ಖಾಸಗಿ, ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಸಿಎಂ
ಬೆಂಗಳೂರು. ನ.1: ಖಾಸಗಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಲು ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅದರ ಜತೆ ಔದ್ಯೋಗಿಕ ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಕೌಶಲ್ಯ, ಅರೆ ಕೌಶಲ್ಯ ವಲಯದಲ್ಲಿ ಶೇ.75 ರಷ್ಟು ಉದ್ಯೋಗಗಳನ್ನು ಕ್ನಡಿಗರಿಗೆ ದೊರಕಿಸಲೂಸರ್ಕಾರ ಆದ್ಯತೆ ನೀಡುತ್ತದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 180 ಸರ್ಕಾರಿ ಐ.ಟಿ.ಐಗಳ ಉನ್ನತೀಕರಣಕ್ಕೆ ಚಾಲನೆ ನೀಡಿದ್ದು ಇದೇ ತಿಂಗಳು ಉನ್ನತೀಕರಣದ ಕಾರ್ಯ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಮುಕ್ತವಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಆಡಳಿತದಲ್ಲಿ ಕನ್ನಡದ ಪರಿಣಾಮಕಾರಿ ಬಳಕೆಗೆ ಈಗಾಗಲೇ ಹೊರಡಿಸಿರುವ ಆದೇಶಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಕನ್ನಡಿಗರಿಗೆ ಉತ್ತಮ ಆಡಳಿತ ನೀಡಲು ಆಡಳಿತ ಸುಧಾರಣಾ ಸಮಿತಿಯ ಪ್ರಥಮ ವರದಿಯ ಪ್ರಮುಖ ಭಾಗಗಳ ಅನುಷ್ಠಾನ ಹಾಗೂ ಇಂದಿನಿಂದ ಜನಸೇವಕ ಕಾರ್ಯಕ್ರಮದ ಮೂಲಕ ಸರ್ಕಾರದ 30 ಸೇವೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದು, ಜನವರಿ 26 ರಿಂದ ರಾಜ್ಯಾದ್ಯಂತ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಾಥಮಿಕ ಮಟ್ಟದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿ ಜಾಗತಿಕ ಮಟ್ಟದಲ್ಲಿ ಪೈಪೋಟಿಗೆ ಸಿದ್ದರಾಗುವಂತೆ ತಯಾರು ಮಾಡಲಾಗುವುದು. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಮಾತೃಭಾಷೆಯಲ್ಲಿಯೇ ಉನ್ನತ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯಲು ನಮ್ಮ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ:
ಕರ್ನಾಟಕದ ಯಾವುದೇ ಪ್ರದೇಶವನ್ನು ಹಿಂದುಳಿಯಲು ಬಿಡುವುದಿಲ್ಲ ಎಂಬ ಸಂಕಲ್ಪ ನಮ್ಮ ಸರ್ಕಾರದ್ದು. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಹೆಸರು ಬದಲಾವಣೆಯ ಜೊತೆಗೆ ಆ ಭಾಗದ ಜನರ ಬದುಕು ಹಸನಾಗಬೇಕು. ಪ್ರಗತಿ ಹೊಂದಬೇಕು. ಆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು. ಆ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನೂ ಮಾಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ 3000 ಕೋಟಿ ರೂ. ವಿಶೇಷ ಅನುದಾನವನ್ನು ಸರ್ಕಾರ ಒದಗಿಸಲಿದೆ. ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶದ ಸಮಗ್ರ ಅಭಿವೃದ್ದಿ, ಔದ್ಯೋಗೀಕರಣಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ ಎಂದರು.

ರಾಜ್ಯೋತ್ಸವ ನಿತ್ಯೋತ್ಸವವಾಗಲಿ
ಎಲ್ಲ ವಿಚಾರಗಳಲ್ಲಿಯೂ ಕನ್ನಡಕ್ಕೆ ಅಗ್ರಸ್ಥಾನ ನೀಡಿ ಕನ್ನಡಿಗರ ಬದುಕು, ಭವಿಷ್ಯವನ್ನು ಕಟ್ಟೋಣ ಎಂದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ, ಜನೋತ್ಸವವಾಗಬೇಕು. ಈ ಗುರಿ ತಲುಪುವವರೆಗೆ ವಿರಮಿಸುವುದಿಲ್ಲ ಎಂದರು.
ಕೋವಿಡ್ ಕಾರಣದಿಂದ ಸೀಮಿತವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದರೂ ಉತ್ಸಾಹ, ಚೈತನ್ಯ ಕುಂದಿಲ್ಲ. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಅದು ನಮ್ಮೆಲ್ಲರ ಬೇರು. ಈ ತಾಯಿ ಬೇರನ್ನು ಸಂರಕ್ಷಿಸಿ, ವಿಶ್ವದಲ್ಲಿ ಹೆಮ್ಮರವಾಗಿಸಿ, ಮನುಕುಲಕ್ಕೆ ಕನ್ನಡದ ಮಹತ್ವ, ಪ್ರಯೋಜನ ಮತ್ತು ಸ್ವಾಭಿಮಾನವನ್ನು ತಿಳಿಸುವ ಶತಮಾನವಿದು ಎಂದರು.
ಕನ್ನಡದ ಅಸ್ತಿತ್ವ ಸುದೀರ್ಘ ಬದಲಾವಣೆಗಳ ಮಧ್ಯೆಯೂ ಗಟ್ಟಿಯಾಗಿ ನಿಂತಿದೆ. ಸಾಂಸ್ಕೃತಿಕ ಆಡಳಿತಾತ್ಮಕ ಹಾಗೂ ಐತಿಹಾಸಿಕ ದಾಳಿಗಳನ್ನು ಕನ್ನಡ ಎದುರಿಸಿ ನಿಂತಿದೆ. ಕನ್ನಡಕ್ಕೇ ತನ್ನದೇ ಅಂತರ್ಗತ ಶಕ್ತಿ ಇದೆ. ಸೂರ್ಯ ಚಂದ್ರರಿರುವವರೆಗೂ ಯಾವುದೇ ಶಕ್ತಿ ಕನ್ನಡವನ್ನು ಅಳಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್, ಶಾಸಕ ರಿಜ್ವಾನ್ ಆರ್ಷದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ , ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.












Click it and Unblock the Notifications