ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ; ಪ್ರಕಾಶ್ ರಾಜ್ ಟ್ವೀಟ್!
ಬೆಂಗಳೂರು, ಏಪ್ರಿಲ್ 05; ಬಹುಭಾಷಾ ನಟ, ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಮಂಗಳವಾರ ರಾತ್ರಿಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಬುಧವವಾರ ಟ್ವೀಟ್ ಮಾಡಿದ್ದಾರೆ. 'ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ' ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ. ತಾವು ಸದಾ ಬಳಕೆ ಮಾಡುವ #justasking ಹ್ಯಾಷ್ ಟ್ಯಾಗ್ ಬಳಕೆ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ 1.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಪಾಲ್ಗೊಳ್ಳಬಹುದು ಅಥವ ಸುದೀಪ್ ಬಿಜೆಪಿ ಸೇರುವ ಕುರಿತು ಯಾವುದೇ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಕಿಚ್ಚ ಸುದೀಪ್ ಬಸವರಾಜ ಬೊಮ್ಮಾಯಿ ಆಪ್ತರಲ್ಲಿ ಒಬ್ಬರು.
ಕಿಚ್ಚ ಸುದೀಪ್ ಬಿಜೆಪಿ ಪಕ್ಷವನ್ನು ಸೇರುತ್ತಾರೆಯೇ? ಅಥವ ಸ್ಟಾರ್ ಪ್ರಚಾರಕರಾಗಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಿಚ್ಚ ಸುದೀಪ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರಬೇಕು ಎಂದು ಆಹ್ವಾನಿಸಿದ್ದರು. ಆಗ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಸ್ವಾಗತ ಮಾಡುತ್ತೇನೆ; ನಟ ಕಿಚ್ಚ ಸುದೀಪ್ ಬಿಜೆಪಿ ಸೇರುವ ಕುರಿತು ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯಾದರೆ ಸ್ವಾಗತ ಮಾಡುತ್ತೇನೆ. ಕಿಚ್ಚ ಸುದೀಪ್ ಪಕ್ಷ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ. ಸುದೀಪ್ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುತ್ತದೆ. ಅವರು ನಮ್ಮ ಸಮುದಾಯದ ನಾಯಕ ಅಂತೇನು ಅಲ್ಲ, ನನಗೆ ಪಕ್ಷ ಮುಖ್ಯ" ಎಂದು ಹೇಳಿದರು.
ಇನ್ನು ಯಾದಗಿರಿಯಲ್ಲಿ ಮಾತನಾಡಿದ ಸುರಪುರದ ಬಿಜೆಪಿ ಶಾಸಕ ರಾಜುಗೌಡ, "ನಟ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಕೊಟ್ಟರೆ ಅಥವ ಪಕ್ಷ ಸೇರ್ಪಡೆಯಾದರೆ ಆನೆ ಬಲ ಬಂದಂತೆ ಆಗುತ್ತದೆ. ಅವರು ಪಕ್ಷ ಸೇರುವುದು ನಮಗೆ ಮತ್ತು ಪಕ್ಷಕ್ಕೆ ಸಂತಸದ ವಿಚಾರ. ಸುದೀಪ್ ಪಕ್ಷಕ್ಕೆ ಸೇರುವ ಸುಳಿವು ಇತ್ತು. ನಾನೇ ಹೇಳಲು ಹೋಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದೀಪ್ ತುಂಬಾ ಆತ್ಮೀಯರು. ಅವರ ನಡುವೆ ನಾನು ಪ್ರವೇಶ ಮಾಡಬಾರದು ಅಂತ ಸುಮ್ಮನಿದ್ದೆ. ಸುದೀಪ್ ಒಳ್ಳೆಯ ನಟ, ಒಳ್ಳೆಯ ಆಲೋಚನೆ ಇರುವ ವ್ಯಕ್ತಿ. ಅವರಿಗೆ ಬಡವರು, ಅಭಿವೃದ್ಧಿ ಪರವಾದ ಕಾಳಜಿ ಇದೆ" ಎಂದರು.
ಬೆದರಿಕೆ ಪತ್ರ; ನಟ ಕಿಚ್ಚ ಸುದೀಪ್ ಬಿಜೆಪಿ ಸೇರುವ ಸುದ್ದಿಗಳ ನಡುವೆಯೇ ಅವರಿಗೆ ಬೆದರಿಕೆ ಪತ್ರ ಬಂದಿದೆ. ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರದಲ್ಲಿ ಅನಾಮಧೇಯ ವ್ಯಕ್ತಿ ಕಿಚ್ಚ ಸುದೀಪ್, ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದು, ಈ ಕುರಿತು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಸುದೀಪ್ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ. ಪ್ರಕರಣದ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications