
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕಾರ್ಯಕ್ರಮ ಜಾರಿ
ಬೆಂಗಳೂರು, ನವೆಂಬರ್ 01: "ಕರ್ನಾಟದ ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಇದೇ ವರ್ಷದಿಂದ ಜಾರಿ ಮಾಡಲಾಗುವುದು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಘೋಷಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮ ಜಾರಿ ಕುರಿತು ತಿಳಿಸಿದರು.
ಮಂಗಳೂರು: ವಿದೇಶದಲ್ಲಿ ಉದ್ಯೋಗ, ನರ್ಸಿಂಗ್ ಕ್ಷೇತ್ರಕ್ಕೆ ಕೈತುಂಬಾ ಸಂಬಳ
"ಕೇಂದ್ರ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಇದೇ ನವ ಭಾರತದ ಪರಿಕಲ್ಪನೆಯಾಗಿದೆ" ಎಂದರು.
"ಅದೇ ರೀತಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೇ ವರ್ಷದಿಂದ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು. ಕರ್ನಾಟಕದಲ್ಲಿ ನಾವು ಇರುವುದಲ್ಲ, ನಮ್ಮೊಳಗೆ ಕರ್ನಾಟಕ ಇರಬೇಕು. ಅದಕ್ಕಾಗಿ ʼಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ 2022ʼ ತರುವ ಚಿಂತನೆ ಸರ್ಕಾರಕ್ಕೆ ಇದೆ" ಎಂದು ಅವರು ತಿಳಿಸಿದರು.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಕನ್ನಡ ಉಳಿಸುವ, ಬೆಳೆಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ 'ಕೋಟಿ ಕಂಠ ಗಾಯನ' ಏರ್ಪಡಿಸಿದ್ದು, ಕನ್ನಡ ಕವಿತೆಗಳ ಬಗ್ಗೆ ವಿಶೇಷ ಪ್ರೀತಿ ಬೆಳೆಸುವ ಐತಿಹಾಸಿಕ ಕೆಲಸವಾಗಿದೆ. ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ, ಸಿಬ್ಬಂದಿ ಕೂಡ ಇದರಲ್ಲಿ ಭಾಗವಹಿಸಿದ್ದು ಶ್ಲಾಘನೀಯ" ಎಂದರು.

ಉತ್ತರ ಕರ್ನಾಟಕದಲ್ಲಿ ಸೊಗಸಾದ ಭಾಷೆ
"ರಾಜ್ಯದ ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ ವಿಭಿನ್ನವಾದ ಸೊಗಸಾದ ಭಾಷೆ ಕೇಳಬಹುದು. ಹಳೇ ಮೈಸೂರಿಗೆ ಹೋದರೆ ಬೇರೆ ರೀತಿಯ ಕನ್ನಡ ಕೇಳಬಹುದು. ಅದೇ ರೀತಿ ಉತ್ತರ ಕನ್ನಡದಲ್ಲಿ ಹವ್ಯಕ ಕನ್ನಡ, ದಕ್ಷಿಣ ಕನ್ನಡದಲ್ಲಿ ಬೇರೆ ಶೈಲಿ ಕನ್ನಡ ಭಾಷೆ ಚಾಲ್ತಿಯಲ್ಲಿದೆ. ಕುಂದಾಪುರಕ್ಕೆ ಹೋದರೆ ಕುಂದ ಕನ್ನಡ ಇದೆ. ಯಕ್ಷಗಾನ, ಬಯಲಾಟ, ವೀರಗಾಸೆ, ದೈವಾರಾಧನೆ, ಜೋಗಪ್ಪ ಮೊದಲಾದ ಕಲೆಗಳು ನಮ್ಮಲ್ಲಿವೆ" ಎಂದು ಸಚಿವ ಸುಧಾಕರ್ ಬಣ್ಣಿಸಿದರು.

6,500ಭಾಷೆಗಳಲ್ಲಿ ಕನ್ನಡಕ್ಕೆ 27ನೇ ಸ್ಥಾನ
"ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಜಗತ್ತಿನಲ್ಲಿ ಆರೂವರೆ ಸಾವಿರ ಭಾಷೆಗಳಲ್ಲಿ ಕನ್ನಡ 27ನೇ ಸ್ಥಾನದಲ್ಲಿದೆ ಎನ್ನಲಾಗುತ್ತದೆ. ವಿಶ್ವ ಲಿಪಿಗಳ ರಾಣಿ ಎಂದು ಕನ್ನಡದ ಲಿಪಿಯನ್ನು ಬಣ್ಣಿಸಲಾಗಿದೆ. ಭಾರತವನ್ನು ಹಲವಾರು ದಶಕ ಆಳಿದ ಬ್ರಿಟಿಷರ ದೇಶದ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಕ್ ಆಯ್ಕೆಯಾಗಿದ್ದಾರೆ ಎಂಬುದು ಹೆಮ್ಮೆ.
ಭಾರತದ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಈಗ ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
"ಸಮಾನತೆಗೆ ಒತ್ತು ಕೊಟ್ಟಿದ್ದ ನಾಡಪ್ರಭು ಕೆಂಪೇಗೌಡರು ಜಾತಿ ಸಮುದಾಯಗಳಿಗೆ ಪೂರಕವಾಗಿ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಅಂತಹ ಪುಣ್ಯಾತ್ಮರನ್ನು ನಮ್ಮ ಸರ್ಕಾರ ಸ್ಮರಣೆ ಮಾಡುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಇದು ಬೆಂಗಳೂರು ಗ್ರಾಮಾಂತರ ಭಾಗದ ವಿಶೇಷತೆಗಳಲ್ಲಿ ಒಂದಾಗಿದೆ" ಎಂದರು.

ಪುನೀತ್ ರಾಜ್ಕುಮಾರ್ ಪ್ರೇರಣೆ
ಪವರ್ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಮೃತರಾದ ಬಳಿಕ ನೇತ್ರದಾನ ಮಾಡಿ ಯುವ ಜನರಿಗೆ ಪ್ರೇರಣೆಯಾದರು. ಆ ಬಳಿಕ ನೇತ್ರದಾನದ ಪ್ರಮಾಣ ಹೆಚ್ಚಾಯಿತು. ರಾಜ್ಯದ ಯುವಜನರು ಕನ್ನಡ ಭಾಷೆ, ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕು. ಕನ್ನಡಿಗರು ವಿಶ್ವಮಾನವರಾಗಬೇಕು ಎಂದು ಕವಿ ಕುವೆಂಪು ಹೇಳಿದ್ದರು. ಅದರ ಜೊತೆಗೆ ಕನ್ನಡ ಭಾಷೆ ಎಲ್ಲರಲ್ಲೂ ಗಟ್ಟಿಯಾಗಿ ಬೇರೂರಬೇಕು ಎಂದು ಹೇಳಿದರು.

ನವೆಂಬರ್ನಲ್ಇ 428 ನಮ್ಮ ಕ್ಲಿನಿಕ್ ಆರಂಭ
ರಾಜ್ಯದಲ್ಲಿ 100 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. 428 ನಮ್ಮ ಕ್ಲಿನಿಕ್ಗಳನ್ನು ಇದೇ ನವೆಂಬರ್ನಲ್ಲಿ ಆರಂಭಿಸಲಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ನೀಡುವ ಕೆಲಸ ಆಗುತ್ತಿದೆ. ತನು ಕನ್ನಡ, ಮನ ಕನ್ನಡ ಎಂಬಂತೆ ನಮ್ಮೆಲ್ಲರ ಮನಸ್ಸು, ಹೃದಯ ಎಲ್ಲವೂ ಕನ್ನಡವಾಗಲಿ ಎಂದು ಹಾರೈಸುತ್ತೇನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ ಆದ ಕವಿ ನಿಸಾರ್ ಅಹ್ಮದ್ 'ನಿತ್ಯೋತ್ಸವ' ಕವಿತೆ ರಚನೆ ಮಾಡಿದ್ದರು. ಅವರನ್ನು ಈ ದಿನ ಸ್ಮರಿಸಬೇಕು. ಹಾಗೆಯೇ ನೆಲಮಂಗಲದ ಸಿ.ಕರಿಯಪ್ಪ ಅವರು ರಾಜ್ಯೋತ್ಸವ ಪ್ರಶಸ್ತಿಯ ಗೌರವ ಪಡೆದಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕನ್ನಡಕ್ಕಾಗಿ ಶ್ರಮಿಸಿದವರನ್ನು ಸಚಿವ ಸುಧಾಕರ್ ಸ್ಮರಿಸಿದರು.