ಜ.17ರಿಂದ ಖಾಸಗಿ ಶಾಲಾ-ಕಾಲೇಜುಗಳು ಅನಿರ್ದಿಷ್ಟಾವಧಿಗೆ ಬಂದ್
ಬೆಂಗಳೂರು, ಡಿಸೆಂಬರ್ 23 : ರಾಜ್ಯದಾದ್ಯಂತ ಖಾಸಗಿ ಶಾಲಾ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಮಾತುಕತೆಗೆ ಬರುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಾಧ್ಯಮಿಕ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದೆ. ಆದ್ದರಿಂದ, ಜನವರಿ 17ರಿಂದ ರಾಜ್ಯದಾದ್ಯಂತ ಖಾಸಗಿ ಶಾಲಾ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲು ತೀರ್ಮಾನಿಸಿದೆ.
ಹುಬ್ಬಳ್ಳಿಯಲ್ಲಿ ನಡೆದ ವಿವಿಧ ಮಠಾಧೀಶರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಎಷ್ಟು ದಿನ ಮುಷ್ಕರ ನಡೆಯಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿಗೆ ಧರಣಿ ಸತ್ಯಾಗ್ರಹ ಮಾಡುವ ತೀರ್ಮಾನವನ್ನು ಕೈ ಬಿಟ್ಟು ಮಾತುಕತೆಗೆ ಬರುವಂತೆ" ಕರೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಗೆ ಸುರೇಶ್ ಕುಮಾರ್ ಈ ಕುರಿತು ಪತ್ರ ಬರೆದಿದ್ದಾರೆ. ಜನವರಿ ಮೊದಲ ವಾರದಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗುತ್ತದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು, ಶಾಲೆಗಳನ್ನು ಬಂದ್ ಮಾಡಿದರೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೇಡಿಕೆಗಳು
* ಖಾಸಗಿ ಶಾಲೆಗಳಿಗೆ ಅನುದಾನಿತ, ಅನುದಾನ ರಹಿತ ಎನ್ನುವುದನ್ನು ಕೈಬಿಡಬೇಕು
* ಸರ್ಕಾರಿ ಶಾಲೆಗಳಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೂ ನೀಡಬೇಕು
* ಎನ್ಪಿಎಸ್ ರದ್ಧತಿ ಮಾಡಬೇಕು
* ಕಾಲ್ಪನಿಕ ವೇತನ ಜಾರಿ
* ಖಾಲಿ ಹುದ್ದೆಗಳ ಭರ್ತಿ












Click it and Unblock the Notifications