ ರೂ. ಮತ್ತೊಂದು ಸಲ ಒಟ್ಟು 50 ಲಕ್ಷ ರೂ. ಪಾವತಿ ಮಾಡಿದ್ದ. ಇದ್ದ ಮನೆ ಮಾರಿ ಬಾಡಿಗೆ ಮನೆಗೆ ಹೋಗಿದ್ದ ಶರಣಪ್ಪ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ.ಮನೆಯೂ ಹೋಯಿತು, ಮಗನ ನೌಕರಿಯು ಹೋಯಿತು, ಜತೆಗೆ ಇಬ್ಬರು ಜೈಲು ಶಿಕ್ಷೆ ಅನುಭವಿಸುವಂತಾಗಿದೆ.












Click it and Unblock the Notifications