ರಾಷ್ಟ್ರಪತಿ ಚುನಾವಣೆ; ರಾಜ್ಯಕ್ಕೆ ಮತದಾನ ಸಾಮಗ್ರಿ ರವಾನೆ
ಬೆಂಗಳೂರು ಜುಲೈ 12: ಜುಲೈ 18 ರಂದು ಭಾರತದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮತದಾನದ ಅವಶ್ಯಕ ಸಾಮಾಗ್ರಿಗಳು ಹಾಗೂ ಬ್ಯಾಲೆಟ್ ಬಾಕ್ಸ್ ಗಳನ್ನು ಮಂಗಳವಾರ ನವದೆಹಲಿಯಲ್ಲಿನ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ವಿವಿಧ ರಾಜ್ಯಗಳಿಗೆ ರವಾನಿಸಲಾಯಿತು.
ಕರ್ನಾಟಕ ರಾಜ್ಯದ ಬ್ಯಾಲೆಟ್ ಜರ್ನಿಯ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಅವರು ವಹಿಸಿದ್ದು, ಮಂಗಳೂರು ಸಂಜೆ ನವದೆಹಲಿಯಿಂದ ನಿರ್ಗಮಿಸಿ ರಾತ್ರಿ 8:15 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಮಿಸಿದರು.
ಈ ವಿಶೇಷ ಬ್ಯಾಲೆಟ್ ಜರ್ನಿಯ ಮುಖಾಂತರ ರಾಜ್ಯಕ್ಕೆ ಆಗಮಿಸಿದ ಮತದಾನದ ಸಾಮಾಗ್ರಿಗಳನ್ನು ವಿಧಾನಸೌಧದಲ್ಲಿ ಅವುಗಳಿಗಾಗಿ ಮೀಸಲಿಟ್ಟಿರುವ ಕೊಠಡಿ ಸಂಖ್ಯೆ 108 ರಲ್ಲಿ (Strong Room) ಶೇಖರಿಸಿಡಲಾಯಿತು. ರಾತ್ರಿ 9 ಗಂಟೆಗೆ ವಿಧಾನಸೌಧ ತಲುಪಲಿದ ಈ ವಿಶೇಷ ಬ್ಯಾಲೆಟ್ ಜರ್ನಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ಟ್ರಾಂಗ್ ರೂಂ ಅನ್ನು ಭದ್ರವಾಗಿ ಲಾಕ್ ಮಾಡಿದರು.

ಸಂಸತ್ನಲ್ಲಿ ಮತ ಚಲಾಯಿಸಲು ಅನುಮತಿ; ನವದೆಹಲಿಯಿಂದ ಆಗಮಿಸಿ ವಿಧಾನಸೌಧದ ವಿಶೇಷ ಕೊಠಡಿ ಸೇರಿದ ಈ ವಿಶೇಷ ಬ್ಯಾಲೆಟ್ ಜರ್ನಿಯಲ್ಲಿ ರಾಜ್ಯಕ್ಕೆ ಒಂದು ಸ್ಟೀಲ್ ಫ್ರೇಮ್ ಬ್ಯಾಲೆಟ್ ಬಾಕ್ಸ್, ಮಾರ್ಕ್ ಕಾಪಿ ಮತದಾರರ ಪಟ್ಟಿ ಹಾಗೂ ವಿಶೇಷ ಪೆನ್ನು ಸೇರಿದಂತೆ ಹಲವು ಸಾಮಾಗ್ರಿಗಳು ಒಳಗೊಂಡಿವೆ. ಸ್ಟ್ರಾಂಗ್ ರೂಂ ಲಾಕ್ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿಗಳು ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಶಾಸಕರು ಒಬ್ಬರು ಸಂಸತ್ ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದು ವಿವರಿಸಿದರು.
ಉಳಿದ ರಾಜ್ಯದ ಸಂಸದರು ಸಂಸತ್ ನಲ್ಲಿ ಮತ ಚಲಾಯಿಸಲಿದ್ದಾರೆ, ಒಬ್ಬರು ಅನಾರೋಗ್ಯದ ಕಾರಣಕ್ಕಾಗಿ ಇಲ್ಲಿಯೇ ಮತ ಚಲಾಯಿಸಲು ಮನವಿ ಮಾಡಿಕೊಂಡಿರುವ ಕಾರಣಕ್ಕಾಗಿ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದರು.
ಚುನಾವಣೆ ಪ್ರಕ್ರಿಯೆ ವಿವರ; ಭಾರತದ 16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ.

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.
ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಭ್ಯರ್ಥಿಗಳಾಗಿದ್ದಾರೆ.












Click it and Unblock the Notifications