ಸೈಲೆಂಟ್ ಆಗಿದ್ದ ಪ್ರಕಾಶ್ ರೈ, ವೈಲೆಂಟ್ ಆಗಿ #JustAsking
ಬೆಂಗಳೂರು, ಮೇ 15 : ಮತಎಣಿಕೆಯ ಪ್ರಕ್ರಿಯೆಯನ್ನು ಸೈಡ್ ವಿಂಗ್ ನಿಂದೆಯೇ ವೀಕ್ಷಿಸುತ್ತ, ಕರ್ನಾಟಕದಲ್ಲಿ ಸರಕಾರ ರಚಿಸಲು ರಾಜ್ಯದ ಜನತೆ ಬಿಜೆಪಿಗೆ ಅವಕಾಶ ನೀಡುವುದಿಲ್ಲ ಎಂಬ ಅಪಾರ ನಿರೀಕ್ಷೆಯೊಂದಿಗೆ ಕೆಲಕಾಲ ಸೈಲೆಂಟ್ ಆಗಿದ್ದ ಪ್ರಕಾರ್ ರೈ ಅವರು ಮತ್ತೆ ವೈಲೆಂಟ್ ಆಗಿ ಪ್ರತ್ಯಕ್ಷರಾಗಿದ್ದಾರೆ.
ಭಾರತೀಯ ಜನತಾ ಪಕ್ಷ ಅತೀಹೆಚ್ಚು ಸ್ಥಾನಗಳನ್ನು ಗಳಿಸುತ್ತಿದ್ದಂತೆ ಹಲವಾರು ಟ್ವಿಟ್ಟಿಗರು, ಅಭಿಮಾನಿಗಳು ಪ್ರಕಾಶ್ ರೈ ಎಲ್ಲಿ, ಯಾಕೆ ಸೈಲೆಂಟ್ ಆಗಿದ್ದಾರೆ, ಯಾಕೆ ಪ್ರಶ್ನೆಗಳನ್ನು ಕೇಳುತ್ತಿಲ್ಲ, ಯಾಕೆ ಮತಎಣಿಕೆಯ ಅವ್ಯವಸ್ಥೆಯ ವಿರುದ್ಧ ದನಿಯೆತ್ತುತ್ತಿಲ್ಲ ಎಂದು ಕೇಳುತ್ತಲೇ ಇದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಖಾತ್ರಿಯಾಗುತ್ತಿದ್ದಂತೆ, ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ, ಅವರು ಸರಕಾರ ರಚಿಸುವುದರಿಂದ ಹಿಂದುಳಿಯುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಮತ್ತೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ. ಒಂದರ ಹಿಂದೊಂದರಂತೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಅವರು ಏನು ಕೇಳುತ್ತಿದ್ದಾರೆ ಮುಂದೆ ಓದಿ, ಸಾಧ್ಯವಾದರೆ ಅವಕ್ಕೆ ಉತ್ತರಿಸಿ. ಮುಂದೆ ಏನಾಗಲಿದೆ ಎಂಬುದನ್ನು ಅವರು ಅತ್ಯಂತ ಸ್ವಾರಸ್ಯಕರವಾಗಿ ವ್ಯಾಖ್ಯಾನಿಸಿದ್ದಾರೆ. ಅವರು ಅಂದುಕೊಂಡಂತೇ ಆಗುವುದಾ? ಕಾದು ನೋಡೋಣ. ಇವುಗಳಿಗೆ ಅರ್ಥ ಹುಡುಕುವುದು ಓದುಗರಿಗೆ ಬಿಟ್ಟಿದ್ದು.

ಬೇಟೆಯಾಡಲು ಚಾಣಕ್ಯ ಬರುತ್ತಾರೆ
1. ಅತಿದೊಡ್ಡ ಪಕ್ಷವಾಗಿರುವಾಗಿ ಹೊರಹೊಮ್ಮಿರುವುದರಿಂದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಸಂಪರ್ಕಿಸುತ್ತಾರೆ... 2. ಅವರು (ಬಹುಮತ) ಸಾಬೀತುಪಡಿಸಲು ಸಮಯ ನೀಡುತ್ತಾರೆ (ಇದನ್ನು ಬಲಿ ತೆಗೆದುಕೊಳ್ಳಲು ಎಂದು ಓದಿ)... 3. (ಶಾಸಕರನ್ನು) ಬೇಟೆಯಾಡಲು ಚಾಣಕ್ಯ (ಅಮಿತ್ ಶಾ) ಬರುತ್ತಾರೆ... 4. ಅವರ ಪ್ರತಿಭೆಯನ್ನು ಹೊಗಳಲು ಪೇಯ್ಡ್ ಮೀಡಿಯಾ ತುದಿಗಾಲಲ್ಲಿ ನಿಂತಿರುತ್ತದೆ... 5. ಕಡೆಗೆ ಕುದುರೆ ವ್ಯಾಪಾರವನ್ನು ನಾಗರಿಕರು ನೋಡಬೇಕಾಗುತ್ತದೆ...

ದೊಡ್ಡ ನಾಟಕ ಅನಾವರಣಗೊಳ್ಳಲಿದೆ
ಬಿಜೆಪಿ ಆಡುತ್ತಿರುವ ಈ ಆಟವನ್ನು ಕರ್ನಾಟಕ ನೋಡುತ್ತಿದೆ. ಅತ್ಯಂತ ಅಸಹ್ಯಕರ ಹಣದ ಬಲ ಮತ್ತು ತೋಳು ಬಲ, ದೊಡ್ಡ ಸುಳ್ಳುಗಳನ್ನು ಹೇಳಿದ ನಂತರವೂ ಬಹುಮತದ ಅರ್ಧ ದಾರಿ ಮಾತ್ರ ಕ್ರಮಿಸಿದೆ. ತನ್ನ ಸ್ವಂತ ಬಲದ ಮೇಲೆ ಅಧಿಕಾರ ಪಡೆಯಲು ಸೋತಿದೆ. ಆದರೆ, ಎರಡು ಪಕ್ಷಗಳು ಬಹುಮತ ಸಾಬೀತುಪಡಿಸುವುದಾಗಿ ಒಟ್ಟಿಗೆ ಬಂದಿವೆ. ಆದರೆ ಪ್ರೀತಿಯ ನಾಗರಿಕರೆ ನೋಡುತ್ತಿರಿ, ಇನ್ನು ಮುಂದೆ ದೊಡ್ಡ ನಾಟಕ ಅನಾವರಣಗೊಳ್ಳಲಿದೆ.

ಎಚ್ಚೆತ್ತುಕೊಳ್ಳದಿದ್ದರೆ ಪ್ರಶ್ನೆ ಕೇಳದಿದ್ದರೆ...
ನೀವು ಎಚ್ಚೆತ್ತುಕೊಳ್ಳದಿದ್ದರೆ, ಪ್ರತಿ ರಾಜಕಾರಣಿಯನ್ನು, ಪ್ರತಿ ಪಕ್ಷವನ್ನು ಪ್ರಶ್ನೆ ಕೇಳದಿದ್ದರೆ, ನೀವು ನೀಡಿರುವ ಜನಾದೇಶವನ್ನು ಕೇವಲವಾಗಿ ನೋಡಲಾಗುತ್ತದೆ, ತಿರುಚಲಾಗುತ್ತದೆ ಮತ್ತು ಈ ದೇಶದ (ಕರ್ನಾಟಕದ ಅಲ್ಲ) ಜನರು ಕೇವಲ ಮೂಕ ಪ್ರೇಕ್ಷಕರಂತೆ ಆಗುತ್ತೇವೆ. ಪ್ರಶ್ನೆ ಕೇಳುವುದನ್ನು ಮುಂದುವರಿಸಿ. (ಅವರು ಕಾಂಗ್ರೆಸ್ ರಾಜಕಾರಣಿಗಳನ್ನು ಪ್ರಶ್ನೆ ಕೇಳಿ ಎಂದು ಹೇಳಿಲ್ಲ, ಬದಲಿಗೆ ಬಿಜೆಪಿ ನಾಯಕರನ್ನು ಕೇಳಿ ಎಂಬ ಭಾವಾರ್ಥವಿದೆ. ರೀಡ್ ಬಿಟ್ವೀನ್ ದಿ ಲೈನ್ಸ್.)

ನಾಚಿಕೆಗೇಡಿನ ರಾಜಕಾರಣಿಗಳ ಸರ್ಕಸ್
ನಾಚಿಕೆಗೇಡಿನ ರಾಜಕಾರಣಿಗಳು (ಬಿಜೆಪಿಯವರನ್ನು ಕುರಿತು ಆಡಿದ್ದಾ, ಕಾಂಗ್ರೆಸ್ ನಾಯಕರನ್ನು ಕುರಿತು ಆಡಿದ್ದಾ? #JustAsking) ಸರ್ಕಸ್ ಆಡುತ್ತಿದ್ದಾರೆ. ಆದರೆ ಇದರಿಂದ ನಾನು ನಾಗರಿಕರ ಪರವಾಗಿ ನಿಂತಿರುವ ನನ್ನ ನಿಲುವನ್ನು ಇನ್ನಷ್ಟು ಬಲಪಡಿಸುತ್ತದೆ. ಮತ್ತು ಅಧಿಕಾರಕ್ಕೆ ಯಾರೇ ಬರಲಿ ಅವರನ್ನು ಪ್ರಶ್ನಿಸುವಂತೆ ಉತ್ತೇಜಿಸುವ ನನ್ನ ಅಭಿಯಾನ ಮುಂದುವರಿಯುತ್ತದೆ. ಆದರೆ, ಜೋಕರ್ ಗಳ ನಿಜವಾದ ಬಣ್ಣ ಬಯಲಾಗುವುದನ್ನು ನೋಡುತ್ತಿರಿ. ಸಂತೋಷವಾಗಿ ವೀಕ್ಷಿಸಿ.












Click it and Unblock the Notifications