ತಾಜಾ ಸಮೀಕ್ಷೆ: ಕಾಂಗ್ರೆಸ್ಸಿಗೆ ಒಂದು ಡಜನ್ ಸೀಟು!

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವತಿಯಿಂದ ಗುಪ್ತಚರ ವಿಭಾಗ ಮತ್ತು ಖಾಸಗಿ ಸಂಸ್ಥೆಯೊಂದು ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿದೆ. ಜತೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿಯೂ ಮತದಾರರ ನಾಡಿಮಿಡಿತ ಅರಿಯಲು ಈ ಸಮೀಕ್ಷೆ ಯತ್ನಿಸಿದೆ.
ಈ ಸಮೀಕ್ಷೆ/ ಮಾಹಿತಿಯ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ 10-12 ಸ್ಥಾನಗಳಲ್ಲಿ ಮಾತ್ರ ಜಯ ಪ್ರಾಪ್ತಿಯಾಗಬಹುದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗೆದ್ದಿತ್ತು. ಆದರೆ ಆನಂತರ ನಡೆದ ಉಪಚುನಾವಣೆಗಳಲ್ಲಿ ಮತ್ತೆ 3 ಸ್ಥಾನಗಳನ್ನು ಗೆದ್ದು ತನ್ನ ಟ್ಯಾಲಿಯನ್ನು 9ಕ್ಕೆ ಹೆಚ್ಚಿಸಿಕೊಂಡಿತ್ತು. ಅದೇ ಬಿಜೆಪಿ ಬುಟ್ಟಿಯಲ್ಲಿ 18 ಸ್ಥಾನಗಳಿದ್ದವು.
ಕುತೂಹಲದ ಸಂಗತಿಯೆಂದರೆ ಸಮೀಕ್ಷೆಯ ಪ್ರಕಾರ ಬಿಜೆಪಿ ಶಕ್ತಿ ಸಹ ಕುಂದಲಿದೆ. ಬಿಜೆಪಿ ಸಹ 10-12 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಇತ್ತೀಚಿನ 8 ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ, ಸರಕಾರದ ವೈಫಲ್ಯಗಳು ಬಿಜೆಪಿ ಮತ್ತು ಜೆಡಿಎಸ್ಸಿಗೆ ವರವಾಗುವ ಸಾಧ್ಯತೆಯಿದೆ.
ಇದರ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಅವರು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ತಾವೇ ಒಂದು ನೀಲಿನಕ್ಷೆಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಕಡಿಮೆ ಸ್ಥಾನ ಬಂದರೆ ತಮ್ಮ ಕುರ್ಚಿಗೆ ಸಂಚಕಾರ ಬರುತ್ತದೆ ಎಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡುತ್ತಿದ್ದು, ಹೆಚ್ಚು ಜನಪರವಾಗಲು ಯತ್ನಿಸುತ್ತಿದ್ದಾರೆ.
ಇದೇ ಆಲೋಚನೆಯಲ್ಲಿ ಫೆ. 14ರಂದು ತಾವು ಮಂಡಿಸಲಿರುವ ರಾಜ್ಯ ಮುಂಗಡಪತ್ರದಲ್ಲಿ ಅನೇಕಾನೇಕ ಜನಪರ ಯೋಜನೆಗಳನ್ನು ಪ್ರಕಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಬಜೆಟ್ ಸರ್ಕಸ್ ಸಿಎಂ ಸಿದ್ದರಾಮಯ್ಯಗೆ ಹೆಚ್ಚು ಲಾಭ ತಂದುಕೊಡುವುದಿಲ್ಲ ಎನ್ನುತ್ತಿದೆ ತಾಜಾ ಚುನಾವಣಾ ಪೂರ್ವ ಸಮೀಕ್ಷೆ.












Click it and Unblock the Notifications