ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ, ನಿಖರ ಮಾಹಿತಿ ಕೊಡಿ
ಬೆಂಗಳೂರು, ಏ. 7 : ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ 30 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಮ್ಮ ಕುಟುಂಬದ ಬಗ್ಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನೇ ನೀಡಬೇಕು ಮನವಿ ಮಾಡಲಾಗಿದೆ.
ಸೋಮವಾರ ಡಿ. ದೇವರಾಜ ಅರಸು ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು ಅವರು, ಈ ಸಮೀಕ್ಷೆಯಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಕುರಿತು ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ, ಔದ್ಯೋಗಿಕ-ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲಾ ಕುಟುಂಬಗಳು ಹಾಗೂ ಜನರನ್ನು ಸಮೀಕ್ಷೆಗೆ ಒಳಪಡಿಸಲಾವುದು. ರಾಜ್ಯದಲ್ಲಿ 6.50 ಕೋಟಿ ಅಂದಾಜು ಜನಸಂಖ್ಯೆ ಇದ್ದು, ಅಂದಾಜು ಒಟ್ಟು 1.31 ಕೋಟಿ ಕುಟುಂಬಗಳಿವೆ, 1.27 ಗಣತಿ ಬ್ಲಾಕ್ಗಳು, 176 ತಾಲೂಕು, 352 ನಗರ/ ಪುರಸಭೆ, 199 ವಾರ್ಡ್ಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು. [ಜಾತಿ ಗಣತಿ : ಏಕೆ, ಏನು?]

1.33 ಲಕ್ಷ ಗಣತಿದಾರರು : ಸಮೀಕ್ಷೆ ನಡೆಸಲು 30 ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, 8 ವಲಯಗಳ ಜಂಟಿ ಆಯುಕ್ತರು, 30 ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾಯನಿರ್ವಹಣಾಧಿಕಾರಿಗಳು, 10 ಮಹಾನಗರ ಪಾಲಿಕೆಗಳ ಆಯುಕ್ತರು, 30 ಜಿಲ್ಲೆಗಳ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, 35 ಸಂಪನ್ಮೂಲ ವ್ಯಕ್ತಿಗಳು, 22,189 ಸಮೀಕ್ಷಾ ಮೇಲ್ವಿಚಾರಕರು ಸೇರಿದಂತೆ 1.33 ಲಕ್ಷ ಗಣತಿದಾರರನ್ನು ನೇಮಿಸಲಾಗಿದೆ ಎಂದರು. [ಸಮೀಕ್ಷೆಯ ಲಾಂಛನ ನೋಡಿ]
ಶಾಲೆಗಳಿಗೆ ರಜೆ ಇರುವ ಕಾರಣ ಹಾಗೂ ಶಿಕ್ಷಕರಿಗೆ ದಶವಾರ್ಷಿಕ ಜನಗಣತಿ ಮಾಡಿದ ಅನುಭವ ಇರುವ ಕಾರಣ ಸೀಮಿತ 20 ದಿನಗಳ ಅವಿಧಿಗೆ ಮಾತ್ರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. [ಜಾತಿ ಜನಗಣತಿ ವಿರೋಧಿಸಿ ವೀರಶೈವರ ಜಾಥಾ]
189 ಕೋಟಿ ವೆಚ್ಚ : ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಮತ್ತು ಸಮಸ್ಯೆಗಳ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಒಟ್ಟು 189 ಕೋಟಿ ರೂ ಅಂದಾಜು ವೆಚ್ಚವಾಗಲಿದೆ. ಹೆಚ್ಚುವರಿಯಾಗಿ ಬೇಕಾಗಿರುವ ರೂ 84 ಕೋಟಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸಮೀಕ್ಷೆಯ ಕುರಿತು ವಿವಿಧ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯಗಳು ಪ್ರಾರಂಭವಾಗಿದೆ. ಇದಲ್ಲದೇ ಜನರಲ್ಲಿ ಸಮೀಕ್ಷೆ ಬಗ್ಗೆ ತಿಳುವಳಿಕೆ ಮೂಡಿಸಲು ಪ್ರಚಾರಾಂದೋಲನ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications