ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಹಣದತ್ತ ಬೆರಳು ತೋರಿಸಿದ ಸಿಎಂ; ಅಂಕಿಅಂಶ ಸಹಿತ ತಿರುಗೇಟು ಕೊಟ್ಟ ಜೋಶಿ
ಶನಿವಾರ, ಮೇ 20ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು, ತಮ್ಮ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು.
ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ರಾಜ್ಯಕ್ಕೆ ಬರಬೇಕಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ 50,000 ಕೋಟಿ ರೂ. ಹಣ ಬರಬೇಕಿದೆ. ಅದು 1 ಲಕ್ಷ ಕೋಟಿ ರೂ. ಆಗಬೇಕಿತ್ತು ಎಂದು ಟೀಕಿಸಿದರು.

"2015ರ ಹಣಕಾಸು ಆಯೋಗದಲ್ಲಾದ ತಪ್ಪಿನಿಂದಾಗಿ ನಮಗೆ ಶೇ.50 ರಷ್ಟು ಅನುದಾನದ ಹಣ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ," ಎಂದು ಸಿಎಂ ಸಿದ್ದರಾಮಯ್ಯ ದೂಷಿಸಿದರು.
ಇದಕ್ಕೆ ಭಾನುವಾರದಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದು, "ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. 2009-2014ರ ಡೆವಲ್ಯೂಷನ್ ಫಂಡ್ಗಿಂತ ಈಗ ರಾಜ್ಯಕ್ಕೆ ಸಿಗುತ್ತಿರುವ ಫಂಡ್ ಹೆಚ್ಚಾಗಿದೆ," ಎಂದು ತಿಳಿಸಿದರು.
2014-2019ರ ಅವಧಿಯಲ್ಲಿ ಶೇ.129ರಷ್ಟು ಡೆವಲ್ಯೂಷನ್ ಫಂಡ್ ಹೆಚ್ಚಾಗಿದೆ. ಯಾವ ವರ್ಷ ಎಷ್ಟು ಅನುದಾನ ರಾಜ್ಯಕ್ಕೆ ಬಂದಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಈ ಮೊದಲು 700ರಿಂದ 800 ಕೋಟಿ ರೂ. ಬರುತ್ತಿದ್ದ ಡೆವಲ್ಯೂಷನ್ ಫಂಡ್, ಬಿಜೆಪಿ ಸರ್ಕಾರದ ಅವಧಿಯಲ್ಲಿ 5000ದಿಂದ 7000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿವರಿಸಿದರು.

"2009-10ರಲ್ಲಿ 2476 ಕೋಟಿ ರೂ. ಅನುದಾನ ಬರುತ್ತಿತ್ತು. ಇದೀಗ 2019-20ರಲ್ಲಿ 7578 ಕೋಟಿ ರೂ. ರಾಜ್ಯಕ್ಕೆ ಬಂದಿದೆ. 2021-22ರಲ್ಲಿ 7862 ಕೋಟಿ ರೂ. ಸಿಕ್ಕಿದೆ. ಪ್ರತಿವರ್ಷ ಡೆವಲ್ಯೂಷನ್ ಫಂಡ್ ಜಾಸ್ತಿಯಾಗುತ್ತಿದೆ," ಎಂದು ಅಂಕಿಅಂಶಗಳ ಮೂಲಕ ಸಿಎಂ ಸಿದ್ದರಾಮಯ್ಯ ಆರೋಪಗಳಿಗೆ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
"ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಆಸಕ್ತಿ ಇಲ್ಲ. ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸಿ ನೆಪ ಹೇಳುತ್ತಿದ್ದಾರೆ. ಚುನಾವಣೆಗಾಗಿ ಸುಳ್ಳು ಭರವಸೆ ನೀಡಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಜಾರಿಗೆ ಎಂದಿದ್ದರು. ಆದರೆ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ," ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಕಾಂಗ್ರೆಸ್ನವರು ಸುಳ್ಳು ಹೇಳುವುದರಲಲ್ಲಿ ನಿಸ್ಸೀಮರು. ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲಾ ಹಗರಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ತನಿಖೆ ಮಾಡಲಿ, ನಮ್ಮ ಅಧಿಕಾರವಧಿಯಲ್ಲಿ ಯಾವ ಹಗರಣಗಳು ನಡೆದಿಲ್ಲ. ನಮ್ಮದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯ ಆರೋಪವೇನು?
ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, "ಜಿಎಸ್ಟಿ ಸೇರಿ ವರ್ಷಕ್ಕೆ 4 ಲಕ್ಷ ಕೋಟಿ ರೂ.ಗಳನ್ನು ಕರ್ನಾಟಕದಿಂದ ತೆರಿಗೆ ಕಟ್ಟುತ್ತೇವೆ. ಆದರೆ, 15ನೇ ಹಣಕಾಸು ಆಯೋಗವು ನಿಗದಿ ಮಾಡಿದ್ದ 5,495 ಕೋಟಿ ರೂಪಾಯಿಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿಲ್ಲ. ರಾಜ್ಯಕ್ಕೆ ಇದಕ್ಕಿಂತ ಅನ್ಯಾಯ ಮಾಡಿದ ಸರ್ಕಾರ ಬೇಕಾ?," ಎಂದು ಕೇಂದ್ರದ ವಿರುದ್ಧ ಆರೋಪಿಸಿದರು.
"ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಪಡೆಯಲು ಅಡ್ಡಿಯಾಗಿದ್ದಾರೆ," ಎಂದು ಹೇಳಿದ್ದರು.
"ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ಕರ್ನಾಟಕ ಅತಿ ಹೆಚ್ಚು ತೊಂದರೆ ಅನುಭವಿಸಿದೆ. ಬಸವರಾಜ ಬೊಮ್ಮಾಯಿ ಜಿಎಸ್ಟಿ ಕೌನ್ಸಿಲ್ ಅಧ್ಯಕ್ಷನಾಗಿದ್ದರೂ, ರಾಜ್ಯದ ಪರ ಧ್ವನಿ ಎತ್ತಿಲ್ಲ. ಇನ್ನು ಬಿಜೆಪಿಯ 25 ಸಂಸದರೂ ಈ ಬಗ್ಗೆ ಚಕಾರವೆತ್ತಿಲ್ಲ," ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications