ಎಎಪಿ ಸಾಗರೋತ್ತರ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಆಯ್ಕೆ
ಬೆಂಗಳೂರು, ಆಗಸ್ಟ್ 14: ಆಮ್ ಆದ್ಮಿ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷರಾಗಿ ಆಮ್ ಆದ್ಮಿ ಪಕ್ಷ ಕರ್ನಾಟಕದ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷದ ಸ್ಥಾಪಕ ಸದಸ್ಯರಾಗಿ, ರಾಷ್ಟ್ರೀಯ ವಕ್ತಾರರಾಗಿ, ಫಂಡ್ ರೈಸಿಂಗ್ ಸಮಿತಿ ಅಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪೃಥ್ವಿ ರೆಡ್ಡಿಯವರು ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ಅಮ್ ಆದ್ಮಿ ಪಕ್ಷ ರಾಷ್ಟ್ರಾದ್ಯಂತ ಸಂಘಟನೆ ಬೆಳೆಸಲು ಆರಂಭಿಸಿದ ''ಮಿಷನ್ ವಿಸ್ತಾರ್'' ಯೋಜನೆಯ ರಾಷ್ಟ್ರೀಯ ಸಂಚಾಲಕರಾಗಿದ್ದರು. ರಾಜಕೀಯ ಕ್ಷೇತ್ರಕ್ಕೆ ಸೇರುವ ಮುಂಚೆ ನಾಗರಿಕ ಹಕ್ಕುಗಳ ಜಾಗೃತಿಯಲ್ಲಿ ಸಕ್ರಿಯರಾಗಿದ್ದ ಪೃಥ್ವಿ ರೆಡ್ಡಿಯವರು ಬೆಂಗಳೂರಿನಲ್ಲಿ ಸ್ಮಾರ್ಟ್ ಓಟ್ ನಾಗರಿಕ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದರು.
ಭ್ರಷ್ಟಾಚಾರ ವಿರುದ್ಧದ ಭಾರತ ಚಳುವಳಿಯ ಮುಂಚೂಣಿ ನೇತಾರರಾಗಿ ಫ್ರೀಡಂ ಪಾರ್ಕಿನಲ್ಲಿ ಚಳುವಳಿಯನ್ನು ಸಮರ್ಥವಾಗಿ ಮುನ್ನಡೆಸಿ, ಚಳುವಳಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್ ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಸಕ್ರಿಯವಾಗಿ ಭಾಗವಹಿಸಲು ಪೃಥ್ವಿ ರೆಡ್ಡಿಯವರು ಪ್ರಮುಖ ಕಾರಣಕರ್ತರಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಎನ್ ನಿಜಲಿಂಗಪ್ಪರವರ ನಂತರ ಕನ್ನಡಿಗರೊಬ್ಬರು ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ ಹುದ್ದೆಯ ತತ್ಸಮಾನ ಹುದ್ದೆ ಅಲಂಕರಿಸುತ್ತಿರುವುದಕ್ಕೆ ಆಮ್ ಆದ್ಮಿ ಪಕ್ಷ ಕರ್ನಾಟಕದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications