ಅಗ್ನಿ ಸುರಕ್ಷತೆ ಆದೇಶದ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ಕಾನೂನು ಸಮರ
ಬೆಂಗಳೂರು, ಮಾ. 14: ಖಾಸಗಿ ಶಾಲೆಗಳಿಗೆ ಸೀಮಿತಗೊಳಿಸಿ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ.
ಸರ್ಕಾರಿ ಶಾಲೆಗಳನ್ನು ಹೊರಗಿಟ್ಟು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಅಗ್ನಿ ಸುರಕ್ಷತೆ ಕಡ್ಡಾಯ ನಿಯಮವನ್ನು ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕ್ಯಾಮ್ಸ್) ಹೈಕೋರ್ಟ್ ಮೆಟ್ಟಿಲೇರಿದೆ. ಕ್ಯಾಮ್ಸ್ ನ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಈ ಕುರಿತು ಸ್ಪಷ್ಟನೆ ನಿಡುವಂತೆ ಸರ್ಕಾರಕ್ಕೆ ಗುಡುವು ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಸೀಮಿತಗೊಳಿಸಿ ಅಗ್ನಿ ಸುರಕ್ಷತಾ ನಿಯಮ ಕಡ್ಡಾಯಗೊಳಿಸಿರುವ ಅದೇಶ ಇದೀಗ ಭಾರೀ ವಿವಾದ ಹುಟ್ಟು ಹಾಕಿದೆ.
ಏನಿದು ಆದೇಶ:
ತಮಿಳುನಾಡಿನ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ದೇಶದಲ್ಲಿ ಶಾಲೆಗಳ ಸುರಕ್ಷತೆ ಮೇಲೆ ಬೆಳಕು ಚೆಲ್ಲಿತ್ತು. ಶಾಲೆಗಳಲ್ಲಿ ಅಗ್ನಿ ಮತ್ತು ಕಟ್ಟಡ ಸುರಕ್ಷತೆ ಬಗ್ಗೆ ಸುಪ್ರೀಂಕೋರ್ಟ್ 2014 ರಲ್ಲಿ ಮಹತ್ವದ ಆದೇಶ ನೀಡಿತ್ತು. ಅದರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಏಕ ರೂಪದ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ನಿಯಮ ಜಾರಿಗೊಳಿಸಬೇಕಿತ್ತು. ಈ ಆದೇಶವನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಖಾಸಗಿ ಶಾಲೆಗಳು ಕಡ್ಡಾಯವಾಗಿ ಅಗ್ನಿ ಸುರಕ್ಷತಾ ನಿಯಮ ಪಾಲನೆ ಕುರಿತು 2020 ರಲ್ಲಿ ಸುತ್ತೋಲೆ ಹೊರಡಿಸಿದೆ.

ಯಾವ ಶಾಲೆಗಳು ಸರ್ಕಾರದ ಆದೇಶಾನುಸಾರ ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡುತ್ತವೋ ಅಂತಹ ಖಾಸಗಿ ಶಾಲೆಗಳ ಆರ್. ಅರ್. ನವೀಕರಣ ಮಾಡಬೇಕು. ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಸರ್ಟಿಫಿಕೇಟ್ ಹಾಗೂ ಕಟ್ಟಡ ಗುಣಮಟ್ಟ ಕುರಿತು ಲೋಕೋಪಯೋಗಿ ಇಲಾಖೆಯಿಂದ ಎನ್ಓಸಿ ಪಡೆದರೆ ಮಾತ್ರ ಖಾಸಗಿ ಶಾಲೆಯ ಮಾನ್ಯತೆ ನವೀಕರಣ ಮಾಡಿ ಎಂಬ ಷರತ್ತುಗಳನ್ನು ವಿಧೀಸಿ ಆದೇಶ ಹೊರಡಿಸಲಾಗಿದೆ. ವಿಪರ್ಯಾಸವೆಮದರೆ ಮಕ್ಕಳು ಓದುವ ಸರ್ಕಾರಿ ಶಾಲೆಗಳ ಸುರಕ್ಷತಾ ನಿಯಮ ಹಾಗೂ ಕಟ್ಟಡ ಗುಣಮಟ್ಟ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯುವ ನಿಯಮದಿಂದ ದೂರ ಇಡಲಾಗಿದೆ.

ಖಾಸಗಿ ಶಾಲೆ ವಲಯದಲ್ಲಿ ಆಕ್ರೋಶ:
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಮೂಲಭೂತ ಸೌಕರ್ಯ ವಿಚಾರದಲ್ಲಿ ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಎಂದು ತಾರತಮ್ಯ ಮಾಡುವಂತಿಲ್ಲ. ಶಿಕ್ಷಣ ಇಲಾಖೆ ಮಾತ್ರ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಗುಣಮಟ್ಟ ಎನ್ಓಸಿ ಪಡೆಯುವ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ಅನ್ವಯವೇ ಆಗದಂತೆ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯೇ ಸ್ವತಃ ಶಿಕ್ಷಣ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ವಾದ. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ಕ್ಯಾಮ್ಸ್ ಹೈಕೋರ್ಟ್ ಗೆ ಸಲ್ಲಿಸಿರುವ ರಿಟ್ ನಲ್ಲಿ ಉಲ್ಲೇಖಿಸಿದೆ.

ಶಿಕ್ಷಣ ಕಾಯ್ದೆ ವಿಚಾರ ಬಂದಾಗ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ- ಖಾಸಗಿ ಶಾಲೆ ಎಂದು ತಾರತಮ್ಯ ಮಾಡುವಂತಿಲ್ಲ. ಆದರೆ ರಾಜ್ಯ ಸರ್ಕಾರ ಪದೇ ಪದೇ ತಾರತಮ್ಯ ಮಾಡುತ್ತಿದೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಗುಣಮಟ್ಟ ಕುರಿತು ಹೊರಡಿಸಿರುವ ಸುತ್ತೋಲೆ ಸುಪ್ರೀಕೋರ್ಟ್ ನ ತೀರ್ಪಿಗೆ ವ್ಯತಿರಿಕ್ತವಾಗಿದೆ. ಹೀಗಾಗಿ ಕ್ಯಾಮ್ಸ್ ವತಿಯಿಂದ ಶಿಕ್ಷಣ ಇಲಾಖೆ ಹೊರಡಿಸಿರುವ ಅಗ್ನಿ ಸುರಕ್ಷತೆ- ಕಟ್ಟಡ ಗುಣಮಟ್ಟ ಕುರಿತ ಅದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದೇವೆ. ನ್ಯಾಯ ಸಿಗುವ ಭರವಸೆಯಿದೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಗುಣಮಟ್ಟ ಕುರಿತ ನಿರಪೇಕ್ಷಣಾ ಪತ್ರ ಪಡೆಯದಿದ್ದರೆ ಶಾಲೆ ಮನ್ಯತೆ ನವೀಕರಣ ಮಾಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತಿದೆ. ಎಲ್ಲಾ ಎಲ್ಲಾ ವಾಸ್ತವ ಸಂಗತಿಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.












Click it and Unblock the Notifications