ಕಳಚಿದ ಬಾಂಧವ್ಯದ ಕೊಂಡಿ: ರಾಜ್ಯದಲ್ಲಿ ಖಾಕಿ ವರ್ಸಸ್ ಖಾದಿ?
ಸರಕಾರದ ಭಾಗವೇ ಆಗಿದ್ದ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬಗ್ಗೆ ಬಹಿರಂಗವಾಗಿ ಆಡಿದ ಮಾತು ಸರಕಾರ ಮತ್ತು ಪೊಲೀಸ್ ಇಲಾಖೆಯ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆಯೇ?
ರವಿ ಕುಮಾರ್ ಆಡಿದ್ದ ಮಾತಿಗೆ ಬಿಜೆಪಿಯ ಇತರ ಕೆಲವು ನಾಯಕರೂ ಧ್ವನಿ ಗೂಡಿಸಿದ್ದರು. ಇದಕ್ಕೂ ಮುನ್ನ, ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತನ ಕೊಲೆ ಮತ್ತು ಇದಾದ ನಂತರ ನಡೆದ ಗಲಭೆಯಲ್ಲಿ ಬಿಜೆಪಿ ನಾಯಕರ ಮಾತನ್ನು ಪೊಲೀಸ್ ಇಲಾಖೆ ಎಷ್ಟು ಬೇಕೋ ಅಷ್ಟು ಮಾತ್ರ ಪಾಲಿಸಿದ್ದು, ಸರಕಾರ ಮತ್ತು ಪೊಲೀಸ್ ಇಲಾಖೆಯ ನಡುವೆ ಸಂಬಂಧ ಹಳಸಲು ಆರಂಭವಾಯಿತು ಎನ್ನುವ ಮಾತು ಚಾಲ್ತಿಯಲ್ಲಿದೆ.
ಇದಾದ ನಂತರ ಬೆಂಗಳೂರು ಜೆಜೆ ನಗರದಲ್ಲಿ ನಡೆದ ಘಟನೆ, ಇದರ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಆಡಿದ ಮಾತು, ಇದಕ್ಕೆ ತದ್ವಿರುದ್ದವಾಗಿ ಕಮಲ್ ಪಂತ್ ಮಾಡಿದ ಟ್ವೀಟ್, ಖಾಕಿ ಮತ್ತು ಖಾದಿ ನಡುವಿನ ಬಾಂಧವ್ಯಕ್ಕೆ ಇನ್ನಷ್ಟು ಹುಳಿ ಹಿಂಡಿತು.
ಈಗ, ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯ ನೈತಿಕತೆಯ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಇದಕ್ಕೆಲ್ಲಾ ಸರಕಾರದ ಆಯಕಟ್ಟಿನ ಜಾಗದಲ್ಲಿರುವವರು ಆಡುತ್ತಿರುವ ಸೈಲೆಂಟ್ ಗೇಂ ಕಾರಣ ಎನ್ನುವ ಗುಮಾನಿ ಪೊಲೀಸ್ ಇಲಾಖೆಗೆ ಎದ್ದಿದೆ.

ಚನ್ನಪಟ್ಟಣದಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ರಾಮನಗರ ಜಿಲ್ಲೆ, ಚನ್ನಪಟ್ಟಣದಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ,"ನನಗಿರುವ ಮಾಹಿತಿಯೇ ಬೇರೆ. ಹಗರಣ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಚಾಮರಾಜಪೇಟೆಯ ಕೊಲೆ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿ ಕಮಲ್ ಪಂಥ್ ಅವರನ್ನು ಅವಮಾನ ಮಾಡಿದ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಲು ಪೋಲಿಸ್ ಇಲಾಖೆ ಪಿಎಸ್ಐ ನೇಮಕಾತಿ ಹಗರಣವನ್ನು ಬಯಲಿಗೆಳೆದಿದೆ"ಎಂದು ನೇರವಾಗಿ ಆಪಾದಿಸಿದ್ದರು.

ಬಗೆದಷ್ಟು ಭ್ರಷ್ಟಾಚಾರದ ವಾಸನೆ ಬಡಿಯುತ್ತಿರುವ ಪಿಎಸ್ಐ ನೇಮಕಾತಿ
ಬಗೆದಷ್ಟು ಭ್ರಷ್ಟಾಚಾರದ ವಾಸನೆ ಬಡಿಯುತ್ತಿರುವ ಪಿಎಸ್ಐ ನೇಮಕಾತಿ ವಿಚಾರದಲ್ಲಿ ಪೊಲೀಸರಿಗಿಂತ, ರಾಜಕಾರಣಿಗಳ ಪಾತ್ರವೇ ಹೆಚ್ಚು ಎನ್ನುವ ಅಂಶಗಳು ಬಯಲಾಗುತ್ತಿವೆ. ಹಾಗಾಗಿ, ಇನ್ನಷ್ಟು ರಾಜಕಾರಣಿಗಳ ಪಾತ್ರವನ್ನು ಬಯಲು ಮಾಡಲು ಪೊಲೀಸ್ ಇಲಾಖೆ ಜಾಡು ಹಿಡಿದು ಹೋಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರಿಂದ, ಸರಕಾರ ಮತ್ತು ಪೊಲೀಸ್ ಇಲಾಖೆಯ ನಡುವೆ ದೊಡ್ಡ ಮಟ್ಟದ ಶೀತಲ ಸಮರ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಆರಗ ಜ್ಞಾನೇಂದ್ರ ಕೂಡಾ ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುತ್ತಿಲ್ಲ
ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುತ್ತಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ಮಧ್ಯ ಪ್ರವೇಶಿಸದಿದ್ದರೆ ಸರಕಾರದ ವಿರುದ್ದ ಮತ್ತಷ್ಟು ಹಗರಣವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಬೀದಿಗಿಳಿಯುವುದು ಪಕ್ಕಾ ಎನ್ನುವ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.

ಕಳಚಿದ ಬಾಂಧವ್ಯದ ಕೊಂಡಿ: ರಾಜ್ಯದಲ್ಲಿ ಖಾಕಿ ವರ್ಸಸ್ ಖಾದಿ
ಪಿಎಸ್ಐ ಹಗರಣದಲ್ಲಿ ಇನ್ನಷ್ಟು ಬಿಜೆಪಿ ನಾಯಕರ ಹೆಸರು ಹೊರಬೀಳಬಹುದು ಎನ್ನುವ ಭಯ ಸರಕಾರದ ಮಟ್ಟದಲ್ಲೂ ಇದೆ. ಸರಕಾರಕ್ಕೂ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಮ್ಮಿಯಾಗಿದೆ ಎನ್ನುವ ಮಾತಿನ ನಡುವೆ ಬೆಂಗಳೂರು ಆಯುಕ್ತ ಕಮಲ್ ಪಂತ್ ಅವರನ್ನು ಶೀಘ್ರದಲ್ಲೇ ಎತ್ತಂಗಡಿ ಮಾಡಲಾಗುತ್ತದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಕಮಲ್ ಪಂತ್ ಅವರನ್ನು ಅವಮಾನ ಮಾಡಿದ್ದಕ್ಕಾಗಿ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಕುಮಾರಸ್ವಾಮಿ ಮಾತು ನಿಜವೇ ಆಗಿದ್ದಲ್ಲಿ, ಮುಂದಿನ ದಿನಗಳಲ್ಲಿ ಇಲಾಖೆಗೆ ಮೇಜರ್ ಸರ್ಜರಿ ಆಗಬಹುದು ಅಥವಾ ಶೀತಲ ಸಮರ ತೀವ್ರಗೊಳ್ಳಬಹುದು.












Click it and Unblock the Notifications