ಸಂಪುಟ ವಿಸ್ತರಣೆ: ಹಲವು ಗುಸುಗುಸು ಸುದ್ದಿಗೆ ಕಾರಣರಾದ ಪ್ರಲ್ಹಾದ್ ಜೋಶಿ, ಜಾರಕಿಹೊಳಿ
ಸಂಪುಟ ವಿಸ್ತರಣೆಯ ವಿಚಾರದಲ್ಲಿ ದಿನಕ್ಕೊಂದು ರೆಕ್ಕೆಪುಕ್ಕವಿಲ್ಲದ ಸುದ್ದಿಗಳು ಹರಿದಾಡುತ್ತಿವೆ. ಯಡಿಯೂರಪ್ಪನವರ ಸರಕಾರದ ಯಾವುದೇ ಸಚಿವರು ದೆಹಲಿಗೆ ಹೋದರೆ ಸಾಕು, ಮತ್ತೆ ಸಂಪುಟ ವಿಸ್ತರಣೆಯ ಗುಸುಗುಸು ಸುದ್ದಿ ಆರಂಭವಾಗುತ್ತಿದೆ.
ಯಾತಕ್ಕಾಗಿ ಸಿಎಂ ಯಡಿಯೂರಪ್ಪನವರನ್ನು ಸತಾಯಿಸಲಾಗುತ್ತಿದೆ, ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರ ಬರೀ ಅಂತೆಕಂತೆ ಸುದ್ದಿಯಲ್ಲ, ಸಂಪುಟ ವಿಸ್ತರಣೆಗೆ ಅನುಮತಿ ನೀಡದೇ ಇರುವ ಹಿಂದಿನ ಮರ್ಮವಾದರೂ ಏನು ಎನ್ನುವುದು ಬಿಜೆಪಿ ಹೈಕಮಾಂಡ್ ಗೆ ಮಾತ್ರ ತಿಳಿದಿರುವ ವಿಚಾರ.
ಯಡಿಯೂರಪ್ಪನವರಿಗೆ ಹೈಕಮಾಂಡ್ ಸಹಕಾರ ಕೊಡದೇ ಇರುವುದು ಇಂದು ನಿನ್ನೆಯ ವಿಚಾರವಲ್ಲ. ಅವರು ಅಧಿಕಾರಕ್ಕೆ ಏರಿದ ದಿನದಿಂದಲೇ ಇದು ನಡೆದುಕೊಂಡು ಬರುತ್ತಿದೆ. ಯಾವುದೇ ವಿಚಾರವಿರಲಿ ಸುಲಭವಾಗಿ ಹೈಕಮಾಂಡ್, ಬಿಎಸ್ವೈಗೆ ಮಾತಿಗೆ ಯೆಸ್ ಎನ್ನುತ್ತಿಲ್ಲ.
ಯಡಿಯೂರಪ್ಪನವರು ಮತ್ತೆ ಬುಧವಾರ (ನ 18) ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು. ಗಮನಿಸಬೇಕಾದ ಅಂಶವೇನಂದರೆ, ದೆಹಲಿಯಲ್ಲೇ ಇದ್ದ ಸಚಿವ ಜಾರಕಿಹೊಳಿಯಾಗಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಎಸ್ವೈ ಅವರನ್ನು ಭೇಟಿ ಮಾಡಲು ಹೋಗದೇ ಇದ್ದದ್ದು.

ಬಿಎಸ್ವೈ ಜೊತೆ ಡಿಸಿಎಂ ಗೋವಿಂದ ಕಾರಜೋಳ
ಶಿರಾ ಮತ್ತು ಆರ್.ಆರ್.ನಗರ ಅಸೆಂಬ್ಲಿ ಉಪಚುನಾವಣೆ ಬಿಜೆಪಿ ಗೆದ್ದ ನಂತರ ಸಿಎಂ ಯಡಿಯೂರಪ್ಪ ಪಕ್ಷದಲ್ಲಿ ಇನ್ನಷ್ಟು ಹಿಡಿತ ಸಾಧಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಸಿಎಂ ಯಡಿಯೂರಪ್ಪನವರ ದೆಹಲಿ ಪ್ರವಾಸ ಫಲಪ್ರದವಾಗಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಬಿಎಸ್ವೈ ಜೊತೆ ಡಿಸಿಎಂ ಗೋವಿಂದ ಕಾರಜೋಳ ಇದ್ದರೇ ಹೊರತು, ಅಲ್ಲೇ ಇದ್ದ ಜಾರಕಿಹೊಳಿ ಅಥವಾ ಜೋಶಿ ಇರಲಿಲ್ಲ.

ಕೇಂದ್ರ ಜಲಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶಿಖಾವತ್
ಎರಡು ದಿನದ ಹಿಂದೆಯೇ ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿದ್ದರು. ನಿನ್ನೆ (ನ 18) ಕೇಂದ್ರ ಜಲಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶಿಖಾವತ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಗೆ ಭೇಟಿಯಾಗಿದ್ದರು. ಜಾರಕಿಹೊಳಿ ಇಂದು ಕೂಡಾ ದೆಹಲಿಯಲ್ಲೇ ಇರಲಿದ್ದಾರೆ. ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಅನುಮತಿ ಕೋರಿ ಕೇಂದ್ರ ಸಚಿವರನ್ನು ಇಬ್ಬರೂ ಭೇಟಿಯಾಗಿದ್ದರು.

ನಡ್ಡಾ ಅವರಿಂದ ಸಂಪುಟ ವಿಸ್ತರಣೆಗೆ ಅನುಮತಿ ಸಿಗಬಹುದು ಎನ್ನುವ ಆಶಾಭಾವನೆ
ಅಧ್ಯಕ್ಷ ನಡ್ಡಾ ಅವರಿಂದ ಸಂಪುಟ ವಿಸ್ತರಣೆಗೆ ಅನುಮತಿ ಸಿಗಬಹುದು ಎನ್ನುವ ಆಶಾಭಾವನೆಯಿಂದಲೇ ಯಡಿಯೂರಪ್ಪನವರು ಬೆಂಗಳೂರಿನಿಂದ ಹೊರಟಿದ್ದರು. ಪಟ್ಟಿಯನ್ನೂ ಸಿದ್ದಪಡಿಸಿಕೊಂಡು ಹೋಗಿದ್ದ ಬಿಎಸ್ವೈಗೆ ಅವರ ಜೊತೆಗಿನ ಒಂದು ಗಂಟೆಯ ಚರ್ಚೆಯ ವೇಳೆ ಸಂಪುಟ ವಿಸ್ತರಣೆಗೆ ಅನುಮತಿ ಸಿಗಲಿಲ್ಲ. ಅಮಿತ್ ಶಾ ಅವರನ್ನು ಭೇಟಿಯಾಗಲು ಬಿಎಸ್ವೈ ಬಯಸಿದ್ದರೂ, ಅದು ಸಾಧ್ಯವಾಗಲಿಲ್ಲ.
Recommended Video

ರಮೇಶ್ ಜಾರಕಿಹೊಳಿ ದೆಹಲಿಯಲ್ಲಿದ್ದರೂ ಯಡಿಯೂರಪ್ಪನವರನ್ನು ಭೇಟಿಯಿಲ್ಲ
ಕೆಲವು ದಿನಗಳ ಹಿಂದೆ, ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಹಲವು ಸಚಿವ ಸ್ಥಾನದ ಆಕಾಂಕ್ಷಿಗಳು ಊಟದ ಹೆಸರಿನಲ್ಲಿ ಭೇಟಿಯಾಗಿದ್ದರು. ಉಪಚುನಾವಣೆಯ ಫಲಿತಾಂಶ ಬಂದ ನಂತರ ಇವರೆಲ್ಲಾ ಸಭೆ ಸೇರಿದ್ದು ವಿಶೇಷವಾಗಿತ್ತು. ಹೀಗಾಗಿ, ಪ್ರಲ್ಹಾದ್ ಜೋಶಿ ಮತ್ತು ರಮೇಶ್ ಜಾರಕಿಹೊಳಿ ದೆಹಲಿಯಲ್ಲಿದ್ದರೂ ಯಡಿಯೂರಪ್ಪನವರನ್ನು ಭೇಟಿಯಾಗದೇ ಇದ್ದದ್ದು ಹಲವು ಗುಸುಗುಸು ಸುದ್ದಿಗೆ ಕಾರಣವಾಗಿದೆ.












Click it and Unblock the Notifications