ಪಿಎಸ್ಐ ನೇಮಕಾತಿ ಅಕ್ರಮ: ಅಫಜಲಪುರದಲ್ಲಿ ಮತ್ತೆ ಮೂವರು ಸೆರೆ!
ಕಲಬುರಗಿ, ಜೂ. 10: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಿಂಗ್ಪಿನ್ ರುದ್ರಗೌಡ ಪಾಟೀಲನ ಮತ್ತಿಬ್ಬರು ಸಹಚರರನ್ನು ಶುಕ್ರವಾರ ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಮಹೇಶ್ ಹಿರೋಹಳ್ಳಿ, ಸೈಫನ್ ಜಮಾದಾರ್ ಬಂಧಿತರು. ಬಂಧಿತ ಸೈಫನ್ ಸಹೋದರ ಇಸ್ಮಾಯಿಲ್ ಖಾದರ್ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ. ಈತ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ. ಈತನ ಸಹೋದರ ಸೈಫನ್ ಜಮಾದಾರ್ ಸಹೋದರನ ಅಕ್ರಮಕ್ಕೆ ಸಾಥ್ ನೀಡಿದ್ದ. ಬಂಧಿತ ಮಹೇಶ್ ಹಿರೋಹಳ್ಳಿ ಸಹ ಅಕ್ರಮದಲ್ಲಿ ಶಾಮೀಲಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಅರೋಪಿ ಮಹೇಶ್ ಮತ್ತು ಸೈಫನ್ ಇಬ್ಬರೂ ಸಹ ಆರ್ ಡಿ ಪಾಟೀಲ್ ಪರಮಾಪ್ತರಂತೆ ಗುರುತಿಸಿಕೊಂಡಿದ್ದರು. ಅಕ್ರಮದಲ್ಲಿ ಭಾಗಿಯಾಗಿದ್ದ ಇಸ್ಮಾಯಿಲ್ ಖಾದರ್ ತೆಲೆಮರೆಸಿಕೊಂಡಿದ್ದಾಣೆ. ಈತ ಸೇರಿದಂತೆ ಇನ್ನೂ ಐವರಿಗಾಗಿ ಸಿಐಡಿ ಹುಡುಕಾಟ ನಡೆಸಿದ್ದಾರೆ.

ಪಿಎಸ್ಐ ಆಗಿ ನೇಮಕವಾಗಿರುವ ಇಸ್ಮಾಯಿಲ್ ಖಾದರ್ ಸೇರಿ ಐದು ಜನರ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸು ದಾಖಲಾಗಿದೆ.

ಬೆಂಗಳೂರಿನಲ್ಲಿ ಪಿಎಸ್ಐ ಅಕ್ರಮ ಡ್ರಿಲ್ಲಿಂಗ್:
ಇನ್ನು ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ 6 ನೇ ರ್ಯಾಂಕ್ ಪಡೆದಿದ್ದ ದರ್ಶನ್ ಸೇರಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ದರ್ಶನ್ ಹಾಗೂ ಇತರೆ ಇಬ್ಬರು ಪೊಲೀಸ್ ಪೇದೆಗಳು ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದರು. ಇವರ ಅಸಲಿ ಉತ್ತರ ಹಾಳೆ ಒಎಂಆರ್ ಶೀಟ್ ನಲ್ಲಿ ಬಹುತೇಕ ಸರಿ ಉತ್ತರ ಬರೆದಿದ್ದರು. ಆದ್ರೆ, ಇವರ ಬಳಿಯಿದ್ದ ಕಾರ್ಬನ್ ಪೇಪರ್ ನೋಡಿದಾಗ ಬಹುತೇಕ ಪ್ರಶ್ನೆ ಖಾಲಿ ಬಿಟ್ಟಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬೆನ್ನಲ್ಲೇ ಮೂವರನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಮೂವರ ಬಂಧನ ಸಂಬಂಧ ಪ್ರತ್ಯೇಕ ಮೂರು ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರ ಬೀಳುವ ಸಾಧ್ಯತೆಯಿದೆ.












Click it and Unblock the Notifications