ಎನ್ಪಿಎಸ್ ಯೋಜನೆ ರದ್ದು ಹೋರಾಟ; ಸರ್ಕಾರಿ ನೌಕರರ ಸಂಘಕ್ಕೆ ಪತ್ರ
ಬೆಂಗಳೂರು, ಡಿಸೆಂಬರ್ 21; ಎನ್ಪಿಎಸ್ ಯೋಜನೆ ರದ್ದುಪಡಿಸಿ ಹಿಂದಿನ ಒಪಿಎಸ್ ಜಾರಿಗೊಳಿಸಬೇಕು ಎಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈಗ ಈ ಪ್ರತಿಭಟನೆ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪತ್ರ ಬರೆಯಲಾಗಿದೆ.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರಿಗೆ ಈ ಕುರಿತು ಪತ್ರವನ್ನು ಬರೆದಿದೆ.
ಎನ್ಪಿಎಸ್ ಯೋಜನೆಯನ್ನು ರದ್ದುಪಡಿಸಲು ನಡೆಯುತ್ತಿರುವ ಮುಷ್ಕರದಲ್ಲಿ ಕರ್ನಾಟಕ ಸರ್ಕಾರ ನೌಕರರ ಸಂಘವು ಮಧ್ಯಸ್ಥಿಕೆ ವಹಿಸುವ ಬಗ್ಗೆ ಪತ್ರದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ, ಬೆಂಗಳೂರು, ಕಾರ್ಯದರ್ಶಿಗಳು ಈ ಪತ್ರ ಬರೆದಿದ್ದಾರೆ. ನಾನು ಎನ್ಪಿಎಸ್ ಯೋಜನೆಗೆ ಒಳಪಟ್ಟಿರುವ ಅಧಿಕಾರಿಯಾಗಿರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎನ್ಪಿಎಸ್ ಮುಷ್ಕರವು 19/12/2022ರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದು, ತಮಗೆ ತಿಳಿದಿರುವ ವಿಷಯವಾಗಿರುತ್ತದೆ. ಸದರಿ ಮುಷ್ಕರಕ್ಕೆ ತಮ್ಮ ಬೆಂಬಲದ ಅಗತ್ಯವಿರುತ್ತದೆ ಎಂದು ಮನವಿ ಮಾಡಲಾಗಿದೆ.
ತಾವು ಕರ್ನಾಟಕ ರಾಜ್ಯದ ನೌಕರರ ಸಂಘದ ಅಧ್ಯಕ್ಷರಾಗಿದ್ದು, ನೌಕರರ ಸಂಘವು ನೌಕರರ ಹಿತಾಸಕ್ತಿಯನ್ನು ಕಾಯುವ ಒಂದು ಪ್ರಮುಖ ಸಂಘವಾಗಿರುತ್ತದೆ. ನೌಕರರಿಗೆ ಏನೇ ಸಮಸ್ಯೆಯಾದರೂ ತಮ್ಮ ಬಳಿ ಬಂದು ಅಳಲು ತೋಡಿಕೊಂಡಲ್ಲಿ ತಾವು ಸರ್ಕಾರದ ಹಾಗೂ ನೌಕರರ ಮಧ್ಯೆ ಸೇತುವೆ ರೀತಿ ಸಂಪರ್ಕವನ್ನು ಬೆಸೆದು ನೌಕರರ ಹಲವಾರು ಸಮಸ್ಯೆಗಳನ್ನು ಈವರೆವಿಗೂ ಬಗೆಹರಿಸುತ್ತೀರಿ ಎಂದು ವಿವರಿಸಲಾಗಿದೆ.
ತಮ್ಮಿಂದ ಅನೇಕ ಆದೇಶಗಳು ಹೊರಬಂದಿದ್ದು, ಇದರಿಂದ ರಾಜ್ಯ ಸರ್ಕಾರಿ ಅಧಿಕಾರಿ/ ನೌಕರರಿಗೆ ಅನುಕೂಲಗಳಾಗಿವೆ. ಎನ್ಪಿಎಸ್ ವ್ಯವಸ್ಥೆಯು 1/4/2006ರಿಂದ ಜಾರಿಗೆ ಬಂದಿದ್ದು ಸುಮಾರು 3 ಲಕ್ಷ ನೌಕರರು ಎನ್ಪಿಎಸ್ ವ್ಯವಸ್ಥೆಗೆ ಒಳಪಟ್ಟಿರುತ್ತಾರೆ. ಈಗಾಗಲೇ ಕೆಲವರು ನಿವೃತ್ತಿ ಹಂತ ತಲುಪಿರುತ್ತಾರೆ. ಈ ಎನ್ಪಿಎಸ್ ಯೋಜನೆಯಿಂದ ಇವರ ನಿವೃತ್ತಿ ನಂತರದ ಜೀವನವು ಸುಸ್ತರವಾಗಿರಲು ಸಾಧ್ಯವಾಗುವುದಿಲ್ಲ.
ಈ ವಿಷಯವಾಗಿ 20/12/2022ರ ಅಧಿವೇಶನದಲ್ಲಿಯೂ ಚರ್ಚೆಯಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಎನ್ಪಿಎಸ್ ವ್ಯವಸ್ಥೆಯನ್ನು ರದ್ದುಪಡಿಸಿ ಓಪಿಎಸ್ ವ್ಯವಸ್ಥೆಗೆ ಜಾರಿಗೆ ತರುವ ಬಗ್ಗೆ ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿರುತ್ತಾರೆ ಹಾಗೂ ಪತಿ ಪಕ್ಷಗಳು ಕೂಡ ಎನ್ಪಿಎಸ್ ಕೈಬಿಡುವಂತೆ ಆಗ್ರಹಿಸಿರುತ್ತಾರೆ.
ತಾವು ಏಪ್ರಿಲ್ನಿಂದ ಎನ್ಪಿಎಸ್ ರದ್ದತಿಯ ಹೋರಾಟವನ್ನು ತೀವ್ರಗೊಳಿಸುವುದಾಗಿ ಮಾಧ್ಯಮಗಳಲ್ಲಿ ತಿಳಿಸಿರುತ್ತೀರಿ. ಆದರೆ ಏಪ್ರಿಲ್ನಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಸದರಿ ಹೋರಾಟವು ಅಷ್ಟು ಪರಿಣಾಮಕಾರಿಯಾಗುವುದಿಲ್ಲವೆಂದು ನನ್ನ ಅನಿಸಿಕೆ.
ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಕೂಡಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಧ್ಯೆ ಪ್ರವೇಶಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದಲ್ಲ, ಸರ್ಕಾರವು ಎನ್ಪಿಎಸ್ ರದ್ದತಿಯ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಬಹುದು. ತಮ್ಮ ನೇತೃತ್ವದಲ್ಲಿ ಎನ್ಪಿಎಸ್ ರದ್ದತಿಯಾದಲ್ಲಿ ತಮ್ಮ ಸಾಧನೆಯಲ್ಲಿ ಮೈಲಿಗಲ್ಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನನ್ನ ಒಂದು ಕಳಕಳಿಯ ಪ್ರಾರ್ಥನೆ ಎಂದರೆ ತಾವು ಈ ಕೂಡಲೇ ಎನ್ಪಿಎಸ್ ರದ್ದತಿಯ ಮುಷ್ಕರದಲ್ಲಿ ಮಧ್ಯ ಪ್ರವೇಶಿಸಿ ಸರ್ಕಾರದ ಮೇಲೆ ಒತ್ತಡ ತಂದು, ಈ ಯೋಜನೆಯನ್ನು ರದ್ದುಪಡಿಸಿ ಓಪಿಎಸ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಮುಖ್ಯಮಂತ್ರಿಗಳ ಉತ್ತರ; ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮಂಗಳವಾರ ಕಲಾಪದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯದ ಶಾಸಕ ಎಂ. ಶ್ರೀನಿವಾಸ ಪ್ರಶ್ನೆಗೆ ಉತ್ತರ ನೀಡಿದ್ದರು. ಎನ್ಪಿಎಸ್ ಜಾರಿ ಬಗ್ಗೆ ವಿವರಣೆಯನ್ನು ಕೊಟ್ಟಿದ್ದರು.
ನೌಕರರಿಗೆ ಹಳೆಯ ಪಿಂಚಣಿಯನ್ನು ಯಾವಾಗ ಪ್ರಾಂಭಿಸಲಾಗುವುದು?. ಈ ಬಗ್ಗೆ ಸರ್ಕಾರದ ನಡೆ ಏನು? ಎಂದು ಪ್ರಶ್ನಿಸಲಾಗಿತ್ತು. ಮುಖ್ಯಮಂತ್ರಿಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿರುವುದಿಲ್ಲ ಎಂದು ತಿಳಿಸಿದ್ದರು.












Click it and Unblock the Notifications